
ಯಾದಗಿರಿ/ಗುರುಮಠಕಲ್: ನ. 17 ಸರಕಾರಿ ನೌಕರರ ಸಂಘ ಹಾಗೂ ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಶಿಬಿರ ತಪಾಸಣಾ ಶಿಬಿರ ಜರುಗಿತು.
ಎಲ್ಲರಿಗೂ ಆರೋಗ್ಯ ಎಲ್ಲೆಡೆ ಆರೋಗ್ಯ ಎನ್ನುವ ಸರಕಾರದ ಯೋಜನೆ ಲಾಭ ಪಡೆಯಿರಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದರಿಂದ ಮುಂಬರುವ ಖಾಯಿಲೆಗಳ ವಿರುದ್ದ ಮುಂಜಾಗ್ರತೆ ವಹಿಸಬಹುದು, ಯೋಗ, ವ್ಯಾಯಾಮ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಮಹೇಶ್ ಬಿರಾದಾರ ತಿಳಿಸಿದರು.
ತದ ನಂತರ ಮಾತನಾಡಿದ ತಾಲೂಕಿನ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ ನೀರೆಟಿ ನೌಕರರ ಸಂಘ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ನಮ್ಮ ಭಾಗದ ಬಡತನ ರೇಖೆಗಿಂತ ಕಡಿಮೆ ಇರುವ ಎಲ್ಲರಿಗೂ ಸರಕಾರದ ಯೋಜನೆಗಳಾದ ಆಯುಷ್ಮಾನ ಭಾರತ, ಆರೋಗ್ಯ ಕರ್ನಾಟಕ ಅಡಿಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ನೀಡಲಾಗುವದು ಕಳೆದ ವರ್ಷ ಆಯೋಜಿಸಿದ್ದ ಶಿಬಿರದಲ್ಲಿ 258 ಜನ ತಪಾಸಣೆಗೆ ಒಳಪಟ್ಟು ಯಶಸ್ವಿಯಾಗಿ 12 ಜನ ಉಚಿತ ಶಸ್ತ್ರಚಿಕಿತ್ಸೆ ಪಡೆದಿದ್ದಾರೆ, ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಂಡು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಶ್ ಸಜ್ಜನ ಮಾತನಾಡಿ ಬೆಂಗಳೂರಿನ ಪ್ರತಿಷ್ಠಿತ ವೈದೇಹಿ ಆಸ್ಪತ್ರೆ ಸರಕಾರದ ಸಹಯೋಗದಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು, ಹೃದ್ರೋಗ, ನರ ರೋಗ, ಮೂತ್ರ ಪಿಂಡ, ಸುಟ್ಟ ಗಾಯ, ಕ್ಯಾನ್ಸರ್ ನಂತಹ ಮಹಾಮರಿ ರೋಗಗಳಿಗೂ ಚಿಕಿತ್ಸೆ ಹಾಗೂ ಔಷಧಿ ನೀಡಲಾಗುತ್ತಿದೆ ಎಂದು ಹೇಳಿದರು.
ಶಿಬಿರದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಉಚಿತ ಎಕೋ, ಇ.ಸಿ.ಜಿ, ಬಿಪಿ ಮತ್ತು ಶುಗರ್ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಹನಮಂತ ರೆಡ್ಡಿ, ವೈದೇಹಿ ಆಸ್ಪತ್ರೆಯ ವೈದ್ಯರು, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಭಾಗಿಯಾದರು.
ವರದಿ: ಜಗದೀಶ್ ಕುಮಾರ್ ಭೂಮಾ



















