
ಬಳ್ಳಾರಿ / ಕಂಪ್ಲಿ : ಗೋಶಾಲೆಯಿಂದ ಸಮಾಧಾನ, ನೆಮ್ಮದಿ ದೊರಕುವ ಜೊತೆಗೆ ಜೀವನದ ಬದುಕು ಉತ್ತಮವಾಗಿರುತ್ತದೆ ಎಂದು ಸಂಸದ ಇ.ತುಕಾರಾಂ ಹೇಳಿದರು.
ತಾಲೂಕಿನ ದೇವಸಮುದ್ರ ಕ್ರಾಸ್ನ ಹೊರವಲಯದಲ್ಲಿರುವ ಕಲ್ಯಾಣಚೌಕಿಮಠದ ಕಾಮಧೇನು ಗೋಶಾಲಾ ಸೇವಾ ಟ್ರಸ್ಟಿನ ಗೋಶಾಲೆ, ಕಲ್ಯಾಣ ಕೃಷಿ ಆಶ್ರಮ, ಗುರುಕುಲ ಶಿಕ್ಷಣ ಉದ್ಘಾಟನಾ ನಿಮಿತ್ಯದ ಭಾನುವಾರದ ವಿಶೇಷ ಪೂಜೆ ಹಾಗೂ ಹೋಮ ಹವನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಲ್ಲಿನ ಸಾವಯವ ದವಸ-ಧಾನ್ಯ ಸೇರಿದಂತೆ ವಿವಿಧ ವಸ್ತು ಪ್ರದರ್ಶನ ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಬಾಲ್ಯದಿಂದಲೂ ವ್ಯವಸಾಯ ಮಾಡುತ್ತಾ, ಅತಿ ಹೆಚ್ಚಾಗಿ ಗೋಮಾತೆಯ ಪೂಜೆಯೊಂದಿಗೆ ನಮ್ಮ ದಿನನಿತ್ಯದ ಕಾರ್ಯ ಮಾಡಿಕೊಂಡು ಬರಲಾಗಿದೆ. ಗೋಶಾಲೆ, ಕಲ್ಯಾಣ ಕೃಷಿ ಆಶ್ರಮ, ಗುರುಕುಲ ಶಿಕ್ಷಣವೂ ಇಲ್ಲಿನ ಪವಿತ್ರ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಮನೆಯಲ್ಲಿ ಗೋವುಗಳು ಇದ್ದರೆ, ಆಕ್ಸಿಜನ್ ಕೊಡುತ್ತವೆ. ಇದರಿಂದ ರೋಗ ಹತ್ತಿರಕ್ಕೆ ಬರುವುದಿಲ್ಲ. ಈಗಾಗಲೇ ಸುಮಾರು 4600 ಕೋಟಿ ಅನುದಾನ ತಂದು, ವಿಜಯನಗರ ಒಳಗೊಂಡಂತೆ ಬಳ್ಳಾರಿಯ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಜಿಸಲಾಗಿದೆ. ಮತ್ತು ನಮ್ಮ 5 ಕೋಟಿ ಅನುದಾನದಲ್ಲಿ ಅಂಗವಿಕಲಚೇತನರಿಗೆ ಸೌಲಭ್ಯ ಹಾಗೂ ಡಿಜಿಟಲ್ ಗ್ರಂಥಾಲಯ ಸೇರಿದಂತೆ ನಾನಾ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಜನತೆಗೆ ಪ್ರತಿಯೊಂದು ವಿವಿಧ ಸೌಲಭ್ಯಗಳನ್ನು ಒದಗಿಸುವ ದೃಷ್ಠಿಕೋನ ನಮ್ಮದಾಗಿದೆ. ರೈಲ್ವೆಗೆ ಸಂಬಂಧಿಸಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ನಂತರ ಶ್ರೀಕಲ್ಯಾಣಚೌಕಿ ಮಠ ಕಾಮಧೇನು ಗೋಶಾಲಾ ಸೇವಾ ಟ್ರಸ್ಟ್ ಸಂಸ್ಥಾಪಕ ಕೆ.ಎಂ.ಬಸವರಾಜ ಸ್ವಾಮಿಯವರು ಸಂಸದ ತುಕಾರಾಂ ಇವರಿಗೆ ಸನ್ಮಾನಿಸಿ ಗೌರವಿಸಿದರು.
ಇಲ್ಲಿನ ಸಾವಯವ ದವಸ-ಧಾನ್ಯ ಸೇರಿದಂತೆ ಇನ್ನಿತರ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ ಸಂಸದ ತುಕಾರಾಂ ಇವರು ಕೆಲವೊಂದು ವಸ್ತುಗಳನ್ನು ಖುದ್ದಾಗಿ ಖರೀಸಿ, ವ್ಯಾಪಾರಸ್ಥರಿಗೆ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಶ್ರೀಕಲ್ಯಾಣಚೌಕಿ ಮಠ ಕಾಮಧೇನು ಗೋಶಾಲಾ ಸೇವಾ ಟ್ರಸ್ಟ್ ಸಂಸ್ಥಾಪಕ ಕೆ.ಎಂ.ಬಸವರಾಜ ಸ್ವಾಮಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಸುಧೀರ್, ಮುಖಂಡರಾದ ಬಿ.ನಾರಾಯಣಪ್ಪ, ಹೊನ್ನಳ್ಳಿ ಗಂಗಾಧರ, ನಾಯಕರ ವೆಂಕೋಬ, ದೊಡ್ಡಬಸಪ್ಪ, ಹನುಮಂತಪ್ಪ, ಜಿ.ಮರೇಗೌಡ, ಸಿದ್ದಯ್ಯ, ಎನ್.ಎಂ.ಪತ್ರಯ್ಯಸ್ವಾಮಿ, ಅಕ್ಕಿ ಜಿಲಾನ್, ಬಳೆ ಮಲ್ಲಿಕಾರ್ಜುನ ಸೇರಿದಂತೆ ಸ್ವಾಮಿಯವರು, ಭಕ್ತರು ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















