“ಈಗಲೂ ನಾನೇ ಸಿಎಂ, ಮುಂದೆಯೂ ನಾನೇ” – ಸಿದ್ದರಾಮಯ್ಯ ಖಡಕ್ ಘೋಷಣೆ
ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಯ ನಡುವೆ ವಿಧಾನಸಭೆ ರಾಜಕೀಯ ತಾಪಕ್ಕೆ ತಲುಪಿತು. ಕಾಂಗ್ರೆಸ್ನೊಳಗಿನ ಕುರ್ಚಿ ಕದನದ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಕಾಲೆಳೆದ ಮಾತುಗಳು ಸದನದಲ್ಲಿ ಸ್ವಾರಸ್ಯಕರ ವಾಗ್ವಾದಕ್ಕೆ ಕಾರಣವಾಯಿತು.
ಕಳೆದ ನಾಲ್ಕು ದಿನಗಳಿಂದ ನೀವು ಬಳಲಿದ್ದೀರಾ? ರಾಜಕೀಯ ನಿಶ್ಯಕ್ತಿ ಬಂದಿದೆ ಅಂದುಕೊಂಡಿದ್ದೆವು ಎಂದು ಆರ್. ಅಶೋಕ್ ವ್ಯಂಗ್ಯವಾಡಿದಾಗ, ಸಿಎಂ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು ನೀಡಿದರು.
“ನನಗೆ ರಾಜಕೀಯ ನಿಶ್ಯಕ್ತಿ ಎಂದೇ ಇಲ್ಲ. ಅಂಥ ಪರಿಸ್ಥಿತಿ ಸೃಷ್ಟಿಯಾಗುವುದೇ ಇಲ್ಲ. ರಾಜಕೀಯವನ್ನು ತಲೆಕೆಡಿಸಿಕೊಂಡು ಮಾಡುವ ಅವಶ್ಯಕತೆಯೂ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಇನ್ನೂ ಅಧಿವೇಶನದ ಕೊನೆಯ ದಿನ ಕುರ್ಚಿ ಕದನದ ವಿಚಾರಕ್ಕೆ ಸಿ.ಎಂ ಸ್ಪಷ್ಟ ಬ್ರೇಕ್ ಹಾಕಿದರು.
“ಎರಡೂವರೆ ವರ್ಷ ಮುಖ್ಯಮಂತ್ರಿ ಎನ್ನುವ ಯಾವುದೇ ತೀರ್ಮಾನ ಆಗಿಲ್ಲ. ಶಾಸಕರು ಐದು ವರ್ಷಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ಫುಲ್ ಟರ್ಮ್ ಮುಖ್ಯಮಂತ್ರಿ” ಎಂದು ಘೋಷಿಸಿದರು.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಚರ್ಚೆಗೆ ಉತ್ತರಿಸುವ ವೇಳೆ ಬಿಜೆಪಿ ಸದಸ್ಯರ ಕಾಲೆಳೆಯುವ ಮಾತುಗಳನ್ನೇ ಅಸ್ತ್ರವಾಗಿ ಮಾಡಿಕೊಂಡ ಸಿದ್ದರಾಮಯ್ಯ, ಪಕ್ಷದೊಳಗಿನ ವಿರೋಧಿಗಳಿಗೂ ಸ್ಪಷ್ಟ ಸಂದೇಶ ರವಾನಿಸಿದರು.
“ಎರಡೂವರೆ ವರ್ಷ ಅಂತ ಹೇಳೇ ಇಲ್ಲ. ಆ ತೀರ್ಮಾನ ಆಗಿಲ್ಲ. ಈಗಲೂ ನಾನೇ ಮುಖ್ಯಮಂತ್ರಿ, ಮುಂದೆಯೂ ನಾನೇ. ಹೈಕಮಾಂಡ್ ಹೇಳುವವರೆಗೂ ನಾನೇ ಸಿ.ಎಂ” ಎಂದು ಆತ್ಮವಿಶ್ವಾಸದ ಹೇಳಿಕೆ ನೀಡಿದರು.
“ದೈಹಿಕ ನಿಶ್ಯಕ್ತಿ ಇರಬಹುದು, ಆದರೆ ರಾಜಕೀಯ ನಿಶ್ಯಕ್ತಿ ಎಂದೇ ಇಲ್ಲ – ಹಿಂದೆ ಇರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಇರೋದಿಲ್ಲ. ಜನರ ಆಶೀರ್ವಾದವೇ ಅಧಿಕಾರಕ್ಕೆ ಮೂಲ. ನಾನು ಹಣೆಬರಹದಲ್ಲಿ ನಂಬಿಕೆ ಇಡುವವನಲ್ಲ” ಎಂದು ಹೇಳಿದ ಸಿಎಂ,
“ನಮಗೆ ನಿರ್ದೇಶನ ಕೊಡುವವರು ಯಾರೂ ಇಲ್ಲ. ನಾವೇ ನಿರ್ದೇಶಕರು, ನಾವೇ ಪ್ರೊಡ್ಯೂಸರ್, ನಾವೇ ಆ್ಯಕ್ಟರ್ಗಳು” ಎಂದು ಅಧಿಕಾರ ಹಂಚಿಕೆ ಚರ್ಚೆಗೆ ತೆರೆ ಎಳೆದರು.
ವರದಿ. ವಿಠ್ಠಲ ಖೋಕಾಟೆ




















