ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹರ ಮುನಿದರೂ ಗುರು ಕಾಯ್ವನು..!!

“ಹರ ಮುನಿದರೂ ಗುರು ಕಾಯ್ವನು” ಎಂಬ ಅರ್ಥಗರ್ಭಿತವಾದ ನಾಣ್ಣುಡಿಯು ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಇದು ಗುರುವಿನ ಮಹತ್ವವನ್ನು, ಶಕ್ತಿಯನ್ನು ಮತ್ತು ಶ್ರೇಷ್ಠತೆಯನ್ನು ಗುರುತಿಸುವಂತಿದೆ.
ಕಾರಣ ಈ ಜಗತ್ತನ್ನೇ ಸೃಷ್ಟಿಸಿದ ಆ ಭಗವಂತ ಕೂಡಾ ಆಕಸ್ಮಿಕವಾಗಿ ಕೋಪಗೊಂಡಿದ್ದಾದರೆ ಅದನ್ನು ಶಮನ ಮಾಡಲು ಅಥವಾ ಅದರಿಂದ ವಿಮೋಚನೆ ಹೊಂದಲು ಗುರು ಅಥವಾ ಶಿಕ್ಷಕ ಬೇಕೆ ಬೇಕು ಅನ್ನೋದು ತ್ರಿಕಾಲ ಸತ್ಯವಾದ ಮಾತು.
ಒಂದುವೇಳೆ ಅದೇ ಗುರು ಕೋಪಗೊಂಡರೆ ಆಗ ದೇವರ ಹತ್ತಿರ ಹೋಗಿ ಕಾಪಾಡು ಎಂದರೆ ಯಾವ ದೇವರೂ ಕೂಡಾ ಕಾಪಾಡುವುದಿಲ್ಲ.
ಆದ್ದರಿಂದ ಗುರುವಿಗೆ ಅಗೌರವ ತೋರಿಸಿ ನಿಂದಿಸುವುದಾಗಲಿ, ಟೀಕೆ ಮಾಡುವುದಾಗಲಿ ಮಾಡಿದ್ದಾದರೆ ಏಳೇಳು ಜನ್ಮ ಕಳೆದರೂ ಕೂಡಾ ಆ ಭಗವಂತ ಅಂತವರನ್ನು ಕ್ಷಮಿಸಲಾರ, ಕಾಪಾಡಲಾರ. ಗುರುವಿನ ಮನ ನೋಯಿಸಿದ ಯಾವ ವ್ಯಕ್ತಿಯೂ ಕೂಡಾ ಸುಖವಾಗಿರಲು ಸಾಧ್ಯವಿಲ್ಲ, ಆ ಒಂದು ಪಾಪವು ಮಕ್ಕಳು, ಮೊಮ್ಮಕ್ಕಳವರೆಗೂ ಹರಡುತ್ತದೆ ಎಂಬುದು ಹಲವು ಅನುಭವಿಗಳು ಅನಿಸಿಕೆಯಾಗಿದೆ.
ಈ ಒಂದು ಕಹಿಸತ್ಯವನ್ನು ಎಲ್ಲರೂ ಒಮ್ಮೆ ವಿಶ್ಲೇಷಣೆ ಮಾಡಿ ನೋಡಿದಾಗ ಮೇಲೆ ಹೇಳಿದ ಮಾತು ಅಕ್ಷರಶಃ ನಿಜ ಎಂದೆನಿಸುತ್ತದೆ. ನಾವು ಕೆಲವು ಕುಟುಂಬಕ್ಕೆ ಭೇಟಿ ಕೊಟ್ಟಾಗ ಅದೆಷ್ಟೋ ಜನರು “ನಮ್ಮ ಮಗ/ಮಗಳು ತುಂಬಾ ಬುದ್ದಿವಂತನಿ/ಳಿದ್ದರೂ ಕೂಡಾ ಯಾವುದೇ ನೌಕರಿ ಸಿಗುತ್ತಿಲ್ಲ” ಎನ್ನುವ ಗೋಳಾಟವನ್ನು ನಾವೆಲ್ಲಾ ಸಾಮಾನ್ಯವಾಗಿ ಕೇಳಿಯೇ ಇರುತ್ತೇವೆ. ಅದಕ್ಕೆ ಅನೇಕ ಕಾರಣಗಳಿರಬಹುದು ಆದರೆ ಆ ವ್ಯಕ್ತಿ ತನ್ನ ಜೀವನದಲ್ಲಿ ಗುರುವನ್ನು ಅವಹೇಳನ ಮಾಡಿದ್ದನೆಂದರೆ ಅದು ಎಲ್ಲದಕ್ಕಿಂತಲೂ ಪ್ರಮುಖ ಕಾರಣವಾಗಿ ಅವನ ಜೀವನವು ಸರ್ವನಾಶ ಆಗುವಂತೆ ಮಾಡುತ್ತದೆ. ಅತ್ಯುತ್ತಮ ಅಂಕಗಳನ್ನು ಪಡೆದಾಗ್ಯೂ ಕೂಡಾ ಕೆಲವು ಜನರು ಜೀವನದಲ್ಲಿ ಯಶಸ್ಸು ಕಾಣುವುದಿರುವುದನ್ನು ನಾವು ಎಲ್ಲೆಡೆಯಲ್ಲೂ ನೋಡುತ್ತಿದ್ದೇವೆ. ಅದಕ್ಕೆ ಬಲವಾದ ಕಾರಣವೇನೆಂದರೆ ಗುರುವಿಗೆ ಮಾಡಿದ ನಿಂದನೆ, ಅವಮಾನ ಮತ್ತು ಅವಹೇಳನ.
ಇನ್ನೂ ಹಲವಾರು ಜನರು ಜಾಣರಲ್ಲದಿದ್ದರೂ ಕೂಡಾ ಅತ್ಯುನ್ನತ ಹುದ್ದೆಯನ್ನು ಪಡೆದುಕೊಂಡು ರ‍್ಯಾಂಕ್ ಪಡೆದವರಿಗಿಂತ ಮುಂಚೆಯೇ ಯಶಸ್ಸು ಸಾಧಿಸಿ ಜೀವನದಲ್ಲಿ ಬಡ್ತಿಯ ಮೇಲೆ ಬಡ್ತಿ ಪಡೆಯುತ್ತಾ ಸುಖವಾಗಿರುವ ಜನರನ್ನೂ ಕೂಡಾ ನಾವು ನೋಡುತ್ತಲಿದ್ದೇವೆ. ಇದು ವಿಪರ್ಯಾಸವೆಂದೆನಿಸಿದರೂ ಕೂಡಾ ನೈಜವಾದ ಸಂಗತಿಯಾಗಿದೆ.
ಹೀಗೆ ಇಂತಹ ಸಾವಿರಾರು ಸತ್ಯವಾದ ಘಟನೆಗಳು ಗುರುವಿನ ಮಹತ್ವವನ್ನು ಈಗಲೂ ಸಾರಿ ಸಾರಿ ಹೇಳುತ್ತವೆ. ಇತ್ತೀಚೆಗೆಂತೂ ಶಿಕ್ಷಕರಿಗೆ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ ಕೆಲವರು ಮಾತ್ರ, ಎಲ್ಲರೂ ಅಲ್ಲ. ಅದಕ್ಕಾಗಿಯೇ ಎಷ್ಟೇ ಓದಿದರೂ ಕೂಡಾ ಅದು ವ್ಯರ್ಥ ಪ್ರಯತ್ನವಾಗಿ ಹಾಳಾಗಿ ಹೋಗುತ್ತಿರುವುದು ಮತ್ತು ಕಳಪೆ ಫಲಿತಾಂಶ ಬರಲು ಕೂಡಾ ಇದುವೇ ಪ್ರಮುಖ ಕಾರಣವಾಗಿ ಹಿಂದುಳಿದ ಹಣೆಪಟ್ಟಿ ಕಟ್ಟಿಕೊಂಡು ತಿರುಗಾಡುವಂತೆ ಮಾಡಿದೆ. ಲೆಕ್ಕವಿಲ್ಲದಷ್ಟು ಇಂದಿನ ಕ್ರೌರ್ಯದ ಅಪರಾಧಗಳಿಗೂ ಕೂಡ ಗುರುನಿಂದನೆಯೇ ಹೆಚ್ಚಿನ ಕಾರಣವಾಗುತ್ತಿದೆ. ಕಾರಣ ಇಷ್ಟೇ ಒಬ್ಬ ವ್ಯಕ್ತಿ ಎಷ್ಟೇ ದಡ್ಡನಾಗಿರಲಿ ಅಥವಾ ಜಾಣನೇ ಆಗಿರಲಿ ಗುರುವಿನ ಬಗ್ಗೆ ಅಪಾರವಾದ ಭಯ, ಭಕ್ತಿಯನ್ನು ಇಟ್ಟುಕೊಂಡಿದ್ದಾದರೆ ಖಂಡಿತವಾಗಿಯೂ ಜೀವನದಲ್ಲಿ ಒಳ್ಳೆಯ ರೀತಿಯಲ್ಲಿ ಸೆಟಲ್ ಆಗುತ್ತಾನೆ. ಅಂತವರಿಗೆ ಗುರುವಿನ ಮತ್ತು ಆ ಭಗವಂತನ ಕೃಪಾಕಟಾಕ್ಷವು 100% ದೊರೆಯುತ್ತದೆ.
ಗುರುವಿನ ಆಶೀರ್ವಾದದಿಂದ ಮಾತ್ರದಿಂದಲೇ ಯಶಸ್ವಿಯಾದ ಏಕಲವ್ಯನಂತಹ ಅನೇಕ ಸತ್ಯವಾದ ದೃಷ್ಟಾಂತಗಳನ್ನು ನಾವು ಈಗಲೂ ನೋಡುತ್ತಿದ್ದೇವೆ ಎಂದರೆ ಗುರುವಿಗೆ ಇರುವ ಶಕ್ತಿಯನ್ನು ಎಲ್ಲರೂ ಚೆನ್ನಾಗಿ ಮನಗಂಡು ಅರಿತುಕೊಳ್ಳಬೇಕಾಗಿದೆ.
ಉಳಿದಿರುವ ನಮ್ಮ ಮುಂದಿನ ದಿನಗಳಲ್ಲಾದರೂ ಗುರುವನ್ನು ಪೂಜಿಸುವುದಂತೂ ಆಗಲಿಕ್ಕಿಲ್ಲ. ಕನಿಷ್ಟ ಪಕ್ಷ ಗುರುಗಳ ಬಗ್ಗೆ ಸದ್ಭಾವನೆ ಬೆಳೆಸಿಕೊಂಡು ಗೌರವ ನೀಡುತ್ತಾ, ಹೆಮ್ಮೆಯಿಂದ ಗುರುಗಳ ಬಗ್ಗೆ ಅಪಾರವಾದ ಭಯ,ಭಕ್ತಿಯನ್ನು ಇಟ್ಟುಕೊಂಡು ಸಾಗಿದರೆ ಮಹಾತ್ಮ ಗಾಂಧಿಜಿಯವರ ರಾಮರಾಜ್ಯದ ಕನಸು ನನಸಾಗೋದ್ರಲ್ಲಿ ಸಂಶಯವೇ ಇಲ್ಲ. ಗುರುವೇ ನಮಃ ಎನ್ನುವ ಮಂತ್ರವು ನಮ್ಮ ಬಾಳಿಗೆ ಬೆಳಕಾಗಿ ಯಶಸ್ಸನ್ನು ಪಡೆಯುವಲ್ಲಿ ಮಹತ್ತರ ಪಾತ್ರ ವಹಿಸಬಲ್ಲದು ಎನ್ನುವುದನ್ನು ಎಲ್ಲರೂ ಅರ್ಥೈಸಿಕೊಂಡು ಯಶಸ್ವಿಯಾಗೋಣ.

-ಶ್ರೀನಿವಾಸ.ಎನ್.ದೇಸಾಯಿ, ಶಿಕ್ಷಕರು.
ಸ.ಮಾ.ಹಿ.ಪ್ರಾ.ಶಾಲೆ ವಿದ್ಯಾನಗರ ಕುಷ್ಟಗಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ