ಅಜ್ಞಾನದ ದಟ್ಟ ಮರೆಯಲ್ಲಿ ದಿನಾಂಕ, ಯುಗ, ಅಥವಾ ಕಾಲಮಾನದ ಹಂಗಿಲ್ಲದ ಒಂದು ಹಳ್ಳಿ ಅದು.
ಅದರ ಹೆಸರು ‘ಮೂಢಲೋಕ’.
ದೇವಸ್ಥಾನಗಳ, ಪೂಜಾರಿಗಳ, ಮತ್ತು ನಿಯಮಗಳ ದಟ್ಟ ಹೊದಿಕೆಯಿಂದ ಮುಚ್ಚಿಹೋಗಿದೆ ಆ ಗ್ರಾಮ.
ಆಕಾಶ ಕಪ್ಪಾಗಿ ಮಳೆಯಾದರೆ–
“ದೇವರು ಕೋಪಗೊಂಡಿದ್ದಾನೆ, ಕಾಣಿಕೆ ಕೊಡಿ!” ಎಂದು ದೇವಾಲಯದ ಗುರುಗಳು ಕೂಗುತ್ತಾರೆ.
ಹಳ್ಳಿಯ ಬಡ ರೈತ ರಾಮಪ್ಪನ ಮಗಳಿಗೆ ಕಾಯಿಲೆ ಬಂದರೆ —
“ಇದು ನಿನ್ನ ಪೂರ್ವಜನ್ಮದ ಪಾಪಕರ್ಮ, ದೇವರಿಗೆ ಬಲಿ ಕೊಡು!” ಎಂದು ಪಂಡಿತರು ತೀರ್ಪು ನೀಡುತ್ತಾರೆ. ಗ್ರಾಮದ ಜನರು ದುಡಿಯುತ್ತಿದ್ದಾರೆ, ಆದರೆ ಅವರ ಬೆವರು ಕಲ್ಲಿನ ದೇವರುಗಳ ತಳಿಗೆ ಹರಿಯುತ್ತಿದೆ.
ಭಯ ಮತ್ತು ಅಜ್ಞಾನವೇ ಅಲ್ಲಿನ ಪ್ರಬಲ ಕಾನೂನಾಗಿದೆ.
ಆ ಗ್ರಾಮದ ಒಂದು ಮೂಲೆಯಲ್ಲಿ, ತನ್ನ ಪುಟ್ಟ ಮಣ್ಣಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದಾಳೆ ಒಬ್ಬ ವೃದ್ಧೆ.
ಆಕೆಯ ಹೆಸರು ಜ್ಞಾನಾಂಬೆ!
ಆಕೆ ಯಾವುದೇ ಪೂಜೆ-ಪುನಸ್ಕಾರ, ಉಪವಾಸ-ವ್ರತಗಳನ್ನು ನಂಬುವಳಲ್ಲ ಅವಳು!
ಅವಳು ತನ್ನ ಗುಡಿಸಲಿನ ಹಿಂಭಾಗದಲ್ಲಿ, ಕಲ್ಲು-ಮಣ್ಣು ತುಂಬಿದ ಜಮೀನಿನಿಂದ ಗಟ್ಟಿಯಾದ ಸ್ಥಳದಲ್ಲಿ ಒಂದು ಹಸಿರು ಗಿಡವನ್ನು ಬೆಳೆಸುತ್ತಿದ್ದಾಳೆ.
ಗ್ರಾಮಸ್ಥರಿಗೆ ಆಕೆ ಒಬ್ಬ ‘ನಾಸ್ತಿಕಳು’, ‘ಮೂರ್ಖಳು’, ಮತ್ತು ಶ್ರಮಣ ಸಂಸ್ಕೃತಿಯ ಪ್ರತೀಕವಾಗಿದ್ದಾಳೆ.
ಮಳೆಯಾಗದೆ ಆ ಗ್ರಾಮದಲ್ಲಿ ಭೀಕರ ಬರಗಾಲ ಬಂದಿದೆ.
ಮೇವು-ನೀರು ಇಲ್ಲದೆ ಜಾನುವಾರು ಸಾವನ್ನಪ್ಪುತ್ತಿವೆ.
ಬೆಳೆ ಒಣಗಿತ್ತಿವೆ.
ಗ್ರಾಮದ ಜನರು ದೇವರಿಗೆ ಗಂಟೆಗಟ್ಟಲೆ ಪೂಜೆ ಮಾಡಿದರು.
ಸಾವಿರಾರು ರೂಪಾಯಿಗಳ ಕಾಣಿಕೆ ಹಾಕಿದರು.
ಆದರೆ ಮಳೆ ಬರಲಿಲ್ಲ.
ರಾಮಪ್ಪ ತನ್ನ ಮಗಳಿಗೆ ಬರುವ ಕಾಯಿಲೆಗೆ ಪರಿಹಾರ ಸಿಗದೆ, ನಿರಾಶೆಗೊಂಡು ಜ್ಞಾನಾಂಬೆಯ ಬಳಿ ಬಂದನು.
ರಾಮಪ್ಪ–
“ಅವ್ವ, ನನ್ನ ಮಗಳು ನರಳುತ್ತಿದ್ದಾಳೆ. ಪೂಜಾರಿಗಳು, ‘ಇದು ಪಾಪಕರ್ಮ’ ಎನ್ನುತ್ತಿದ್ದಾರೆ. ದೇವರನ್ನು ಎಷ್ಟು ಪ್ರಾರ್ಥಿಸಿದರೂ ಮಳೆ ಬರುತ್ತಿಲ್ಲ. ನಾವು ಇನ್ನು ಏನು ಮಾಡಬೇಕು?”
ಜ್ಞಾನಾಂಬೆ ನಕ್ಕಳು.
ಆಕೆಯ ನಗು ವೈರತ್ವದ್ದಾಗಿರಲಿಲ್ಲ, ಬದಲಿಗೆ ಅಜ್ಞಾನದ ಮಸುಕಿನಲ್ಲಿ ಹೊಳೆಯುವ ಬೆಳಕಿನಂತಿದೆ ಅವಳ ಆ ನಗು.
ಜ್ಞಾನಾಂಬೆ (ತಾರ್ಕಿಕವಾಗಿ) —
“ರಾಮಪ್ಪ, ಸಿಡಿಲು ಏಕೆ ಬರುತ್ತದೆ? ಆಕಾಶದಲ್ಲಿನ ‘ವಿದ್ಯುತ್ ಶಕ್ತಿಗಳ ಘರ್ಷಣೆ’ಯಿಂದ, ದೇವರ ಕೋಪದಿಂದಲ್ಲ. ನಿನ್ನ ಮಗಳಿಗೆ ಕಾಯಿಲೆ ಏಕೆ ಬಂತು? ನೀರು ಸರಿಯಾಗಿ ಕುಡಿಯದ ಕಾರಣ, ಅಥವಾ ಕಲುಷಿತ ಆಹಾರದಿಂದ. ಇದರಲ್ಲಿ ಪೂರ್ವಜನ್ಮದ ಪಾಪ ಎಲ್ಲಿ ಬಂತು? ಇದು ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ಕೆಲಸ, ದೇವರದಲ್ಲ. ಪ್ರಕೃತಿಯ ಅಸಮತೋಲನ. ಮಣ್ಣು, ನೀರು, ಗಾಳಿ, ಬೆಂಕಿ… ಈ ನಾಲ್ಕು ಮಹಾಭೂತಗಳನ್ನು ಸರಿಪಡಿಸಬೇಕು, ಕಲ್ಲನ್ನು ಪೂಜಿಸುವುದರಿಂದ ಏನೂ ಆಗುವುದಿಲ್ಲ.”
(ಇಲ್ಲಿ ಆಕೆಯ ಮಾತುಗಳು ‘ಚಾರ್… (ಮೋಹಕ) ವಾಕ್’ – ಮೋಹಕವಾದ ಮಾತುಗಳಂತೆ ಇದ್ದವು).
ಆಕೆ ರಾಮಪ್ಪನಿಗೆ —
“ಕಣ್ಣಿಗೆ ಕಾಣದ ಸ್ವರ್ಗ-ನರಕ, ಪಾಪ-ಪುಣ್ಯದ ಸುಳ್ಳುಗಳಿಂದ ಹೊರಬಾ. ದೇಹವೇ ಆತ್ಮ. ಮರಣವೇ ಮೋಕ್ಷ. ನೀನು ಭೂಮಿ ಮೇಲೆ ಇರುವ ಈ ಜೀವನದಲ್ಲಿ ನಿನ್ನ ಮಗಳಿಗೆ ಒಳ್ಳೆಯ ಆಹಾರ, ಸ್ವಚ್ಛ ನೀರು ಕೊಟ್ಟು ಕಾಪಾಡು. ಅದುವೇ ನಿನ್ನ ಕರ್ಮ. ಇನ್ನೊಬ್ಬರ ಆಮಿಷಕ್ಕೆ ಬಿದ್ದು ದೇವರಿಗೆ ದಂಡ ಕಟ್ಟಬೇಡ. ಈ ಲೋಕಾಯುತ ದರ್ಶನವೇ ನಿಜ.”ಎಂದು ಹೇಳಿದಳು.
ರಾಮಪ್ಪನಿಗೆ ಜ್ಞಾನಾಂಬೆಯ ಮಾತು ಹೊಸ ಪ್ರಪಂಚವನ್ನು ತೆರೆದಂತೆ ಕಂಡಿತು.
ದಾರ್ಶನಿಕವಾದ, ವೈಚಾರಿಕವಾದ ಈ ಮಾತುಗಳನ್ನು ಆತ ಮೊದಲು ಕೇಳಿರಲಿಲ್ಲ.
ರಾಮಪ್ಪ ಮರು ದಿನದಿಂದ ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿದನು.
ಅವನು ಮೊದಲು ಜ್ಞಾನಾಂಬೆಯ ಸಹಾಯದಿಂದ ತನ್ನ ಗ್ರಾಮದ ಕೆರೆಗಳನ್ನು ಸ್ವಚ್ಛಗೊಳಿಸಿದನು. ಪೂಜೆ-ಪ್ರಾರ್ಥನೆಗಳಿಗೆ ಬಳಸುತ್ತಿದ್ದ ಹಣದಲ್ಲಿ ಹಳ್ಳಿಗೆ ಸ್ವಚ್ಛ ನೀರಿನ ತೊಟ್ಟಿಯನ್ನು ನಿರ್ಮಿಸಿದನು.
ಮಗಳಿಗೆ ಕಾಯಿಲೆಯು ಹೆಚ್ಚಾಗಿದ್ದರಿಂದ ವೈದ್ಯರ ಬಳಿ ಕರೆದೊಯ್ದನು.
“ಇಂದಿನಿಂದ ನನ್ನ ನಿಜವಾದ ದೇವರು ಯಾರು ಗೊತ್ತೇ? ಸೂರ್ಯ – ಏಕೆಂದರೆ ಬೆಳಕು ಕೊಡುವವನು. ಭೂಮಿ – ಏಕೆಂದರೆ ಅನ್ನ ಕೊಡುವವಳು. ನದಿ – ಏಕೆಂದರೆ ನೀರು ಕೊಡುವವಳು. ಇವೆಲ್ಲವೂ ಕಣ್ಣಿಗೆ ಕಾಣುವ ದೇವರುಗಳು ” ಎಂದು ಹೇಳಿದನು ರಾಮಪ್ಪ.
ರಾಮಪ್ಪ ದುಡಿಯಲು ಶುರು ಮಾಡಿದನು.
ತನ್ನ ದುಡಿಮೆಯಿಂದ ಬಂದ ಹಣವನ್ನು ದೇವರಿಗೆ ಅರ್ಪಿಸುವುದರ ಬದಲು, ತನ್ನ ಮತ್ತು ತನ್ನ ಕುಟುಂಬದ ಜೀವನ ಮಟ್ಟ ಸುಧಾರಿಸಲು ಬಳಸಿದನು. ಇತರ ಗ್ರಾಮಸ್ಥರು ಆತನನ್ನು ಹೀಯಾಳಿಸಿದರು —
“ನೀನು ಧರ್ಮದ್ರೋಹಿ, ನಿನಗೆ ಪಾಪ ಸುತ್ತುತ್ತದೆ!” ಎಂದರು.
ಆದರೆ, ರಾಮಪ್ಪನ ಕೃಷಿ ಇತರೆ ಎಲ್ಲರ ಬೆಳೆಗಳಿಗಿಂತ ಚೆನ್ನಾಗಿತ್ತು ಮತ್ತು ಆತನ ಮಗಳು ಚೇತರಿಸಿಕೊಂಡಳು.
ಮೂಢಲೋಕದ ಜನರು ರಾಮಪ್ಪನ ಬದಲಾವಣೆಯನ್ನು ಕಂಡರು.
ಕಲ್ಲು ದೇವರನ್ನು ನಂಬಿ ಹಸಿದಿದ್ದ ಅವರ ಮನಸ್ಸಿಗೆ, ರಾಮಪ್ಪನ ಸಂಪತ್ತು ಮತ್ತು ಸಂತೋಷ ಚುಚ್ಚತೊಡಗಿತು.
ಒಬ್ಬ ಗ್ರಾಮಸ್ಥ ಬಂದು ಜ್ಞಾನಾಂಬೆಯನ್ನು ಕೇಳಿದನು —
“ಅವ್ವ, ನಾವು ಇಷ್ಟು ದಿನ ದೇವರಿಂದ ಯುದ್ಧ, ರಕ್ತಪಾತ, ಅನ್ಯಾಯವನ್ನು ಕಂಡೆವು. ಧರ್ಮದಿಂದಾಗಿ ನಮ್ಮಲ್ಲಿ ಜಾತಿ-ಭೇದ ಹೆಚ್ಚಾಯಿತು. ಆದರೆ, ರಾಮಪ್ಪನಿಂದ ನಾವು ನಮ್ಮ ಕಣ್ಣಿಗೆ ಕಾಣುವ ಪ್ರಕೃತಿ ಮತ್ತು ದುಡಿಮೆಯ ಶಕ್ತಿಯನ್ನು ಕಂಡೆವು. ನಮಗೆ ನಾವೇ ಗುಂಡಾಗಳಾಗಿದ್ದೆವು.”
ಜ್ಞಾನಾಂಬೆ ಶಾಂತವಾಗಿ ಉತ್ತರಿಸಿದಳು:
”ನೋಡಿ, ಚಾರ್ವಾಕ ಅಂದರೆ ವ್ಯಕ್ತಿಯಲ್ಲ, ಧರ್ಮವಲ್ಲ. ಚಾರ್ವಾಕ ಅಂದರೆ ಎಚ್ಚರಗೊಂಡ ತಾರ್ಕಿಕವಾದಿ ಮಹಾ ಚಿಂತಕ. ಈ ನೆಲದಲ್ಲಿ ಹುಟ್ಟಿದ ವೈಚಾರಿಕ ವಿಚಾರಧಾರೆ. ಜಾತಿ-ಧರ್ಮದ ಅನಿಷ್ಟಗಳನ್ನು ಮರೆತು, ನಾವು ಬೇರೆ ಬೇರೆ ಜಾತಿಯವರಲ್ಲ, ಒಂದೇ ಮನುಷ್ಯ ಜಾತಿಗೆ ಸೇರಿದವರು ಎಂದು ತಿಳಿಯುವುದು ಚಾರ್ವಾಕ. ನಿಮ್ಮ ಭಯೋತ್ಪಾದನೆಯನ್ನು ಹೋಗಲಾಡಿಸಿದ್ದು ಕಾಣದ ದೇವರಲ್ಲ, ಬದಲಿಗೆ ನಿಮ್ಮ ಹಣೆಯ ಮೇಲೆ ಉರಿಸಿದ ಜ್ಞಾನದ ದೀಪ. ಜ್ಞಾನದ ಜ್ಯೋತಿ ಅರಳಲಿ, ವಿಜ್ಞಾನ ಬೆಳೆಯಲಿ. ಇದೆ ನಿಮ್ಮ ನಿಜವಾದ ಮೋಕ್ಷ.”
ಜ್ಞಾನಾಂಬೆ ತನ್ನ ಕಣ್ಣಿಗೆ ಕಾಣುವ ನಾಲ್ಕು ಮಹಾಭೂತಗಳನ್ನು ಪೂಜಿಸುತ್ತಾ, ‘ಚಾರ್ವಾಕ’ ಎಂಬ ಸಿದ್ಧಾಂತವನ್ನು ಗ್ರಾಮಸ್ಥರ ಜೀವನದಲ್ಲಿ ಅರಳಿಸಿದಳು. ಮೂಢಲೋಕವು ನಿಧಾನವಾಗಿ ‘ಜ್ಞಾನಲೋಕ’ ವಾಗಿ ಪರಿವರ್ತನೆಯಾಗತೊಡಗಿತು.

-- ಜಿ ಎಲ್ ನಾಗೇಶ್



















