ಸಿರುಗುಪ್ಪ: ರೋಗಿಗಳಿಗೆ ಉತ್ತಮವಾದ ಚಿಕಿತ್ಸೆಯನ್ನು ಕೊಡಲು ಉತ್ತಮವಾದ ಆಸ್ಪತ್ರೆಯ ಕಟ್ಟಡದ ಅವಶ್ಯಕತೆ ಇರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದ್ದು, ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದೆ ಎಂದು ಗ್ರಾ. ಪಂ. ಅಧ್ಯಕ್ಷೆ ಬಿ.ಎಂ. ಸುನಿತಾ ತಿಳಿಸಿದರು.
ತಾಲೂಕಿನ ಬಲಕುಂದಿ ಗ್ರಾಮದಲ್ಲಿ ಜಿ.ಪಂ. ಅನುದಾನ ರೂ.26 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆರ್ಯುವೇದ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ಗ್ರಾಮವು ಐತಿಹಾಸಿಕ ಮತ್ತು ಧಾರ್ಮಿಕವಾಗಿ ಪ್ರಸಿದ್ದಿಯನ್ನು ಹೊಂದಿದ್ದು, ಸಾವಿರಾರು ಭಕ್ತರು ನಮ್ಮೂರಿಗೆ ಬರುತ್ತಾರೆ. ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆರ್ಯುವೇದದ ವೈದ್ಯಕೀಯ ಚಿಕಿತ್ಸೆ ದೊರೆಯಬೇಕು. ಇದಕ್ಕಾಗಿ ಉತ್ತಮ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಉತ್ತಮ ಕಟ್ಟಡ ನಿರ್ಮಾಣ ಮಾಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗುವುದೆಂದು ಹೇಳಿದರು.
ಪಿ.ಡಿ.ಒ. ವೀರಪ್ಪ, ಜೆ.ಇ. ಶ್ರೀನಿವಾಸ, ವೈದ್ಯೆ ಡಿ.ಸುಜಾತ, ಮುಖಂಡ ರುದ್ರಮುನಿಸ್ವಾಮಿ ಮತ್ತು ಗ್ರಾಮಸ್ಥರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















