ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕನ್ನಡದ ಕಾವ್ಯಾನಂದ:ಸಿದ್ಧಯ್ಯ ಪುರಾಣಿಕ ಜನ್ಮ ದಿನದ ಸ್ಮರಣೆ

ಏನಾದರೂ ಆಗು ಮೊದಲು ಮಾನವನಾಗು ಎಂಬ ನುಡಿ,
ಹೊತ್ತಿತೋ ಹೊತ್ತಿತೋ ಕನ್ನಡದ ದೀಪ…
ಎಂಬ ಹಾಡು ಡಾ.ಸಿದ್ದಯ್ಯ ಪುರಾಣಿಕರನ್ನು ನೆನಪಿಸುತ್ತವೆ.ಕನ್ನಡ ನಾಡು ಕಂಡ
ಅಪರೂಪದ ಐ.ಎ.ಎಸ್.ಅಧಿಕಾರಿ,ಸಾಹಿತಿ,ಕವಿ, ವಚನಕಾರ,ದಕ್ಷ ಆಡಳಿತಗಾರ ಹೀಗೆ ಬಹುಮುಖ ಪ್ರತಿಭೆಯ,ಬಹು ಭಾಷಾ ಪಂಡಿತ, ವಾಗ್ಮೀ,ಚಿಂತನಾಶೀಲರು ಹಾಗೂ ಸರಳ, ಸಜ್ಜನಿಕೆಯುಳ್ಳ ಪುರಾಣಿಕರ ಕಾವ್ಯನಾಮ ಎನ್ನುವ ಕನ್ನಡದ ದೀಪ.ಬಾಲ್ಯದಿಂದಲೇ ಸಾಹಿತ್ಯ ಅಧ್ಯಯನದ ಸಂಸ್ಕಾರಕ್ಕೆ ಒಳಗಾದರು.ತಂದೆ,ಪಂಡಿತ ಕಲ್ಲಿನಾಥ್ ಶಾಸ್ತ್ರಿ ಕಾವ್ಯ,ಛಂದಸ್ಸು,ವ್ಯಾಕರಣ,ಶಾಸ್ತ್ರ,ಶತಕ, ವಚನ,ಹಾಡುಗಳು,ನಾಟಕ ಹಾಗೂ ಪುರಾಣ ರಚನೆಯಲ್ಲಿ ಪ್ರಸಿದ್ಧಿ ಪಡೆದರೆ,ಅಜ್ಜ ಕವಿರತ್ನ ಚೆನ್ನಕವಿ ಕವಿಗಳಾಗಿ ವಿಖ್ಯಾತರು.ಸೋದರಮಾವ ಕಾಲಕಾಲೇಶ್ವರ ಶಾಸ್ತ್ರ ವೇದಾಂತ ಪಂಡಿತರು.ಹೀಗೆ
ಅಪರೂಪದ ಕುಟುಂಬ ಪರಿಸರ ಸಿದ್ಧಯ್ಯನವರಿಗೆ ಬಾಲ್ಯದಲ್ಲಿಯೇ ದೊರಕಿತು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ದ್ಯಾಂಪುರ ಗ್ರಾಮದಲ್ಲಿ ಜೂನ್ ೧೮,೧೯೧೮ ರಲ್ಲಿ ಜನನ,ತಂದೆ, ಪಂಡಿತ ಕಲ್ಲಿನಾಥ್ ಶಾಸ್ತ್ರಿ,ತಾಯಿ,ದಾನಮ್ಮನವರಿಗೆ ಐದು ಮಕ್ಕಳಲ್ಲಿ ಸಿದ್ಧಯ್ಯ ಪುರಾಣಿಕ್ ಹಿರಿಯರು.ಬಾಲ್ಯದಿಂದ ಸಾಹಿತ್ಯವೆನ್ನುವುದು ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿತು.ತುಂಬಾ ಶಿಸ್ತಿನಿಂದ ಕೂಡಿದ,ಅಧ್ಯಯನಶೀಲ ಪ್ರವೃತ್ತಿಯಿಂದ,ಸಾಹಿತ್ಯಾಧ್ಯಯನದಿಂದ ಮನಸ್ಸನ್ನು
ಶಕ್ತಗೊಳಿಸಿಕೊಂಡರು.ಏಕಾಗ್ರತೆ ಅವರಿಗೆ ವರವಾಗಿ ವಿದ್ಯಾರ್ಥಿ ಜೀವನದುದ್ದಕ್ಕೂ ಅತ್ಯುತ್ತಮ ಶ್ರೇಣಿಯಲ್ಲಿ ಗೌರವಸ್ಥಾನ ಪಡೆದರು.ಬಿ.ಎ.ಪರೀಕ್ಷೆಯಲ್ಲಿ ಕರ್ನಾಟಕ ವಿ.ವಿ.ಗೆ. ಪ್ರಥಮ ಸ್ಥಾನ ಪಡೆದ ಇವರು ಕಾನೂನು ಅಧ್ಯಯನ ಮಾಡಿ ೧೯೪೩ ರಲ್ಲಿ ತಹಶೀಲ್ದಾರರಾಗಿ ಆಯ್ಕೆಯಾದರು.

ಕರ್ತವ್ಯ ಸೇವೆಯ ಅವಕಾಶ:
ಹೈದರಬಾದು ಸಂಸ್ಥಾನದಲ್ಲಿದ್ದು ಪಡೆದ ಅನುಭವ ಅಪಾರ,ಕೆಲಸವನ್ನು ಅತ್ಯಂತ ಪ್ರೀತಿ,ದಕ್ಷತೆಯಿಂದ ನಿರ್ವಹಿಸಿ,ಕರ್ತವ್ಯ ಎನ್ನುವುದು ಸೇವೆಯ ಅವಕಾಶವೆಂದು ಭಾವಿಸಿದ್ದರು.ಡೆಪ್ಯೂಟಿ
ಕಲೆಕ್ಟರ್,ಅಧೀನ ಕಾರ್ಯದರ್ಶಿ,ಉಪ-ಕಾರ್ಯದರ್ಶಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯ ಮುಖ್ಯಾಧಿಕಾರಿ,ಜಿಲ್ಲಾಧಿಕಾರಿ,ಸಾರಿಗೆ,ಕಾರ್ಮಿಕ ಇಲಾಖೆಯ ಕಮಿಷ್‌ನರ್ ಹೀಗೆ ವಿವಿಧ ಹುದ್ಧೆಗಳಲ್ಲಿ ೩೩ ವರ್ಷ ಪ್ರಾಮಾಣಿಕತೆ‌ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆ ಪಡೆದರು. ನಾಂದೇಡ,ಕುಲಬರ್ಗಿ,ತಾಂಡೂರು,ಯಾದಗಿರಿ,
ಬೆಂಗಳೂರು,ಮಡಿಕೇರಿ,ಬೆಳಗಾವಿಯಲ್ಲಿ ಸೇವೆ ಸಲ್ಲಿಸಿ ೧೯೭೬ ರಲ್ಲಿ ಬೆಂಗಳೂರಲ್ಲಿ ನಿವೃತ್ತಿ ಹೊಂದಿದರು.

ಸಾಹಿತ್ಯ ಕ್ಷೇತ್ರಕ್ಕೆ ಪುರಾಣಿಕರ ಕೊಡುಗೆ:
ವೃತ್ತಿಯಿಂದ ಐ.ಎ.ಎಸ್.ಅಧಿಕಾರಿ,ಪ್ರವೃತ್ತಿಯಲ್ಲಿ ಸಾಹಿತಿಗಳು,ಪುರಾಣಿಕರ ಸಾಹಿತ್ಯರಾಶಿ ವಿಫಲ,೧೩ ಕೃತಿಗಳ ಸಂಪಾದನೆ ಸೇರಿ ೩೯ ಕೃತಿಗಳನ್ನು ರಚನೆಮಾಡಿದ್ದಾರೆ.ಆತ್ಮಾರ್ಪಣೆ,ಭಾರತವೀರ,ರಜತರೇಖೆ,ಭಿನ್ನನೂಪುರ ಎಂಬ ನಾಟಕಗಳು,ತ್ರಿಭುವನ ಕಾದಂಬರಿ ಪ್ರಸಿದ್ಧಿ ಪಡೆದವುಗಳು.
ಮಕ್ಕಳಿಗಾಗಿ ಆರು ಕೃತಿಗಳು ಹಾಗೂ ಬಸವಣ್ಣನವರ ಜೀವನ ಮತ್ತು ಸಂದೇಶ,ಮಹಾದೇವಿ,ಹರ್ಡೇಕರ್ ಮಂಜಪ್ಪನವರು,ಸಿದ್ಧರಾಮ,ಅಲ್ಲಮಪ್ರಭು ಹಾಗೂ ಮಿರ್ಜಾಗಾಲಿಬ್ ಎಂಬ ಜೀವನ ಚರಿತ್ರೆಗಳು,ಕಥಾಮಂಜರಿ ಹಾಗೂ ತುಷಾರಹಾರ ಎಂಬ ಎರಡು ಕಥಾ ಸಂಕಲನಗಳು.ಜಲಪಾತ, ಕರುಣಾಶ್ರಾವಣ,ಮಾನಸಸರೋವರ,
ಮೊದಲು ಮಾನವನಾಗು,ಕಲ್ಲೋಲಮಾಲೆ,ಚರಗ, ಹಾಲ್ದೆನೆ,ಮರುಳಸಿದ್ಧನಕಂತೆ ಆಯ್ದ ಕವನಗಳು ಇತ್ಯಾದಿ ಕವನ ಸಂಕಲನಗಳು ವಚನನಂದನ, ವಚನೋದ್ಯಾನ,ವಚನರಾಮ್
ಕೃತಿಗಳು ಅಪಾರ ಪ್ರಸಿದ್ಧಿ ಪಡೆದಿವೆ.ಪುರಾಣಿಕರ ಮತ್ತೊಂದು ಮಹತ್ವದ ಕೃತಿ ಎಂದರೆ ಶರಣಚರಿತಾಮೃತ: ೭೮ ಶಿವಶರಣರ ಜೀವನ
ಚರಿತ್ರೆಗಳನ್ನು ಒಳಗೊಂಡಿದೆ.ಶರಣತತ್ವದ ಸೊಬಗು,
ಅದರಲ್ಲಿರುವ ಅಮೃತತ್ವವನ್ನು ಕನ್ನಡ ಸಾಹಿತ್ಯವನ್ನು
ಶ್ರೀಮಂತಗೊಳಿಸುವುದರೊಂದಿಗೆ ಸಂಸ್ಥೀಕರಣಗೊಂಡ ವಚನ
ಸಾಹಿತ್ಯವನ್ನು ಸಾಮಾಜೀಕರಣಗೊಳಿಸಿದ ಕೀರ್ತಿ ಸಿದ್ಧಯ್ಯ ಪುರಾಣಿಕರದು.

ಕನ್ನಡದ ಕಹಳೆ:
ಕನ್ನಡದ ವಿಶ್ವಕೋಶ ಯೋಜನೆ,ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಯೋಜನೆ,ಸರ್ಕಾರದಿಂದ ಪ್ರಕಟವಾದ ಸುಲಭಾವೃತ್ತಿಯ
ಲೀಲಾವತಿ ಪ್ರಬಂಧ,ಹರಿಶ್ಚಂದ್ರ ಕಾವ್ಯ, ಜೈಮಿನಿಭಾರತ,ವಚನ ಸಾಹಿತ್ಯ ಸಂಗ್ರಹ,ಸರ್ವಜ್ಞನ ವಚನಗಳಂಥ ಕೃತಿ ಪ್ರಕಟಣೆಯ
ಯೋಜನೆಗಳಲ್ಲಿ ಅವಿರಿತ ಪ್ರಯತ್ನ ಪುರಾಣಿಕರದು.

ವಿವಿಧ ಸೇವೆಯಲ್ಲಿ:
ಕನ್ನಡ ನಿಘಂಟು ಸಮಿತಿ ಸದಸ್ಯ,ಕೇಂದ್ರ-ರಾಜ್ಯ ಸಾಹಿತ್ಯ ಅಕಾಡೆಮಿಗಳ ಸದಸ್ಯತ್ವ,ಬಸವ ಸಮಿತಿಯ ಅಧ್ಯಕ್ಷ,ಬಸವಪಥ ಹಾಗೂ ಬಸವ ಜರ್ನಲ್‌ಗಳ ಪ್ರಧಾನ ಸಂಪಾದಕ,ಕರ್ನಾಟಕ ಜಾನಪದ
ಟ್ರಸ್ಟಿ,ಕನ್ನಡ ಸಂವರ್ಧಕ ಟ್ರಸ್ಟ್ ಅಧ್ಯಕ್ಷ,ಬಿ.ಎಂ.ಶ್ರೀ ಪ್ರತಿಷ್ಠಾನ,ಡಾ.ಸರೋಜಿನಿ ಮಹಿಷಿ ಸಮಿತಿಗಳಲ್ಲಿ ಸದಸ್ಯ,ಗೋಕಾಕ್ ಚಳುವಳಿಯ
ನೇತಾರರಾಗಿ ದುಡಿದ ಶ್ರೇಯಸ್ಸು ಇವರದು.

ಗೌರವ ಪುರಸ್ಕಾರ:
ಕುಲ್ಬುರ್ಗಿಯಲ್ಲಿ ೧೯೮೮ ರಲ್ಲಿ ನಡೆದ ೫೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಗೌರವಗಳು,ಪುರಸ್ಕಾರಗಳು ಪುರಾಣಿಕರನ್ನು ಅರಸಿಬಂದಿವೆ.ಉತ್ತಮ ಆಡಳಿತಗಾರರಾಗಿ,ಆಧುನಿಕ ವಚನಕಾರರಾಗಿ,ವೃತ್ತಿ ಹಾಗೂ ಪ್ರವೃತ್ತಿಯಿಂದ ಕನ್ನಡಿಗರ ಸೇವೆ ಅರ್ಥಪೂರ್ಣಗೊಳಿಸಿದ ಶ್ರೇಯಸ್ಸು ಇವರದು.ಇವರ ಕುರಿತು ಕುವೆಂಪು ಹೇಳುವಂತೆ ಜ್ಞಾನ,ಅಧಿಕಾರ, ವಿನಯ,ಸೌಜನ್ಯ ಹಾಗೂ ಸೃಜನಶೀಲತೆ
ಏಕತ್ರಗೊಳ್ಳುವುದು ಅಪರೂಪ,ಅದು ಸಿದ್ಧಯ್ಯ ಪುರಾಣಿಕರಲ್ಲಿ ಕಾಣಬಹುದು ಎಂದಿದ್ದಾರೆ.
ಡಾ.ಸಿದ್ಧಯ್ಯ ಪುರಾಣಿಕರು ಸೆಪ್ಟಂಬರ್ ೫.೧೯೯೪ ರಂದು ಪತ್ನಿ ಗಿರಿಜಾದೇವಿ,ಸುಪುತ್ರಿಯರಾದ ವಿಜಯಾ, ಶಿವಗೀತಾ,ಭಾರತಿ ಹಾಗೂ ಸುಪುತ್ರ ಪ್ರಸನ್ನ ಕುಮಾರ್ ಇವರನ್ನು ಬಿಟ್ಟು ದೇಹತ್ಯಾಗ ಮಾಡಿದರು. ನಾಡಿನಾದ್ಯಂತ ವಿವಿಧ ಹುದ್ಧೆಗಳಲ್ಲಿ ಕರ್ತವ್ಯ ನಿರ್ವಹಿಸಿ,ಕನ್ನಡ ನಾಡಿನಲ್ಲಿ ಜನಮನ್ನಣೆ ಪಡೆದು ಇಂದಿಗೂ ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದವರು ನಮ್ಮ ಪುರಾಣಿಕರು.

-ಡಾ.ಗಂಗಾಧರಯ್ಯ
ಹಿರೇಮಠ,ವಿಶ್ರಾಂತ ಪ್ರಾಧ್ಯಾಪಕರು,
ದಾವಣಗೆರೆ.
ಮೊ:೯೮೮೦೦೯೩೬೧೩.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ