ಮದುವೆ ಎಂದರೆ ಕೇವಲ ಎರಡು ಹೃದಯಗಳ ಸಂಗಮವಲ್ಲ… ಎರಡು ಕುಟುಂಬಗಳ ಬಂಧನವೂ ಅಲ್ಲ…
ಅದು ಒಂದು ಹೊಸ ಜೀವನದ ಪ್ರಾರಂಭ. ಆದರೆ ಅಥಣಿಯಲ್ಲಿ ನಡೆದ ಈ ಮದುವೆ ಇನ್ನೊಂದು ಅರ್ಥವನ್ನು ಸಾರಿತು ಸಾಮಾಜಿಕ ಹೊಣೆಗಾರಿಕೆಯ ಪ್ರತಿಜ್ಞೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶ್ರೀ ಸಿದ್ದೇಶ್ವರ ದೇವಾಲಯದ ಸಭಾಂಗಣದಲ್ಲಿ, ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ವಾಗೆಶ್ ಕಾಡದೇವರಮಠ ಮತ್ತು ಕೋಮಲ್ ಹಿರೇಮಠ ಅವರ ವಿವಾಹ ಸಂಪ್ರದಾಯಬದ್ಧವಾಗಿ ನೆರವೇರಿತು. ಸಪ್ತಪದಿ ತುಳಿದು ಜೀವನ ಸಂಗಾತಿಗಳಾದ ಈ ನವಜೋಡಿ, ಮದುವೆಯ ಮಂಗಳ ವಾತಾವರಣದ ಮಧ್ಯೆ ಎಲ್ಲರ ಮುಂದೆಯೇ ಒಂದು ಮಹತ್ವದ ನಿರ್ಧಾರವನ್ನು ಘೋಷಿಸಿದರು.
“ಈ ದೇಹ ತ್ಯಾಗದ ನಂತರ ಕೊಳೆತು ಹೋಗುವ ಅಂಗಾಂಗಗಳು ಮತ್ತೊಬ್ಬರ ಜೀವನ ಉಳಿಸಲಿ” ಎಂಬ ಮಾನವೀಯ ಸಂದೇಶದೊಂದಿಗೆ ಅಂಗಾಂಗ ದಾನದ ಪ್ರತಿಜ್ಞೆ ಮಾಡಿದರು.
ಅಕ್ಷತೆ ಹಾಕಿ ಆಶೀರ್ವದಿಸಲು ಬಂದ ಬಂಧು-ಬಳಗ, ಗಣ್ಯರು ಹಾಗೂ ಪೂಜ್ಯರ ಸಮ್ಮುಖದಲ್ಲಿ ನಡೆದ ಈ ಘೋಷಣೆ ಮದುವೆಗೆ ಹೊಸ ಅರ್ಥ ನೀಡಿತು.
ಇದು ಕೇವಲ ವೈಯಕ್ತಿಕ ನಿರ್ಧಾರವಲ್ಲ , ಸಮಾಜಕ್ಕೆ ನೀಡಿದ ಒಂದು ಸ್ಪಷ್ಟ ಸಂದೇಶ.
ಮದುವೆಯ ಮಂಟಪವೇ ಜಾಗೃತಿ ವೇದಿಕೆ
ಸಂಭ್ರಮದ ನಡುವೆ ಮಾನವೀಯ ಮೌಲ್ಯಗಳ ಪ್ರಭಾವ ಮೆರೆದ ಈ ಮದುವೆ, ಅನೇಕ ಯುವಜನತೆಗೆ ಸ್ಪೂರ್ತಿಯಾಯಿತು.
ಮದುವೆಯ ವೇದಿಕೆಯನ್ನು ಸಾಮಾಜಿಕ ಜಾಗೃತಿಗೆ ಬಳಸಿದ ಈ ಜೋಡಿ, “ಜೀವನದಲ್ಲಿ ಜೊತೆಯಾಗಿ ಬದುಕುವುದಷ್ಟೇ ಅಲ್ಲ, ಮರಣಾನಂತರವೂ ಮತ್ತೊಬ್ಬರ ಬದುಕಿಗೆ ಬೆಳಕು ನೀಡೋಣ” ಎಂಬ ಸಂದೇಶ ಸಾರಿದರು.
ಸಮಾರಂಭದಲ್ಲಿ ಹಾಜರಿದ್ದ ಗಣ್ಯರು, “ಇದು ಕೇವಲ ಮದುವೆಯಲ್ಲ… ಸಮಾಜಮುಖಿ ಚಿಂತನೆಯ ಮಾದರಿ” ಎಂದು ಪ್ರಶಂಸಿಸಿದರು.
ಸಮಾಜಕ್ಕೆ ಮಾದರಿ ಅಂಗಾಂಗ ದಾನ ಎಂಬ ಮಹತ್ವದ ವಿಚಾರವನ್ನು ಮದುವೆಯಂತಹ ಪವಿತ್ರ ಕ್ಷಣದಲ್ಲಿ ಘೋಷಿಸುವ ಮೂಲಕ ಈ ನವಜೋಡಿ, ಅಥಣಿಯ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.
ಅವರ ಈ ನಿರ್ಧಾರ ಅಂಗಾಂಗ ದಾನ ಜಾಗೃತಿ ಆಂದೋಲನಕ್ಕೆ ಮತ್ತಷ್ಟು ಬಲ ನೀಡುವಂತಾಗಿದೆ.
ಒಟ್ಟಾರೆ, ಈ ಮದುವೆ ಕೇವಲ ಸಂಭ್ರಮವಲ್ಲ
ಮಾನವೀಯತೆ ಮೆರೆದ ಮಹತ್ವದ ಕ್ಷಣ.
ವರದಿ. ವಿಠ್ಠಲ ಖೋಕಾಟೆ



















