ಬಳ್ಳಾರಿ/ ಕಂಪ್ಲಿ: ಮಾ.07. ಸಮೀಪದ ಕುಡತಿನಿ ಪಟ್ಟಣದ ಪ.ಪಂ. ಯ ಸಭಾಂಗಣದಲ್ಲಿ ಅಧ್ಯಕ್ಷ ಬಸಮ್ಮ ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ 2025-26ನೇ ಅಯ-ವ್ಯಯ ಸಭೆ ಶುಕ್ರವಾರ ನಡೆಯಿತು.
ನಂತರ ಸ್ಥಾಯಿ ಸಮಿತಿ ಅಧ್ಯಕ್ಷ ವಿ. ರಾಜಶೇಖರ ಇವರು 8.13 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದರು. ಪ.ಪಂ. ಹೊಸ ಕಟ್ಟಡ ನಿರ್ಮಾಣಕ್ಕೆ ಸುಮಾರು 5 ಕೋಟಿ ಅನುದಾನ ಸ್ವಂತ ನಿಧಿಯಿಂದ ಕಾಯ್ದರಿಸಿದ್ದು, ಡಿ.ಪಿ.ಆರ್. ಸಿದ್ದಪಡಿಸಿ, ಸರ್ಕಾರಕ್ಕೆ ಪ್ರಸ್ತಾಪಿಸಲಾಗುವುದು. ಶವ ಸಂಸ್ಕಾರ ಮಾಡಲು ವಿದ್ಯುತ್ ಚಿತಾಗಾರದ ವ್ಯವಸ್ಥೆಗೆ ಸೂಕ್ತಕ್ರಮವಹಿಸಿದೆ. 10 ಲಕ್ಷ ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಕರೆದಿದ್ದು, ಅತಿ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಿ, ಎರಡು ತಿಂಗಳಲ್ಲಿ ಮುಗಿಸಿಕೊಡಲಾಗುವುದು. ಜಿ+2 ಮಾದರಿಯ 1 ಸಾವಿರ ಮನೆಗಳು ಮಂಜೂರಾಗಿದ್ದು, ಮೊದಲ ಹಂತದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ 600 ಮನೆಗಳ ನಿರ್ಮಾಣ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಉಳಿದ ಮನೆಗಳನ್ನು ಕಟ್ಟಿಸಿಕೊಡಲಾಗುತ್ತದೆ. 50 ಲಕ್ಷ ವೆಚ್ಚದಲ್ಲಿ ಹಂಪಿ ಮಾದರಿಯಲ್ಲಿ ಕುಡುತಿನಿಯ ದ್ವಾರ ಬಾಗಿಲು ನಿರ್ಮಿಸಲು ಸಿದ್ದತೆ ನಡೆದಿದೆ. ಆಲಮಟ್ಟಿ ಜಲಾಶಯದಿಂದ ಕೆಪಿಸಿಎಲ್ ಕೆರೆಗೆ ಬರುವ ನೀರನ್ನು ಕುಡತಿನಿ ಹಳೆ ಕೆರೆಗೆ ಸರಬರಾಜು ಮಾಡಲು ಪೈಪ್ ಲೈನ್ ಮತ್ತು ಮೋಟರ್ ಅಳವಡಿಸಲು ಸೂಕ್ತಕ್ರಮವಹಿಸಿ, ಸಮರ್ಪಕವಾಗಿ ನೀರು ಪೂರೈಯಿಸಲಾಗುವುದು. ಇದರಿಂದ ಅಂತರ್ಜಲ ಮಟ್ಟದ ವೃದ್ಧಿಸುತ್ತದೆ ಮತ್ತು ಜನ ಜಾನುವಾರು ಮತ್ತು ಪಕ್ಷಿಗಳಿಗೆ ಅನುಕೂಲವಾಗುತ್ತದೆ. ಈಗಾಗಲೇ 11 ಜನ ಪೌರ ಕಾರ್ಮಿಕರನ್ನು ಖಾಯಂ ಮಾಡಲಾಗಿದೆ. ಇನ್ನುಳಿದ ಪೌರ ಕಾರ್ಮಿಕರನ್ನು ಮುಂದಿನ ದಿನದಲ್ಲಿ ಖಾಯಂ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪಟ್ಟಣದಲ್ಲಿ 5 ಲಕ್ಷ ಲೀಟರ್ ನೀರಿನ ಟ್ಯಾಂಕ್ ನಿರ್ಮಾಣ, ಆಟೋ, ಟಿಪ್ಪರ್, ಲಾರಿ ಖರೀದಿಸಲು ಟೆಂಡರ್ ಕರೆಯಲಾಗಿದೆ. ಶಿಥಿಲಗೊಂಡ ತಿಮ್ಮಲಾಪುರ ಪಂಪ್ ಹೌಸ್ ಅಭಿವೃದ್ಧಿ ಪಡಿಸುವುದು, ಇಂದಿರಾ ಕ್ಯಾಂಟಿನ್ ಮುಗಿಯುವ ಹಂತಕ್ಕೆ ಬಂದಿದ್ದು, ಅತಿ ಶೀಘ್ರದಲ್ಲಿ ಉದ್ಘಾಟಿಸಿ ಜನತೆಗೆ ಅನುಕೂಲ ಮಾಡಿಕೊಡಲಾಗುವುದು. ಹೀಗೆ ಹಲವು ಅಭಿವೃದ್ಧಿಗೆ ಸಂಬಂಧಿಸಿದ ಬಜೆಟ್ ಅನ್ನು ಮಂಡಿಸಲಾಯಿತು.
ವಾಗ್ವಾದ:
ಇಲ್ಲಿನ ಬಜೆಟ್ ಸಭೆಯ ಕೊನೆ ಹಂತದಲ್ಲಿ ಉಪಾಧ್ಯಕ್ಷ ಕನಕೇರಿ ಪಂಪಾಪತಿ ಇವರು ವಾರ್ಡ್ ನಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ, ಅಭಿವೃದ್ಧಿ ಕುಂಠಿತವಾಗಿದೆ. ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದ ಸೌಲತ್ತುಗಳನ್ನು ಒದಗಿಸುವಂತೆ ಹಲವು ಬಾರಿ ತಿಳಿಸಿದರೂ, ಕ್ಯಾರೇ ಎನ್ನುತ್ತಿಲ್ಲ ಎಂದು ಮುಖ್ಯಾಧಿಕಾರಿ ತೀರ್ಥಪ್ರಸಾದ್ ವಿರುದ್ಧ ನೇರ ಮಾತಿನಲ್ಲೇ ಆಕ್ರೋಶ ಹೊರಹಾಕಿದರು. ಇಲ್ಲಿನ ಮುಖ್ಯಾಧಿಕಾರಿಗೆ ಪಟ್ಟಣದ ಅಭಿವೃದ್ಧಿ ಬೇಕಾಗಿಲ್ಲ. ಪಟ್ಟಣದ ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಅಭಿವೃದ್ಧಿ ಇಲ್ಲವಾದರೆ, ಈ ಬಜೆಟ್ ಏಕೆ? ಸ್ವಾಮಿ ಎಂದು ಗುಡುಗುವ ಜತೆಗೆ ಇಂತಹ ಅಧಿಕಾರಿಯಿಂದ ಕುಡತಿನಿ ಅಭಿವೃದ್ಧಿ ಅಸಾಧ್ಯ. ಆದ್ದರಿಂದ ಕೂಡಲೇ ಮುಖ್ಯಾಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು. ಈಗಾಗಲೇ ಮುಂಬಡ್ತಿ ಹೊಂದಿ ಬೇರೆ ಕಡೆ ವರ್ಗಾವಣೆಗೊಂಡು, ಮತ್ತೆ ಇಲ್ಲಿಗೆ ಬಂದಿರುವುದು ಅನುಮಾನಕ್ಕೆ ಹೆಡೆ ಮಾಡಿಕೊಟ್ಟಿದೆ. ಆದ್ದರಿಂದ ಮೇಲಿನ ಅಧಿಕಾರಿಗಳು ಇಂತಹ ಬೇಜವಾಬ್ದಾರಿ ಅಧಿಕಾರಿ ವಿರುದ್ಧ ಕಠಿಣ ಕ್ರಮವಹಿಸಿ, ಕುಡತಿನಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.
ನಂತರ ಸದಸ್ಯ ಸಿ.ಡಿ.ದುಗ್ಗೆಪ್ಪ ಮಾತನಾಡಿ, 3ನೇ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದ್ದು, ಮುಖ್ಯಾಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲ್ಲಿನ ಚರಂಡಿಗಳಲ್ಲಿ ಘನತ್ಯಾಜ್ಯ ತುಂಬಿ, ಅವ್ಯವಸ್ಥೆಯಾಗಿದೆ. ಇಲ್ಲಿನ ವಾರ್ಡಿನಲ್ಲಿ ಯಾವುದೇ ಅಭಿವೃದ್ಧಿ ಇಲ್ಲ. ಅಧಿಕಾರಿ ಕೆಲವರ ಕೈಗೊಂಬೆಯಾಗಿ, ಅಭಿವೃದ್ಧಿ ಮರೆತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಜಿ.ಎಸ್.ವೆಂಕಟರಮಣ, ಹಾಲಪ್ಪ ಕೆ.ಎಂ, ಎಸ್.ಸುನೀಲ್ ಕುಮಾರ, ಟಿ.ಮಂಜುನಾಥ, ರಾಮಲಿಂಗಪ್ಪ, ಬಿ.ಕೆ.ಲೆನಿನ್, ಯು.ದೇವಮ್ಮ, ಎಸ್.ರತ್ನಮ್ಮ, ಆರ್.ಸಾಲಮ್ಮ ಹಾಗೂ ಸಿಬ್ಬಂದಿ ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ