ಬೆಳಗಾವಿ/ ಬೈಲಹೊಂಗಲ: ಐತಿಹಾಸಿಕ ದೆಹಲಿ ಕೆಂಪುಕೊಟೆ ಹತ್ತಿರ ಭಯೋತ್ಪಾದಕ ಕೃತ್ಯದಲ್ಲಿ ನಡೆದ ಸ್ಫೋಟವನ್ನು ಇಡೀ ದೇಶವೆ ಖಂಡಿಸುತ್ತಿದೆ. ಆದರೆ, ನಮ್ಮ ರಾಜ್ಯದ ಕೆಲವರು ಆಕಸ್ಮಿಕವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಉಗ್ರರನ್ನು ಖಂಡಿಸುವುದನ್ನು ಬಿಟ್ಟು ಪ್ರಧಾನಿ ಮತ್ತು ಗೃಹ ಸಚಿವರನ್ನು ಟೀಕೆ ಮಾಡುವುದರೊಂದಿಗೆ ರಾಜಕೀಯ ಬಣ್ಣ ಬಳಿಯಲು ಹೊರಟಿರುವುದು ನಾಚಿಕೆಗೇಡಿತನ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್. ಎಸ್. ಸಿದ್ದನಗೌಡರ ಹೇಳಿದ್ದಾರೆ.
ಬುಧವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಯಾವ ಭಯೋತ್ಪಾದಕತೆ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರನ್ನು ಬಲಿ ಪಡೆಯಿತೋ, ಅಂಥ ಭಯೋತ್ಪಾದಕತೆಯನ್ನು ಖಂಡಿಸುವ ಗಟ್ಟಿತನ ತೊರೆದ ಕಾಂಗ್ರೆಸ್ ಪಕ್ಷದ ನಾಯಕರ ನಡೆ ಖಂಡನೀಯ. ಭಯೋತ್ಪಾದಕ ಕೃತ್ಯ ನಡೆದಾಗಲೆಲ್ಲಾ ಕಾಂಗ್ರೆಸ್ ಪಕ್ಷವು ಮೃದು ಧೋರಣೆ ತೋರಿಸುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಘಟನೆಯನ್ನು ಚುನಾವಣೆಗಳೊಂದಿಗೆ ಜೋಡಣೆ ಮಾಡಿ ಮಾತನಾಡಿರುವುದು ಶಾಸಕ ಈಶ್ವರ ಪ್ರದೀಪ್ ರಾಷ್ಟ್ರೀಯ ಭದ್ರತಾ ಪಡೆಗಳ ಗುಪ್ತದಳವನ್ನೆ ಟೀಕಿಸುವುದು ಇವರ ಬಾಯಚಪಲವಾಗಿದೆ. ವೈಟ್ ಕಾಲರ್ ಉಗ್ರವಾದದಲ್ಲಿ ತೊಡಗಿರುವ ಕೆಲವರು ಮಾಡಬಾರದ್ದನ್ನು ಮಾಡುವಂಥ ಕೃತ್ಯಕ್ಕೆ ಕೈ ಹಾಕಿದವರನ್ನು ಮಟ್ಟಹಾಕಲು ಕೇಂದ್ರದ ಪಡೆಗಳು ಕಾರ್ಯೋನ್ಮುಖವಾಗಿವೆ ಉಗ್ರರ ಕೃತ್ಯವನ್ನು ತಪ್ಪಿಸಲು ನಮ್ಮ ಎನ್ಐಎ ತಕ್ಷಣವೇ ಇಂತವರನ್ನು ಪತ್ತೆಹಚ್ಚಿ ಬಂಧಿಸಿದ್ದು, ಇದು ಭಾರತದ ತಾಕತ್ತು ಎಂದರು.
ಎನ್ಐಎ ತಂಡವು ಆರೋಪಿಗಳನ್ನು ಬಂಧಿಸಲು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಸ್ವತಂತ್ರತೆಯೆ ಕಾರಣ. ಕಾಂಗ್ರೆಸ್ ಭಯೋತ್ಪಾದನೆ ಕೃತ್ಯಗಳಲ್ಲಿ ತನ್ನ ನೀತಿಗಳನ್ನು ಬದಲಿಸಿಕೊಳ್ಳದೇ ಇದ್ದಲ್ಲಿ ಅಧಃ ಪತನ ಖಚಿತ ಎಂದು ತಿಳಿಸಿದ್ದಾರೆ.
ವರದಿ ಮಂಜು .ಎಂ. ಚಿಕ್ಕಣ್ಣವರ



















