ಬೆಳಗಾವಿ/ ಬೈಲಹೊಂಗಲ: ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿ ರಾಷ್ಟ್ರಾದ್ಯಂತ ರೈತರ ಜಮೀನುಗಳಿಗೆ ರಸ್ತೆ ಮಾಡುವ ಗ್ರಾಮ ಸಡಕ್ ಯೋಜನೆಯ ರೂವಾರಿ ರೈತರಿಗೆ ಸ್ವಾಭಿಮಾನ ಬದುಕು ತೊರಿದ ಮಹಾನ್ ಚಿಂತಕ ಬಾಬಾಗೌಡ ಪಾಟೀಲರು ಎಂದು ಮಾಜಿ ಎಪಿಎಂಸಿ ಅಧ್ಯಕ್ಷ ಎಫ್. ಎಸ್. ಸಿದ್ದನಗೌಡರ ಹೇಳಿದರು.
ನಗರದ ಸಂಗೊಳ್ಳಿ ರಾಯಣ್ಣ ಉದ್ಯಾನವನದಲ್ಲಿ ಮಂಗಳವಾರ ಮಾಜಿ ಕೇಂದ್ರ ಸಚಿವ ರೈತನಾಯಕ ದಿ. ಬಾಬಾಗೌಡ ಪಾಟೀಲರ 81ನೇ ಜನ್ಮದಿನೋತ್ಸವದಲ್ಲಿ ಮಾತನಾಡಿ, ಕಿತ್ತೂರು ನಾಡು ವೀರರ ಜನ್ಮಸ್ಥಾನವಾಗಿದ್ದು ರೈತ ಕುಟುಂಬದಲ್ಲಿ ಜನಿಸಿ ರೈತ ಸಂಘಟನೆ ಹುಟ್ಟುಹಾಕಿ ಈ ನಾಡಿಗೆ ರೈತನೆ ನಿಜವಾದ ನಾಯಕ ಅವನ ಹೆಸರಿನಿಂದ ಸೇವೆ ಮಾಡುವ ಸೋಗಿನಲ್ಲಿ ಕೃಷಿಕರನ್ನು ಶೋಷಣೆ ಮಾಡುವ ಜನನಾಯಕರಿಗೆ ಮತ್ತು ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುವುದರೊಂದಿಗೆ ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ರೈತರು ಸರ್ಕಾರಿ ಕಛೇರಿಗಳಿಗೆ ಬಂದರೆ ಅವರಿಗೆ ಯೋಗ್ಯ ಸ್ಥಾನ ಕಲ್ಪಿಸಿದ್ದರು ಲೋಕಸಭೆಗೆ ಪ್ರಥಮ ಬಾರಿಗೆ ಆಯ್ಕೆಯಾಗಿ ಅಟಲ್ ಜಿಯವರ ಸರ್ಕಾರದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅವರ ಮಹತ್ವಾಕಾಂಕ್ಷೆಯ ಯೋಜನೆಗಳು ಇಂದಿಗೂ ಪ್ರಸ್ತುತವಾಗಿರುವದು ಶ್ಲಾಘನೀಯ ಎಂದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹುಂಬಿ, ರಾಜ್ಯಾಧ್ಯಕ್ಷ ಬೀರಪ್ಪ ದೇಶನೂರ ಮಾತನಾಡಿ, ರೈತರ ನಾಯಕರಾಗಿ ಹೊರಹೊಮ್ಮಿದ್ದ ಬಾಬಾಗೌಡರು ಕಿತ್ತೂರು ಹಾಗೂ ಧಾರವಾಡ ಗ್ರಾಮೀಣ ಮತಕ್ಷೇತ್ರದಲ್ಲಿ ರೈತರು ಬುತ್ತಿ ಕಟ್ಟಿಕೊಂಡು ಚುನಾವಣಾ ಪ್ರಚಾರ ಮಾಡಿ ಹಣ, ಹೆಂಡ, ತೋಳಬಲ ಹಾಗೂ ಯಾವುದೇ ರಾಜಕೀಯ ಹಿನ್ನಲೆಯ ಬೆಂಬಲವಿಲ್ಲದೆ ಏಕಕಾಲಕ್ಕೆ ಶಾಸಕರಾಗಿ ಆಯ್ಕೆಯಾಗಿ ರಾಜ್ಯದ ಗಮನ ಸೆಳದಿದ್ದ ಇವರು ರಾಜ್ಯಕ್ಕೆ ರೈತರ ಶಕ್ತಿಯನ್ನು ಅನಾವರಣ ಮಾಡಿದರು.
ರೈತ ನಾಯಕ ಶ್ರೀಕಾಂತ್ ಶಿರಹಟ್ಟಿ ಮಾತನಾಡಿ, ರೈತಪರ ಹೋರಾಟಗಾರ ಸಾಮಾಜಿಕ ಕಳಕಳಿಯಿಂದ ಮನೆ ಮಾತಾಗಿರುವ ಬಾಬಾಗೌಡರು ಜಾರಿಗೆ ತಂದಿರುವ ಗ್ರಾಮ ಸಡಕ್ ಯೋಜನೆಗೆ ಬಾಬಾಗೌಡ ಪಾಟೀಲ ಗ್ರಾಮ ಸಡಕ್ ಯೋಜನೆ ಎಂದು ನಾಮಕರಣ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಬಾಬಾಗೌಡ ಪಾಟೀಲರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಿದರು. ಅಣ್ಣಪ್ಪ ಗುಮತಿ, ಸುರೇಶ ವಾಲಿ, ಉಳವಪ್ಪ ಬಡ್ಡಿಮನಿ, ವಿಠಲ ಯಾಸಣ್ಣವರ, ಆನಂದಗೌಡ ಪಾಟೀಲ, ಅಪ್ಪಾಸಹೇಬ ಯಕ್ಕುಂಡಿ, ಶ್ರೀಶೈಲ ಬೊರಕನವರ, ಶಂಕರೆಪ್ಪ ಕಡಕೊಳ, ಶಂಕರಯ್ಯ ಕುಲಕರ್ಣಿ, ರಾಮನಗೌಡ ಪಾಟೀಲ, ಭೂಪಾಲ ಅಕ್ಕಿ, ಭೀಮಣ್ಣ ಹುದಲಿ, ನಾಗಪ್ಪ ಬಾಳೆಕುಂದರಗಿ, ಅಜ್ಜಪ್ಪ ಸಂಗೋಳ್ಳಿ, ರಾಘವೇಂದ್ರ ಶಿಗಿಹಳ್ಳಿ ಹಾಗೂ ಅನೇಕ ರೈತರು ಹಾಗೂ ರೈತ ಮಹಿಳೆಯರು ಇದ್ದರು.
ವರದಿ ಮಂಜು ಎಂ. ಚಿಕ್ಕಣ್ಣವರ



















