ಬಳ್ಳಾರಿ / ಕಂಪ್ಲಿ : ಪ್ರಸ್ತುತ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿದ್ದು, ಪ್ರತಿಯೊಬ್ಬರೂ ಮಾನವೀಯ ನೆಲೆಗಟ್ಟಿನಲ್ಲಿ ಬದುಕನ್ನು ರೂಪಿಸಿಕೊಳ್ಳಲು ಮಠಗಳ ಪರಂಪರೆಯೊಂದಿಗೆ ಒಡನಾಟಗಳನ್ನು ಹೊಂದಬೇಕೆಂದು ಜಿಲ್ಲೆಯ ಹಿರಿಯ ಪತ್ರಕರ್ತರಾದ ಶಶಿಧರ ಮೇಟಿ ತಿಳಿಸಿದರು.
ಅವರು ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ಹಂಪಿ ಸಾವಿರದೇವರು ಮಹಾಂತ ಮಠದಲ್ಲಿ ಶ್ರೀಮಠದ ಸದ್ಭಕ್ತರು ಆಯೋಜಿಸಿದ್ದ ಶ್ರೀಮಠದ ಪೀಠಾಧಿಪತಿಗಳಾದ ವಾಮದೇವ ಶಿವಾಚಾರ್ಯ ಶ್ರೀಗಳ 53ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ,ಸಂಸ್ಕಾರದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಲು ಗುರು ಮತ್ತು ಮಠಗಳ ಪರಂಪರೆಯ ಒಡನಾಟವನ್ನು ಹೊಂದಬೇಕು ಎಂದರು.
ಸಕಲ ಸದ್ಭಕ್ತರಿಂದ ತಮ್ಮ ಜನ್ಮ ದಿನದ ಗೌರವ ಸಮರ್ಪಣೆಯನ್ನು ಸ್ವೀಕರಿಸಿ ಶುಭ ಆರ್ಶೀವಚನ ನೀಡಿದ ವಾಮದೇವ ಮಹಾಂತ ಶಿವಾಚಾರ್ಯರು ತನು, ಮನ ಶುದ್ಧವಾಗಿರಲಿ, ಪ್ರತಿಯೊಬ್ಬರೂ ತಮ್ಮೊಳಗಿನ ದುರ್ಗುಣಗಳನ್ನು ದೂರ ಮಾಡಿ ಸದ್ಗುಣಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ತಮ್ಮ ಜೀವನದ ಸಾರ್ಥಕತೆಯನ್ನು ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಕಂಪ್ಲಿಯ ಕೆ. ಎಂ. ಹೇಮಯ್ಯಸ್ವಾಮಿ, ಚಂದ್ರಶೇಖರಗೌಡ, ಕುರೇಕುಪ್ಪ ಶರಣಪ್ಪ, ಚಿತ್ರದುರ್ಗದ ಹಾಸ್ಯ ಕವಿ ಜಗನ್ನಾಥ್ ಸೇರಿದಂತೆ ಇತರರು ಮಾತನಾಡಿದರು.
ಸಿಂಧನೂರಿನ ಸೋಮನಾಥ ಶಿವಾಚಾರ್ಯರು, ಹರಗಿನಡೋಣಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಮಸ್ಕಿಯ ಹೊರ ರುದ್ರಮನಿ ಶಿವಾಚಾರ್ಯರು, ಗೊರೆಬಾಳದ ಚನ್ನಪ್ಪ ತಾತಾ, ಎಚ್.ವೀರಾಪುರದ ಜಡೇಶ ತಾತನವರು ಶುಭ ಆರ್ಶೀವಚನ ನೀಡಿದರು.
ವಾಮದೇವ ಶಿವಾಚಾರ್ಯ ಶ್ರೀಗಳನ್ನು ಜಿ.ಚಂದ್ರಶೇಖರಗೌಡ, ಗುತ್ತಿಗೆದಾರ ಸಿದ್ದರಾಮನಗೌಡ, ಸಾಲಿ ಬಸವರಾಜ ಸ್ವಾಮಿ, ಕೆ.ಎಂ.ಹೇಮಯ್ಯಸ್ವಾಮಿ, ಕಂಪ್ಲಿಯ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಪದಾಧಿಕಾರಿಗಳು,ಗುತ್ತಿಗನೂರು, ಬಾದನಹಟ್ಟಿ, ಎಚ್.ವೀರಾಪುರ, ಕುರೆಕುಪ್ಪ, ಬಳ್ಳಾರಿ, ಸಿರಗುಪ್ಪ ಸೇರಿದಂತೆ ವಿವಿಧ ಗ್ರಾಮಗಳ ಸದ್ಭಕ್ತರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್
