ಬೀದರ್, ಡಿಸೆಂಬರ್ 20, 2025 – ಲರ್ನಿಂಗ್ ಲಿಂಕ್ಸ್ ಫೌಂಡೇಶನ್, ಶೆಲ್ ಎನ್ಎಕ್ಸ್ಪ್ಲೋರರ್ಸ್ ಮತ್ತು ನೀತಿ ಆಯೋಗದ (ಅಟಲ್ ಇನೋವೇಷನ್ ಮಿಷನ್) ಸಂಯುಕ್ತ ಆಶ್ರಯದಲ್ಲಿ ಹೋಟೆಲ್ ಶಿವ ಇಂಟರ್ನ್ಯಾಷನಲ್ ಬೀದರ್ ನಲ್ಲಿ ಶಿಕ್ಷಕರಿಗಾಗಿ ವೃತ್ತಿಪರ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ತರಬೇತಿಯಲ್ಲಿ 19 ಅಟಲ್ ಟಿಂಕರಿಂಗ್ ಲ್ಯಾಬ್ಗಳಿಂದ ಬಂದ 28 ಶಿಕ್ಷಕರಿಗೆ ತರಬೇತಿ ನೀಡಲಾಯಿತು. ಈ ತರಬೇತಿಯಲ್ಲಿ ಬೀದರ್ ಜಿಲ್ಲೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಸಮನ್ವಯಾಧಿಕಾರಿಗಳಾದ ಶ್ರೀ ಶರಣಪ್ಪ ಬಿರಾದಾರ ಭಾಗವಹಿಸಿ ಈ ಕಾರ್ಯಕ್ರಮದ ಉದ್ದೇಶ ಶಿಕ್ಷಕರ ಕೌಶಲ್ಯಗಳನ್ನು ಹೆಚ್ಚಿಸಿ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರ ಮತ್ತು ವಿಮರ್ಶಾತ್ಮಕ ಚಿಂತನೆ ಸಾಮರ್ಥ್ಯವನ್ನು ವೃದ್ಧಿಸುವುದಾಗಿದೆ ಈ ತರಬೇತಿಯ ಸದುಪಯೋಗ ಪಡೆದುಕೊಂಡು ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರಣಾ ಶಕ್ತಿಯನ್ನು ತುಂಬಿ ಸೃಜನಾತ್ಮಕ ಚಿಂತನೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜ್ಞಾನ ವೃದ್ಧಿಸಲು ಸಹಾಯಕವಾಗುವುದು ಎಂದರು.
ತರಬೇತಿ ಅಧಿವೇಶನಗಳ ಮೂಲಕ ಶಿಕ್ಷಕರು ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು ವೈಜ್ಞಾನಿಕ ವಿಧಾನಗಳನ್ನು ಕಲಿತರು. ಶಿಕ್ಷಕರಿಗೆ ವಿದ್ಯಾರ್ಥಿಗಳ ವಿಮರ್ಶಾತ್ಮಕ ಚಿಂತನೆ ಕೌಶಲ್ಯಗಳನ್ನು ಬೆಳಸಲು ಮಾರ್ಗದರ್ಶನ ನೀಡುವ ತಂತ್ರಗಳನ್ನು ಪರಿಚಯಿಸಲಾಯಿತು.
ತರಬೇತಿಯನ್ನು ಸಂವಾದಾತ್ಮಕ ಚರ್ಚೆಗಳು ಹಾಗೂ ಗುಂಪು ಚಟುವಟಿಕೆಗಳ ಆಧಾರದ ಮೇಲೆ ವಿನ್ಯಾಸಗೊಳಿಸಲಾಯಿತು. ಈ ಅಧಿವೇಶನಗಳ ಮೂಲಕ ಶಿಕ್ಷಕರು ತಂಡವಾಗಿ ಕಾರ್ಯನಿರ್ವಹಿಸುವ ಮಹತ್ವ, ಪರಸ್ಪರ ಮಾಹಿತಿ ವಿನಿಮಯ ಮತ್ತು ಉತ್ತಮ ಬೋಧನಾ ವಿಧಾನಗಳನ್ನು ಹಂಚಿಕೊಳ್ಳುವ ಅಗತ್ಯತೆಯನ್ನು ಅರ್ಥಮಾಡಿಕೊಂಡರು. ವಿಷಯಗಳನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ತಿಳಿಹೇಳಲು ಸಂವಹನ ತಂತ್ರಗಳು ಮತ್ತು ಗುಂಪು ಆಧಾರಿತ ವಿಧಾನಗಳನ್ನು ಹೇಗೆ ಬಳಸಬೇಕು ಎಂಬ ಜ್ಞಾನವನ್ನೂ ಅವರು ಗಳಿಸಿದರು.
ಶಿಕ್ಷಕರು ಟಿಂಕರಿಂಗ್ ಲ್ಯಾಬ್ಗಳನ್ನು ಬಳಸಿ ಸಕ್ರಿಯ, ಪರಿಣಾಮಕಾರಿ ಮತ್ತು ಚಟುವಟಿಕೆ ಆಧಾರಿತ ಕಲಿಕೆಯನ್ನು ಸೃಷ್ಟಿಸುವ ಮಾರ್ಗದರ್ಶನವನ್ನು ಪಡೆದರು. ಇಂತಹ ಕಲಿಕಾ ವಾತಾವರಣಗಳು ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಆವಿಷ್ಕಾರ ಕೌಶಲ್ಯಗಳನ್ನು ಬಲಪಡಿಸಲು ಹೇಗೆ ಸಹಾಯ ಮಾಡುತ್ತವೆ ಮತ್ತು ಅವರು ಕಲಿಕೆಯಲ್ಲಿ ಉತ್ಸಾಹ ಹಾಗೂ ತೊಡಗಿಸಿಕೊಂಡಿರಲು ಹೇಗೆ ಸಹಕಾರಿಯಾಗುತ್ತವೆ ಎಂಬುದರ ಅರಿವನ್ನೂ ಪಡೆದರು.
ಈ ತರಬೇತಿಯಲ್ಲಿ ಬೀದರ್ ಜಿಲ್ಲೆಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ATL ನೂಡಲ್ ಅಧಿಕಾರಿ, ಉಪನ್ಯಾಸಕರಾದ ಶ್ರೀಮತಿ ಗೀತಾ ಅವರು ಭಾಗವಹಿಸಿ ಶಿಕ್ಷಕರ ಕೌಶಲ್ಯವರ್ಧನೆಯತ್ತ ಮತ್ತು ಶಾಲೆಗಳಲ್ಲಿ ವಿಮರ್ಶಾತ್ಮಕ ಚಿಂತನೆ ಹಾಗೂ ಆವಿಷ್ಕಾರವನ್ನು ಉತ್ತೇಜಿಸುವತ್ತ ಈ ತರಬೇತಿ ಮಹತ್ವದ ಹೆಜ್ಜೆಯಾಗಿದ್ದು, STEM ಶಿಕ್ಷಣದಲ್ಲಿ ಆವಿಷ್ಕಾರವನ್ನು ಉತ್ತೇಜಿಸುವ ಮಹತ್ವದ ಮುಂದಾಳುವಿಕೆಯಾಗಿ ಪರಿಗಣಿಸಲಾಗಿದೆ ಎಂದು ವ್ಯಕ್ತ ಪಡಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯರಾದ ಶ್ರೀ ಚನ್ನಬಸವ ಹೆಡೆ ಭಾಗವಹಿಸಿ ಈ ಕಾರ್ಯಕ್ರಮವು ನಮ್ಮ ಜಿಲ್ಲೆಯಲ್ಲಿಯೂ ನಡೆಸುತ್ತಿರುವುದು ತುಂಬಾ ಸಂತೋಷದ ವಿಷಯ ನಮ್ಮ ಭಾಗದ ವಿದ್ಯಾರ್ಥಿಗಳು ಈ ತರಬೇತಿ ಪಡೆದ ಶಿಕ್ಷಕರ ಸಹಾಯದಿಂದ ವಿಜ್ಞಾನ, ತಂತ್ರಜ್ಞಾನ ವಿಷಯಗಳ ಹೆಚ್ಚಿನ ಜ್ಞಾನ ಪಡೆಯಲು ತುಂಬಾ ಸಹಕಾರಿಯಾಗಿದೆ ಎಂದು ಶ್ಲಾಘಿಸಿದರು.
ಲರ್ನಿಂಗ್ ಲಿಂಕ್ಸ್ ಫೌಂಡೇಶನ್, ಶೆಲ್ ಎನ್ಎಕ್ಸ್ಪ್ಲೋರರ್ಸ್ ನ ಶ್ರೀಕಾಂತ್ ಎಲ್ ರಾಜ್, ಭೀಮಾಶಂಕರ ಹಾಗು ಸುಮೀತ್ ಮೇಹ್ತ ತರಬೇತಿಯನ್ನು ನಿರ್ವಹಿಸಿದರು, ಈ ತರಬೇತಿಯನ್ನು ಆಯೋಜಿಸಿರುವುದರಿಂದ ಭಾಗವಹಿಸಿದ ಶಿಕ್ಷಕರು ಲರ್ನಿಂಗ್ ಲಿಂಕ್ಸ್ ಫೌಂಡೇಶನ್, ಶೆಲ್ ಎನ್ಎಕ್ಸ್ಪ್ಲೋರರ್ಸ್ ಮತ್ತು ನೀತಿ ಆಯೋಗದ (ಅಟಲ್ ಇನೋವೇಷನ್ ಮಿಷನ್) ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
- ಕರುನಾಡ ಕಂದ ಪತ್ರಿಕೆ.




















