ಬಾಗಲಕೋಟೆ/ ಹುನಗುಂದ:
ಎಲ್ಲರನ್ನೂ ಒಳಗೊಳ್ಳುವಿಕೆಗೆ ಸೆಳೆದುಕೊಳ್ಳುವ ಶಕ್ತಿ ಸಾಹಿತ್ಯಕ್ಕಿದ್ದು ಅದು ಸೀಮಾತೀತವಾದುದು
ಎಂದು ಹಡಲಗೇರಿ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಶರಣು ಪಾಟೀಲ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಂಗಮ ಪ್ರತಿಷ್ಠಾನ, ಸಾಹಿತ್ಯ ಸಮಾವೇಶ, ಕನ್ನಡ ಲೇಖಕರ ಪರಿಷತ್ತು, ಸಾರಂಗಮಠ ಸಾಹಿತ್ಯ ಪ್ರತಿಷ್ಠಾನ ಹುನಗುಂದ ಹಾಗೂ ಎಸ್.ಆರ್.ಕೆ.ಪ್ರತಿಷ್ಠಾನ ಇಲಕಲ್ ಸಹಯೋಗದಲ್ಲಿ ನಡೆದ ‘ಸಂಗಮ ಸಾಹಿತ್ಯ ಸಂಭ್ರಮ-2025’ನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡದ ಮೇಲೆ ಪಾಶ್ಚಾತ್ಯ ಭಾಷೆಗಳು ಪ್ರಭಾವ ಬೀರಿರುವುದರಿಂದ ಮತ್ತು ವಿಮರ್ಶೆಯ ನೆಲೆಗಳು ವಿಸ್ತರಿಸಿರುವುದರಿಂದ ಪ್ರಯೋಗಶೀಲತೆಯ ಪರಿಣಾಮವಾಗಿ ಕನ್ನಡ ಭಾಷೆ ತನ್ನ ಗಟ್ಟಿತನವನ್ನು ಹೆಚ್ಟಿಸಿಕೊಂಡಿದೆ ಎಂದರು.
ನಾಲ್ಕು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಹಿರಿಯ ಲೇಖಕ ಲಕ್ಷ್ಮಣ ಬಾದಾಮಿಯವರು ಒಂದು ಸಾಹಿತ್ಯ ಕೃತಿ ಬಹುಕಾಲ ಜನಮಾನಸದಲ್ಲಿ ಬಹುಕಾಲ ನಿಲ್ಲವಂತಾದಾಗ ಮಾತ್ರ ಅದರ ಸಾರ್ಥಕತೆ ಹೆಚ್ಚಾಗಲು ಸಾಧ್ಯ. ಹುನಗುಂದ ಸದಾ ಸಾಹಿತ್ಯಿಕ ಚಟುವಟಿಕೆಗಳನ್ನು ಜೀವಂತವಾಗಿಸಿಕೊಂಡ ಊರಾಗಿದ್ದು ಇಲ್ಲಿನ ಲೇಖಕರ ಪ್ರಯೋಗಶೀಲತೆ ಮಾದರಿಯಾದುದು ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಅಮರೇಶ್ವರ ದೇವರು ” ಬರೆಯುವ, ಓದುವ ಪ್ರವೃತ್ತಿಯಿಂದ ವಿಮುಖವಾಗುತ್ತಿರುವ ಸಂದರ್ಭದಲ್ಲಿ ಓದುವ ಸಂಸ್ಕೃತಿಯನ್ನು ಹೆಚ್ಚಿಸುವುದಕ್ಕೆ ಇಂತಹ ಕಾರ್ಯಕ್ರಮಗಳು ಸಹಾಯವಾಗುತ್ತವೆ ” ಎಂದರು.
ಇದೇ ಸಂದರ್ಭದಲ್ಲಿ ಸಂಗಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಸುಜಾತಾ ಚಲವಾದಿ, ಎಂ.ಡಿ.ಚಿತ್ತರಗಿ ಕಾವ್ಯ ಪ್ರಶಸ್ತಿ ಪುರಸ್ಕೃತರಾದ ದಾನೇಶ್ವರಿ ಸಾರಂಗಮಠ, ನಾಗರತ್ನ ಭಾವಿಕಟ್ಟಿ, ಜಗದೀಶ ಹಾದಿಮನಿ ವಿವಿಧ ಕ್ಷೇತ್ರದ ಸಾಧಕರು ಮತ್ತು ದಾನಿಗಳಾದ ಜೈನಸಾಬ ಹಗೇದಾಳ, ಜಗದೀಶ ಹದ್ಲಿ, ಮಹಾಂತೇಶ ತಾರಿವಾಳ ಇವರನ್ನು ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರ ಪರವಾಗಿ ಸುಜಾತಾ ಚಲವಾದಿ, ಎಂ.ಡಿ.ಚಿತ್ತರಗಿ, ದಾನೇಶ್ವರಿ ಸಾರಂಗಮಠ ಮಾತನಾಡಿದರು.
ಪ್ರಾಚಾರ್ಯ ಶರಣಪ್ಪ ಹೂಲಗೇರಿ, ಸಿದ್ದಲಿಂಪ್ಪ ಬೀಳಗಿ ವೇದಿಕೆಯಲ್ಲಿದ್ದರು
ಡಾ.ಎಂ.ಬಿ.ಒಂಟಿ ಸ್ವಾಗತಿಸಿದರು. ಸಮಾವೇಶ ಸಂಚಾಲಕ ಎಸ್ಕೆ ಕೊನೆಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಎಚ್.ನಾಯಕ ನಿರೂಪಿಸಿದರು. ವೀರಭದ್ರಯ್ಯ ಶಶಿಮಠ ವಂದಿಸಿದರು.
- ಕರುನಾಡ ಕಂದ ಪತ್ರಿಕೆ



















