
ಉತ್ತರ ಕನ್ನಡ: ಧಾರ್ಮಿಕ ಸ್ಥಳಗಳು ಇರುವುದು ಆಸ್ತಿಕ ಜನರಲ್ಲಿ ಶ್ರದ್ಧೆ ಹೆಚ್ಚಿಸಲು ಹಾಗೂ ಭಕ್ತರ ಮನಸ್ಸಿಗೆ ಶಾಂತಿ ನೀಡಿ , ಸಮಾಜವನ್ನು ಉತ್ತಮ ಮಾರ್ಗದಲ್ಲಿ ಮುನ್ನೆಡೆಸುವ ರೀತಿಯಲ್ಲಿ ಮಾರ್ಗದರ್ಶನ ನೀಡಲು. ಅಂತಹದ್ದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಧಾರ್ಮಿಕ ಸ್ಥಳಗಳು ಜೂಜು ಕೇಂದ್ರಗಳಾದವಾ ಎಂಬ ಗಂಭೀರ ಪ್ರಶ್ನೆಯೊಂದು ತಾಲೂಕಿನ ಆಸ್ತಿಕ ಭಕ್ತರಲ್ಲಿ ಮೂಡಿದೆ.
ಕಾರಣ ಜಿಲ್ಲೆಯಲ್ಲಿ ಎಲ್ಲೇ ಜಾತ್ರೆ ,ಮಹೋತ್ಸವಗಳು ನಡೆಯಲಿ ಅಲ್ಲೆಲ್ಲಾ ಹೊಸದೊಂದು ಖಯಾಲಿ ಪ್ರಾರಂಭವಾಗಿ ಬಿಟ್ಟಿದೆ, ಅದೇನಪ್ಪಾ ಅಂದ್ರೆ ಪ್ರತಿ ದೇವಸ್ಥಾನಗಳ ವಾರ್ಷಿಕ ಮಹೋತ್ಸವ, ಜಾತ್ರೋತ್ಸವ , ವರ್ಧಂತಿ ಉತ್ಸವ ನಡೆಯಲಿ ಹಣವನ್ನು ಬಾಜಿ ಕಟ್ಟಿ ಆಡುವ ,ಒಂದಕ್ಕೆ ಎರಡು ಪಟ್ಟು ಹಣ ಕಟ್ಟುವ ಜೂಜು ಆಟಗಳು ತಲೆ ಎತ್ತಲು ಪ್ರಾರಂಭ ಮಾಡಿವೆ. ಇದರಿಂದ ಜಾತ್ರೆಗೆ, ದೇವಸ್ಥಾನಕ್ಕೆ ಬರುವವರಿಗೆ ದೊಡ್ಡ ಮಟ್ಟದ ಹಣ ಗೆಲ್ಲಬಹುದು ಎಂಬ ಆಸೆ ಹುಟ್ಟಿ ಅವರೆಲ್ಲರೂ ಈ ಜೂಜು ಕೇಂದ್ರ ಗಳಂತಿರುವ ಬಾಲ್ ಗೇಮ್ ಆಟ, ಗುಳುಗುಳಿ ಆಟ ಗಳಲ್ಲಿ ಹಣ ವಿನಿಯೋಗಿಸಿ ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.
ಶಿರಸಿ ,ಯಲ್ಲಾಪುರ, ದಾಂಡೇಲಿ, ಸೇರಿದಂತೆ ಜಿಲ್ಲೆಯ ಅನೇಕ ಕಡೆ ಇದೆ ರೀತಿಯ ಹೊಸ ಖಯಾಲಿ ಪ್ರಾರಂಭವಾಗಿದ್ದು ಸಂಬಂಧ ಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಇದಕ್ಕೆ ಉದಾಹರಣೆ ಎಂಬಂತೆ ಕಳೆದ ಜನವರಿಯಲ್ಲಿ ಮುಂಡಗೋಡ ತಾಲೂಕಿನ ಸಾಲಗಾಂವ ಬಾಣಂತಿ ದೇವಿ ಜಾತ್ರೆ ಮಹೋತ್ಸವದಲ್ಲಿ ಕೂಡಾ ಬಾಲ್ ಗೇಮ್ ಆಟ ಸದ್ದು ಮಾಡಿತ್ತು, 4 ದಿನಗಳ ಕಾಲ ಭರ್ಜರಿ ಯಾಗಿ ನಡೆದ ಬಾಲ್ ಗೇಮ್ ಆಟದಲ್ಲಿ ಹಣ ತುಂಬಿಕೊಂಡು ಹೋದ ಕೈಗಳು ಎಷ್ಟೋ ,ಹಣ ಕಳೆದುಕೊಂಡ ಕೈಗಳು ಎಷ್ಟೋ, ಬಳಿಕ ಬೇಡಸಂಗಾವ್ ರಾಮಲಿಂಗೇಶ್ವರ ಜಾತ್ರೆಯಲ್ಲಿ ಕೂಡಾ ಬಾಲ್ ಗೇಮ್ ಆಟ ಸದ್ದು ಮಾಡಿತ್ತು ಈ ಬಗ್ಗೆ ಕರುನಾಡ ಕಂದ ಕೂಡ ವರದಿ ಮಾಡಿತ್ತು. ಈಗ ಮತ್ತೆ ಕೋಡoಬಿ ಮೇಲುಗೈ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಕೂಡಾ ಮತ್ತೆ ಬಾಲ್ ಗೇಮ್ ಆಟದ ಸದ್ದು ಕೇಳಿ ಬರುತ್ತಿದ್ದು, ದೇಗುಲದ ಆಡಳಿತ ಮಂಡಳಿ ಅವರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಬಾಜಿ ಕಟ್ಟಿ ಹಣ ಗೆಲ್ಲುವ ಆಟಗಳನ್ನು ಆಡಿಸಿ, ದೇವರ ದರ್ಶನಕ್ಕೆ ಬರುವ ಭಕ್ತರನ್ನು ದಿವಾಳಿ ಮಾಡುವ ಯೋಜನೆಗೆ ಆಸ್ತಿಕ ಭಕ್ತರು ಹಿಡಿಶಾಪ ಹಾಕುತ್ತಿದ್ದಾರೆ. ಅದರಲ್ಲಿಯೂ ದೇವಸ್ಥಾನದ ಆಡಳಿತ ಕಮಿಟಿ ಯವರು ಇಂತಹ ಪ್ರಮಾದಗಳಿಗೆ ಹೊಣೆಗಾರರು, ಇಂತಹ ಸಮಾಜ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ದೇಗುಲಕ್ಕೆ ದರ್ಶನ ಮಾಡಲು ಬಂದ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೂರಾರು ಜನ ಸಾವಿರಾರು ರೂಪಾಯಿ ಹಾಕಿ ಹಣ ಬಾಜಿ ಕಟ್ಟಿ ಕಳೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯ ಜನರಿಗೆ ಜೂಜು ಕೇಂದ್ರಗಳಾದವಾ ಧಾರ್ಮಿಕ ಸ್ಥಳಗಳು? ಎಂಬ ಪ್ರಶ್ನೆ ನಿಜಕ್ಕೂ ಓದುಗರಾದ ನಿಮ್ಮನ್ನು ಕಾಡದೇ ಇರದು.
ಭಕ್ತರಿಗಾಗಿ ಇರುವ ದೇವಸ್ಥಾನಗಳ ಆವರಣದಲ್ಲಿ ಈ ರೀತಿಯಾಗಿ ಅಕ್ರಮ ಆಟಗಳಿಗೆ ದೊಡ್ಡವರು ಅವಕಾಶ ನೀಡಬಾರದೆಂದು ಕೆಲ ಭಕ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈಗ ಸಾಲು ಸಾಲು ಜಾತ್ರಾ ಮಹೋತ್ಸವ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ನಡೆಯಲಿದ್ದು ಇನ್ನೂ ಮುಂದೆ ಯಾವುದೇ ಗ್ರಾಮಗಳಲ್ಲಿ ಈ ರೀತಿಯ ಬಾಜಿ ಆಟಗಳನ್ನು ಆಡಿಸಲು ಸಂಬಂಧಪಟ್ಟವರು ಅವಕಾಶ ನೀಡಬಾರದು ಹಾಗೂ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾವಂತರು ಆಗ್ರಹ ಮಾಡುತ್ತಿದ್ದಾರೆ.
- ಕರುನಾಡ ಕಂದ ಉತ್ತರ ಕನ್ನಡ