
ಬೆಳಗಾವಿ :ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಅಥಣಿ ತಾಲೂಕಿನ ಸುಪ್ರಸಿದ್ಧ ಕೊಕಟನೂರ ಗ್ರಾಮದ ಶ್ರೀ ಎಲ್ಲಮ್ಮ ದೇವಿ ಜಾತ್ರೆಯು ಭಕ್ತಿ–ಭಾವ, ಸಂಭ್ರಮ ಮತ್ತು ಸಂಪ್ರದಾಯಗಳ ಸಂಗಮವಾಗಿ ವಿಜೃಂಭಣೆಯಿಂದ ಜರಗುತ್ತಿದ್ದು ಜಾತ್ರೆಯ ನಾಲ್ಕನೇ ದಿನದ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅಗ್ನಿ ಹಾಯುವ ಪವಿತ್ರ ಕಾರ್ಯಕ್ರಮ ಅತ್ಯಂತ ಭಕ್ತಿಭಾವದಿಂದ ನೆರವೇರಿತು.
ಬೆಳಗಿನ ಜಾವ 5 ಗಂಟೆಗೆ ದೇವಿಯ ಜಗದ ಮನೆಯಿಂದ ಶ್ರೀ ಎಲ್ಲಮ್ಮ ದೇವಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಅಲಂಕರಿಸಿ ಭವ್ಯ ಮೆರವಣಿಯ ಮೂಲಕ ಜೋಗುಳ ಬಾವಿಯ ಸತ್ಯವಾನ ದೇವಸ್ಥಾನಕ್ಕೆ ಕರೆ ತರಲಾಯಿತು. ಅಲ್ಲಿ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿದ ನಂತರ ಮೆರವಣಿಯು ದೇಸಾಯಿ ವಾಡೆಗೆ ತಲುಪಿತು. ದೇಸಾಯಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ದೇವಿಯ ಮೂರ್ತಿಗೆ ಪೂಜೆ ಸಲ್ಲಿಸಿ, ಉಡಿ ತುಂಬುವ ಸಂಪ್ರದಾಯವನ್ನು ಭಕ್ತಿಭಾವದಿಂದ ನೆರವೇರಿಸಿದರು.
ನಂತರ ದೇವಿಯ ಮೂರ್ತಿಯನ್ನು ಅರ್ಚಕರ ಮನೆಗೆ ಕರೆತರಲಾಗಿದ್ದು, ಪೂಜಾ ವಿಧಿವಿಧಾನಗಳ ಬಳಿಕ ಎಲ್ಲಮ್ಮ ದೇವಿ ದೇವಸ್ಥಾನಕ್ಕೆ ಮೆರವಣಿಯ ಮೂಲಕ ಆಗಮಿಸಲಾಯಿತು. ದೇವಾಲಯದಲ್ಲಿ ದೇವಿಗೆ ಅಭಿಷೇಕ, ವಿಶೇಷ ಪೂಜೆಗಳು ಸಂಪ್ರದಾಯಬದ್ಧವಾಗಿ ನೆರವೇರಿದವು.
ಪ್ರತಿವರ್ಷದಂತೆ ಈ ಬಾರಿ ಕೂಡ ಎಲ್ಲಮ್ಮ ದೇವಿ ಜಾತ್ರೆಯು ಪಾರಂಪರಿಕ ಧಾರ್ಮಿಕ ಆಚರಣೆಗಳೊಂದಿಗೆ ಶಿಸ್ತಿನಿಂದ, ಭಕ್ತಿ ಮತ್ತು ಸಂಭ್ರಮದೊಂದಿಗೆ ಆಚರಿಸಲಾಯಿತು. ಕರ್ನಾಟಕ ಮಾತ್ರವಲ್ಲದೆ ಪಕ್ಕದ ಮಹಾರಾಷ್ಟ್ರ ರಾಜ್ಯದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ಐತಿಹಾಸಿಕ ಧಾರ್ಮಿಕ ಪರಂಪರೆಯನ್ನು ಪೀಳಿಗೆಗಳಿಂದ ಮುಂದುವರಿಸಿಕೊಂಡು ಹೋಗುತ್ತಿರುವ ದೃಶ್ಯವು ಜಾತ್ರೆಯಲ್ಲಿ ವಿಶೇಷವಾಗಿ ಮನಸೆಳೆದಿತು.
ಜಾತ್ರಾ ಮಹೋತ್ಸವದಲ್ಲಿ ಶಾಮರಾವ್ ಪೂಜಾರಿ, ಅರ್ಜುನ್ ಪೂಜಾರಿ, ಪ್ರಭಾಕರ್ ಚೌಹಾನ್, ಬಾಳ ಸಾಹೇಬ್ ಪೂಜಾರಿ, ಬಾಪು ಗೌಡ ಬುಲ್ಗೌಡ, ಮಹಾದೇವ ಚೌಹಾನ್, ಅಪ್ಪು ನಾಯಕ್, ಧ್ರುವರಾಜ ಚೌಹಾನ್, ಪ್ರವೀಣ್ ಪಾಠನಕರ್, ಸೋನಕರ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ



















