ಬಳ್ಳಾರಿ / ಕಂಪ್ಲಿ : ಪಟ್ಟಣದ ಕಲ್ಮಠದ ಶ್ರೀಪ್ರಭುಸ್ವಾಮಿಗಳ ಅನುದಾನಿತ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಂಗಳವಾರ ಹಮ್ಮಿಕೊಂಡಿದ್ದ ಲಿಂ. ಕಲ್ಗುಡಿ ಉಮೇಶ, ಮಹಾಂತಿನಮಠದ ಶ್ಯಾಮಲಮ್ಮ ಮಹಾಂತಿನಮಠದ ಗೌರಮ್ಮ ಹಾಗೂ ದಿ.ಎಂ.ಪಿ.ಪ್ರಕಾಶ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ನಡೆಯಿತು.
ಇಲ್ಲಿನ ಕಲ್ಮಠ ಶ್ರೀಪ್ರಭುಸ್ವಾಮಿಗಳ ಅನುದಾನಿತ ಪ್ರೌಢಶಾಲೆ ಶಿಕ್ಷಕಿ ರಾಜೇಶ್ವರಿ ‘ಶರಣ ಸಾಹಿತ್ಯ ಹಾಗೂ ಅಲ್ಲಮರ ವಿಚಾರಧಾರೆ’ ಕುರಿತು ಉಪನ್ಯಾಸ ನೀಡಿ, ಬಾಹ್ಯ ಆಚರಣೆಗಳು ಮತ್ತು ಮೂರ್ತಿ ಪೂಜೆಗಿಂತ ಅಂತರಂಗದ ಅನುಭವವೇ ಮುಖ್ಯವೆಂದು ಇವರು ಪ್ರತಿಪಾದಿಸಿದರು. “ನಾನೆಂಬುದು ಅಜ್ಞಾನ, ನೀನೆಂಬುದು ಮಾಯೆ” ಎನ್ನುವ ಮೂಲಕ ಅಹಂಕಾರದ ನಾಶವೇ ಮುಕ್ತಿ ಎಂದು ಸಾರಿದರು. 12ನೇಯ ಶತಮಾನದ ಮತ ಧರ್ಮ ಭಾಷೆ ಸಾಹಿತ್ಯ ಸಾಮಾಜಿಕ ಬದಲಾವಣೆಗಳಿಂದ ವಿಶೇಷ ಮಹತ್ವ ಪಡೆದಿದೆ. ಶರಣ ಭಾವದಿಂದ ಶಿವನನ್ನು ಆರಾಧಿಸಿ ಕೊನೆಯಲ್ಲಿ ಶಿವನೇ ಆಗುವ ಭಕ್ತರನ್ನು ಶಿವಶರಣರು ಎಂದು ಹೇಳಬಹುದು. ನಡನುಡಿಗಳಲ್ಲಿ ಒಂದಾಗಿಸಿಕೊಂಡು ವಿವೇಕ ಹೊಂದಿದವರನ್ನು ಶರಣರೆನ್ನಬಹುದು. ಶರಣರು ರಚಿಸಿದ ಗದ್ಯವಲ್ಲದ ಪದ್ಯವಲ್ಲದ ವಚನ ಸಾಹಿತ್ಯವನ್ನು ಶರಣ ಸಾಹಿತ್ಯ ಎಂದು ಕರೆಯಲಾಗಿದ್ದು, ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆಯಾಗಿದೆ. ವಚನ ಸಾಹಿತ್ಯ ಕರ್ನಾಟಕದಲ್ಲಿ ಉಗಮಗೊಂಡಿತು. ಶಿವಶರಣರು ಜಾತಿ ಲಿಂಗ ತಾರತಮ್ಯವನ್ನು ಖಂಡಿಸಿ ಸಾಮಾಜಿಕ ಸಮಾನತೆ ಹಾಗೂ ಭಕ್ತಿಯನ್ನು ಪ್ರತಿಪಾದಿಸಿದವರು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅಧ್ಯಕ್ಷತೆ ವಹಿಸಿದ್ದರು. ಶ್ರೀಗುರುಸಿದ್ದೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕ ರಾಘವೇಂದ್ರ, ದತ್ತಿ ದಾನಿ ಸುಮಂಗಳ ಮಹಾಂತಿನಮಠ, ಕಲ್ಗುಡಿ ವಿಜಯಕುಮಾರ್, ಕಸಾಪ ಪದಾಧಿಕಾರಿಗಳಾದ ಹಾದಿಮನಿ ಕಾಳಿಂಗವರ್ಧನ, ಅಶೋಕ ಕುಕನೂರು, ಜಿ.ಪ್ರಕಾಶ, ಆಕಾಶ ಮಹಾಂತಿನಮಠ, ಶಿಕ್ಷಕರಾದ ಲೋಕೇಶ್, ಬೀರಲಿಂಗೇಶ ಸೇರಿ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















