ಚಂಗಡಿ ಗ್ರಾಮವನ್ನು ಸ್ಥಳಾಂತರಿಸುವ ಕುರಿತು ಗ್ರಾಮಸ್ಥರು ಪುನರ್ವಸತಿಗೆ ಎಲ್ಲಾ ರೀತಿಯಲ್ಲಿಯೂ ಸಹಮತವನ್ನು ವ್ಯಕ್ತಪಡಿಸಿದರೆ ಮಾತ್ರ ಈ ಗ್ರಾಮವನ್ನು ಸ್ಥಳಾಂತರಪಡಿಸುವುದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಶಾಸಕ ಎಂ. ಆರ್. ಮಂಜುನಾಥ್.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾಡಂಚಿನ ಚಂಗಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಕುಂದು ಕೊರತೆ ಆಲಿಸಿ ನಂತರ ಮಾತನಾಡಿದ ಅವರು ಚಂಗಡಿ ಗ್ರಾಮದ ಜನರಿಗೆ ತಮಗೆ ಸರ್ಕಾರದಿಂದ ಬದಲಿ ಜಾಗವನ್ನು ಈಗಾಗಲೇ ಗುರುತು ಮಾಡಿದ್ದು ಚಂಗಡಿ ಗ್ರಾಮವು ಸುಮಾರು 485 ಎಕರೆಷ್ಟು ವಿಸ್ತೀರ್ಣ ಹೊಂದಿದ್ದು ಈ ಸಂಬಂಧ ಪುನರ್ವಸತಿಯಾದರೆ ಕಾನೂನು ಬದ್ಧವಾಗಿ ನಿಮಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಭರವಸೆಯನ್ನು ನೀಡಲಾಗುವುದು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದಿರುವ ಚಂಗಡಿ ಗ್ರಾಮದ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಚಂಗಡಿ ಗ್ರಾಮವನ್ನು ಸ್ಥಳಾಂತರ ಪಡಿಸುವ ವಿಚಾರವಾಗಿ ಗ್ರಾಮಸ್ಥರ ಜೊತೆ ಸಮಾಲೋಚನೆ ನಡೆಸಲು ಬಂದಿದ್ದೇನೆ. ಈ ಕಾಡಂಚಿನ ಭಾಗದಲ್ಲಿ ವಾಸವಿರುವುದರಿಂದ ಮೂಲಭೂತ ಸೌಕರ್ಯಗಳು ಕೊರತೆ ಹೆಚ್ಚಾಗಿದ್ದು ನಿಮಗೆ ಕಾಡು ಪ್ರಾಣಿಗಳ ಹಾವಳಿಯಿಂದ ತೀರ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ಇದಕ್ಕೆ ಪರ್ಯಾಯವಾಗಿ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆ ಹಾಗೂ ಸಂಬಂಧಿತ ಇನ್ನಿತರೆ ಇಲಾಖೆ ಹಿರಿಯ ಅಧಿಕಾರಿಗಳೋಡನೆ ಮತ್ತೊಂದು ಬಾರಿ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಸಾಮೂಹಿಕ ನಾಯಕತ್ವದ ನಾಯಕ ಹೊನ್ನೂರು ಪ್ರಕಾಶ್ ಮಾತನಾಡಿ ಈ ಹಿಂದೆ ತಮ್ಮ ಗ್ರಾಮಸ್ಥರೆಲ್ಲರ ಅಭಿಪ್ರಾಯದೊಂದಿಗೆ ಸ್ಥಳ ಪರಿಶೀಲನೆ ಮಾಡಿ ಎಲ್ಲರೂ ಒಪ್ಪಿಗೆ ಪಡೆದು ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದವು. ಆದರೆ ತದ ನಂತರ ಕೆಲವು ಕಾರಣಾಂತರಗಳಿಂದ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ.
ಇದೀಗ ಶಾಸಕರಾದ ಎಂ. ಆರ್. ಮಂಜುನಾಥ್ ರವರು ಚಂಗಡಿ ಗ್ರಾಮವನ್ನು ಸ್ಥಳಾಂತರ ಕುರಿತು ಕ್ರಮ ವಹಿಸುತ್ತೇವೆ ಎಂದು ಹೇಳಿದ್ದು ನಮಗೆ ತೃಪ್ತಿಕರವಾಗಿದೆ. ಮಂಜುನಾಥ್ ರವರು ಹೇಳಿದಂತಹ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ ಅದನ್ನು ನಾವು ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ ಅದರಂತೆ ಈ ಕೆಲಸ ಕೂಡ ಆಗುತ್ತದೆ ಎಂದು ನಂಬಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಹಸಿರು ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಅಮೋಘ, ಜಿಲ್ಲಾಧ್ಯಕ್ಷ ಶಾಂತ್ ಕುಮಾರ್, ಕುರಟ್ಟಿ ಹೊಸೂರು ಮಾಜಿ ಗ್ರಾಂ. ಪಂ ಅಧ್ಯಕ್ಷ ಮುನಿಸಿದ್ದ, ರೈತ ಮುಖಂಡ ಕರಿಯಪ್ಪ, ದಂಟಳ್ಳಿ, ಕುರಟ್ಟಿ ಹೊಸೂರು ಗ್ರಾಮದ ಗ್ರಾಮಸ್ಥರು, ಪೊನ್ನಚ್ಚಿ, ಭದ್ರಯ್ಯನ ಹಳ್ಳಿ ಹಾಗೂ ಇತರೆ ಗ್ರಾಮಸ್ಥರು ಇದ್ದರು.
ವರದಿ ಉಸ್ಮಾನ್ ಖಾನ್




















