ಬೆಂಗಳೂರು : ಮಹಿಳಾ ದಿನಾಚರಣೆಯ ಅಂಗವಾಗಿ ಆನಂದ್ ರಾವ್ ವೃತ್ತದ ಬಳಿ ಇರುವ ಕ.ವಿ.ಪ್ರ.ನಿ.ನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಪಂಚದ ಅತಿ ಕಠಿಣ ಮ್ಯಾರಥಾನ್ ಗಳಲ್ಲಿ ಒಂದಾದ ಲಡಾಖ್ ನ ಅಂದಾಜು12,000 ಅಡಿ ಎತ್ತರ ಪ್ರದೇಶದಲ್ಲಿ 42 ಕಿಮೀ ಓಟ ಪೂರೈಸಿ ಗೆದ್ದ ಶಿಲ್ಪಾ ಹೆಗಡೆ,
ಇಸ್ರೋ ನಡೆಸಿದ ಇತ್ತೀಚಿನ 99ನೇ ಕಾರ್ಯಕ್ರಮದಲ್ಲಿ ಅಂತರಿಕ್ಷಕ್ಕೆ ಚಿಮ್ಮಿಸಿದ ಮೊದಲ ಮೈಕ್ರೋ ಬಯಾಲಜಿಕಲ್ ಪೇ ಲೋಡ್ RVSAT-1 ರ ಸಿದ್ದತೆ ಮಾಡಿದ ತಂಡದಲ್ಲಿರುವ ವಿಜ್ಞಾನಿ ಪಾರ್ವತಿ,
ಅತಿ ಚಿಕ್ಕ ವಯಸ್ಸಿನಲ್ಲಿಯೇ ದೇಶ ವಿದೇಶಗಳ ಘನ ವೇದಿಕೆಯಲ್ಲಿ ಯೋಗ ಭರತನಾಟ್ಯ ಪ್ರದರ್ಶಿಸಿದ ಯೋಗ ಪದ್ಮ ಪ್ರಶಸ್ತಿ ವಿಜೇತೆ ನೇಹಾ, ಬಹುಭಾಷಾ ತಜ್ಞೆ, ಸಾಹಿತಿ, ಯಕ್ಷ ನೃತ್ಯ ಸಹಿತ ಬಹುವಿಧದ ಶಾಸ್ತ್ರೀಯ ವಾದನದ ಪ್ರವೀಣೆ ಸ್ವಾತಿ ಪಂಡಿತ, JEE B Arch ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟದಲ್ಲಿ 5 ನೇ ರ್ಯಾಂಕ್ ಗಳಿಸಿರುವ ರಕ್ಷ ದಿನೇಶ ಹೆಗಡೆ ಅವರುಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ರಕ್ಷಾ ದಿನೇಶ್ ಹೆಗಡೆ ಅವರ ಪರವಾಗಿ ಗೀತಾ ಸಭಾಹಿತ ಸನ್ಮಾನ ಸ್ವೀಕರಿಸಿದರು.
ಅದಕ್ಕೂ ಮೊದಲು ಮಹಿಳಾ ಪ್ರಕಾಶಕಿಯಾದ ವಿಶಾಲಾಕ್ಷಿ ಶರ್ಮ ಅವರ ಭೂಮಿ ಬುಕ್ಸ್ ಪ್ರಕಾಶನದಿಂದ ಸರೋಜಾ ಪ್ರಕಾಶ್ ಅವರು ರಚಿಸಿದ ವಿಜ್ಞಾನದ ಜಾಡು ಬದಲಿಸಿದ ಜಾಣೆಯರು ಪುಸ್ತಕದ ಬಿಡುಗಡೆಯನ್ನು ಡಾ. ದೀಪಾ ಎಂ ಬಿ ಹಾಗೂ ಡಾ.ಡಿ ವಿ ಗುರುಪ್ರಸಾದ ನೆರವೇರಿಸಿದರು.
ಪುಸ್ತಕ ಬಿಡುಗಡೆಯಲ್ಲಿ ಪಾಲ್ಗೊಂಡು ನಂತರ ಸಾಧಕಿಯರನ್ನು ಸನ್ಮಾನಿಸಿ, 96 ಕೃತಿ ರಚಿಸಿರುವ, 56 ದೇಶಗಳಿಗೆ ಭೇಟಿನೀಡಿರುವ ಖ್ಯಾತ ಸಾಹಿತಿ, ಅಂಕಣಕಾರ, ದಕ್ಷ ಆಡಳಿತಗಾರ, ನಿವೃತ್ತ ಡಿಜಿಪಿ ಡಾ.ಡಿ ವಿ ಗುರುಪ್ರಸಾದ ಅವರು ಮಾತನಾಡುತ್ತಾ ಇತ್ತೀಚೆಗೆ ವಿಜ್ಞಾನ ಸಾಹಿತ್ಯ ಬರೆಯುವುದು ವಿರಳವಾಗಿದೆ, ಸರೋಜಾ ಪ್ರಕಾಶ್ ಅವರು ವಿಜ್ಞಾನಿಗಳ ಕುರಿತು ಬರೆದಿರುವದು ಬಹಳ ಸಂತೋಷದ ವಿಷಯ. ಪುಸ್ತಕಗಳನ್ನು ಕೊಂಡು ಓದಬೇಕು ಎಂದು ಹೇಳಿದರು. ಅಲ್ಲದೆ ಸಾಧಕಿಯರನ್ನು ಸನ್ಮಾನಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಹೆಣ್ಣು ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತು ಸಬಲರಾಗುವುದು ಅವಶ್ಯಕ ಎಂದು ಹೇಳಿ ಸಾಧಕಿಯರ ಸಾಧನೆಯನ್ನು ಕೊಂಡಾಡುತ್ತಾ, ಇಂತಹವರಿಂದ ಯುವಜನತೆಗೆ, ಮಹಿಳೆಯರಿಗೆ ವಿಶೇಷ ಪ್ರೇರಣೆ ಸಿಗಲಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಲಿ ಎಂದು ಆಶಿಸಿದರು.
ವಿಜ್ಞಾನದ ಜಾಡು ಬದಲಿಸಿದ ಜಾಣೆಯರು ಪುಸ್ತಕ ಬಿಡುಗಡೆಗೊಳಿಸಿದ ದೀಪಾ ಎಂ ಬಿ ಮಾತನಾಡುತ್ತಾ , ಸರೋಜಾ ಪ್ರಕಾಶ್ ಅವರ ಪರಿಶ್ರಮವನ್ನು ಮೆಚ್ಚಿ,
ಇತ್ತೀಚೆಗೆ ವಿಜ್ಞಾನ ಸಾಹಿತ್ಯ ಬರೆಯುವುದು ವಿರಳವಾಗಿದೆ, ಈ ಪುಸ್ತಕದಲ್ಲಿ ಕೇವಲ 13 ವಿಜ್ಞಾನಿಗಳ ವಿವರ ಅಷ್ಟೇ ದಾಖಲಾಗಿದೆ; ತುಂಬಾ ಅಪರೂಪದ ಲೇಖನಗಳಿವು, ಎಲ್ಲರೂ ಓದಿ ಈ ಲೇಖನಗಳಿಂದ ಪ್ರೇರಣೆ ಪಡೆಯಲು ಸಾಧ್ಯ; ಇಂತಹ ಪ್ರೇರಣಾದಾಯಕ ವಿಜ್ಞಾನಿಗಳ ಕುರಿತು ಸರೋಜಾ ಪ್ರಕಾಶ್ ಅವರು ಬರೆದು ಉತ್ತಮ ಕೆಲಸ ಮಾಡಿದ್ದಾರೆ, ಎಲ್ಲರೂ ಇದನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದು ವಿನಂತಿಸಿದರು.
ಪುಸ್ತಕ ರಚನೆ ಮಾಡಿದ ಸರೋಜಾ ಪ್ರಕಾಶ್ ಅವರು ಮಾತನಾಡಿ, ನೋಬೆಲ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಿದ್ದುನ್ನು ಸ್ಮರಿಸಿ ಅಲ್ಲಿ ಕೇಳಿದ ಉಪನ್ಯಾಸಗಳ ಪ್ರೇರಣೆಯಿಂದಾಗಿ ಅನೇಕ ಮಹಿಳಾ ವಿಜ್ಞಾನಿ ರತ್ನಗಳ ಕುರಿತಾದ ಈ ಪುಸ್ತಕ ರೂಪಗೊಂಡಿತು ಎಂದು ಹೇಳಿ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯಾಗಿ ಎದುರಿಸಬೇಕಾದ ಸಮಸ್ಯೆ ಮತ್ತು ಹೋರಾಟಗಳ ಚಿತ್ರಣವನ್ನು ಅವರು ವಿವರಿಸಿದರು.
ಸಾಧಕಿಯರು ತಮ್ಮ ಅಭಿಪ್ರಾಯ, ಸಂದೇಶಗಳನ್ನು ತಿಳಿಸಿ, ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ನಂತರ ಪ್ರೇಮ ವೆಂಕಟರಾಮು ಅವರ ನೇತೃತ್ವದಲ್ಲಿ ಶೃಂಗೇರಿ ನಿಲಯೆ ಭಜನಾ ಮಂಡಳಿ ಹುಳಿಮಾವು ಅವರಿಂದ ನಡೆದ ಭಜನೆ ಹಾಗೂ ಪುರಂದರದಾಸರ ದೇವರನಾಮಗಳು ಸಭಿಕರನ್ನು ಭಕ್ತಿ ಭಾವ ಪರವಶಯತೆಯಲ್ಲಿ ಮುಳುಗಿಸಿತು.
ಆರಂಭದ ಪ್ರಾರ್ಥನೆ ನಂತರ ವಿಶಾಲಾಕ್ಷಿ ಶರ್ಮ ಅವರು ಪ್ರಸ್ತಾವನೆ ಮಾಡಿದರು, ದಿವ್ಯಾ ಹೆಗಡೆಯವರು ಸ್ವಾಗತಿಸಿ, ಡಾ. ದೀಪಾ ಎಂ ಬಿ ಹಾಗೂ ಸರೋಜಾ ಪ್ರಕಾಶ್ ಅವರನ್ನು ಪರಿಚಯಿಸಿದರು.
ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಲೆಕ್ಕಾ ಧಿಕಾರಿ ಎಸ್ ಎನ್ ಪ್ರದೀಪ ಅವರು ಡಾ.ಡಿ ವಿ ಗುರುಪ್ರಸಾದ ಅವರ ಪರಿಚಯ ನೆರವೇರಿಸಿದರು. ಕವಿ ಸಿದ್ದಣ್ಣ ಸೊನ್ನದ, ಸುಜಯ ಹೆಗಡೆ, ಶ್ರೀಮತಿ ವಿಮಲಾ ಪ್ರಸಾದ್ ಅವರು ಸಾಧಕಿಯರ ಪರಿಚಯ ಮಾಡಿಕೊಟ್ಟರು.
ಸನ್ಮಾನ ಕಾರ್ಯಕ್ರಮದಲ್ಲಿ ಲೆಕ್ಕಾಧಿಕಾರಿಗಳ ಸಂಘದ ಬಿ ಸತ್ಯನಾರಾಯಣ, ಎಸ್ ಜೆ ಕೃಷ್ಣಮೂರ್ತಿ, ಗಿರೀಶ, ಶ್ರೀನಿವಾಸ್ ರಾಘವೇಂದ್ರ ರಾವ್ ನಂಜುಂಡಸ್ವಾಮಿ, ಪ್ರಕಾಶ್ ಪೂರ್ಣಮಠ ಚಂದ್ರಶೇಖರ್ ಶಿಡ್ಲಘಟ್ಟ, ಸುಜಯ್ ನಾಗರಾಜ್, ಗೌರಿ ಪಂಡಿತ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಡಾ. ಪೂರ್ಣಿಮಾ ವೇಣುಗೋಪಾಲ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ