ಕಂಪ್ಲಿ ಸೇರಿದಂತೆ ನಾಡಿಗೆ ಗೊಗ್ಗ ಬಸಯ್ಯನವರ ಕೊಡುಗೆ ಅಪಾರವಾಗಿದೆ ಎಂದು ಹೊಸಪೇಟೆಯ ಸೋಮಸಮುದ್ರದ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಸಿದ್ಧಲಿಂಗ ಮಹಾಸ್ವಾಮಿ ಅಭಿಮತ ವ್ಯಕ್ತಪಡಿಸಿದರು.
ಸ್ಥಳೀಯ ಗೊಗ್ಗಬಸಯ್ಯ ಮಹಾದೇವಮ್ಮ ಸ್ಮಾರಕ ಮಂಗಲ ಭವನ (ಗುರುಮಠ)ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗೊಗ್ಗಬಸಯ್ಯನವರ ೪೨ನೇ ವಾರ್ಷಿಕ ಪುಣ್ಯಸ್ಮರಣೆ, ಉಜ್ಜಯಿನಿ ಸದ್ದರ್ಮ ಸಿಂಹಾನಸನಾಧೀಶ್ವರ 1008 ಹಾಗೂ ಸಿದ್ದಲಿಂಗ ಜಗದ್ಗುರುಗಳ 90ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ಗೊಗ್ಗಬಸಯ್ಯನವರ ಕಾಯಕ ನಿಷ್ಠೆ ಅತ್ಯಂತ ಶ್ರೇಷ್ಠವಾದುದ್ದು. ಅವರ ಆಧ್ಯಾತ್ಮಿಕ ಚಿಂತನೆ ಸೇರಿದಂತೆ ಆದರ್ಶಗಳು ಇಂದಿನ ಪೀಳಿಗೆಗೆ ಅವಶ್ಯಕವಾಗಿವೆ. ಸಮಾಜಕ್ಕೆ ಸನ್ಮಾರ್ಗದ ದಾರಿ ತೋರಿಸಿದ ಮಹಾನ್ ವ್ಯಕ್ತಿ. ಗೊಗ್ಗ ಮನೆತನದವರು ನಾಡಿನುದ್ದಕ್ಕೂ ಒಳ್ಳೆಯ ಸಂಸ್ಕೃತಿ, ಸಂಸ್ಕಾರಗಳನ್ನು ಬಿತ್ತಿದ್ದಾರೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆಧ್ಯಾತ್ಮಿಕ ವಿಚಾರಗಳನ್ನು ಆಲಿಸಿದರೆ, ಜೀವನವು ಸಮೃದ್ಧಿಯಿಂದ ಕೂಡಿರುವ ಜೊತೆಗೆ ಮನುಷ್ಯನಲ್ಲಿರುವ ಕೊಳೆಯನ್ನು ಸಹ ತೊಳೆಯಬಹುದಾಗಿದೆ ಎಂದರು.
ನಂತರ ಗೊಗ್ಗ ಚನ್ನಬಸವರಾಜ, ಗುರುಸಿದ್ದಯ್ಯ ನೇತೃತ್ವದಲ್ಲಿ 5 ಜನ ಶಾಲಾ ಮಕ್ಕಳಿಗೆ ಶಾಲಾ ಶುಲ್ಕದ ಸಹಾಯಧನದ ಚೆಕ್ ಅನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪಾಠಶಾಲೆಯ ನಿವೃತ್ತ ಪ್ರಾಚಾರ್ಯ ಶಶಿಧರ ಶಾಸ್ತ್ರಿ, ಗೊಗ್ಗ ಸಂಸ್ಥೆಯ ಗೊಗ್ಗ ಚನ್ನಬಸವರಾಜ, ಗುರುಸಿದ್ದಯ್ಯ, ಗೊಗ್ಗ ಕಾರ್ತಿಕ, ಮುಖಂಡರಾದ ಎ.ಶರಣಯ್ಯ, ಕೆ.ಎಂ.ಹೇಮಯ್ಯಸ್ವಾಮಿ, ರಾಜಣ್ಣ, ಘನಮಠಯ್ಯಸ್ವಾಮಿ, ಕೆ.ಗಂಗಾಧರಯ್ಯ, ಲೋಕನಾಥ ಜಗದೀಶ ಸೇರಿದಂತೆ ಮುಖಂಡರು, ಮಹಿಳೆಯರು, ಪಾಠಶಾಲೆಯ ಮಕ್ಕಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















