ಪಾವಗಡ: ತಾಲೂಕಿನ ಜನರ ಮತ ಪಡೆದು ಅಧಿಕಾರ ಪಡೆದ ಶಾಸಕ ಅಕ್ರಮ ಕಲ್ಲು ಗಣಿಗಾರಿಕೆ ಸಹಕರಿಸದ ಬಡ, ನಿರ್ಗತಿಕ ರೈತರ ಮೇಲೆ ತುಗಲಕ್ ಸರ್ಕಾರದಂತೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಎಎಪಿ ಜಿಲ್ಲಾ ಕಾರ್ಯದರ್ಶಿ ರಾಮಾಂಜಿನಪ್ಪ ಆರೋಪಿಸಿದ್ದಾರೆ.
ಶುಕ್ರವಾರ ಪಟ್ಟಣದ ಎಎಪಿ ತಾಲ್ಲೂಕು ಕಛೇರಿಯಲ್ಲಿ ದೌರ್ಜನ್ಯಕ್ಕೊಳಗಾದ ರೈತರ ಸಮ್ಮುಖದಲ್ಲಿ ಹಮ್ಮಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಶಾಸಕರ ಒಡೆತನದ ವೆಂಕಟೇಶ್ವರ ಕಲ್ಲು ಗಣಿಗಾರಿಕೆ ಬಗ್ಗೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ವೇಳೆ ಕಲ್ಲು ಗಣಿಕಾರಿಗೆ ಗಣಿಗಾರಿಕೆಯ ಕಾರ್ಮಿಕರಿಗೆ ಶೆಡ್ಡು , ಗೆಸ್ಟ್ ಹೌಸ್, ದಾಸ್ತಾನು ಮಾಡಿಕೊಂಡಿರುವ ಜಮೀನು ಸರ್ಕಾರದ್ದೇ ಅಥವಾ ಮಂಜುರಿ ಚಿಮಿಣಿ ಎಂದು ಪ್ರಶ್ನಿಸಲಾಗಿತ್ತು. ಸರ್ವೆ ಕಾರ್ಯ ನಡೆಸಿ ರೈತರಿಗೆ ನ್ಯಾಯ ದೊರಕಿಸಿ ಕೊಡುವಂತೆ ದೂರು ಸಹ ನೀಡಲಾಗಿದೆ.
1993-94ನೇಸಾಲಿನಲ್ಲಿ ಹನುಮಂತನಹಳ್ಳಿ ಗ್ರಾಮದ ನಾಯಕ ಸಮುದಾಯದ ಹನುಮಪ್ಪ ಬಿನ್ ರಂಗಪ್ಪ, ಅಕ್ಕಮ್ಮ ಕೋ ಲೇ ಈರಪ್ಪ, ಹನುಮಪ್ಪ ಬಿನ್ ಪಾಲಯ್ಯ ಈ ಮೂವರಿಗೆ ತಿಪ್ಪಯ್ಯನದುರ್ಗ ಗ್ರಾಮದ ಸರ್ವೆ ನಂಬರ್ 42 ರಲ್ಲಿ ತಲಾ ಎರಡು ಎಕರೆಯಂತೆ ಜಮೀನು ಮಂಜೂರು ಮಾಡಲಾಗಿತ್ತು, ಸದರಿ ಜಮೀನಿನಲ್ಲಿ ಇಲ್ಲಿವರೆಗೆ ವ್ಯವಸಾಯ ಮಾಡಿಕೊಂಡಿದ್ದು, ಇಲ್ಲಿಯವರೆಗೆ ರೈತರು ಜಮೀನಿನಲ್ಲಿ ಕಾಲಿಡದಂತೆ ಭಯ ಪಡಿಸಿಕೊಂಡಿದ್ದಾರೆ. ಕಲ್ಲು ಗರಣಿಗಾರಿಕೆ ಪ್ರಾರಂಭವಾದಾಗಿನಿಂದ ಇವರ ವಾಣಿಜ್ಯ ಲಾಭಕ್ಕಾಗಿ ಕಲ್ಲುಗಣಿಗಾರಿಕೆಗೆ ಸರ್ಕಾರಿ ರಸ್ತೆ ಇಲ್ಲದಿದ್ದರೂ ದೌರ್ಜನ್ಯದಿಂದ ಮಂಜೂರಿ ಜಮೀನಿನಲ್ಲೇ ಓಡಾಡಿಕೊಂಡು ನಿರ್ಗತಿಕ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅಲ್ಲದೆ ರೈತರ ಜಮೀನಿನಲ್ಲಿ ಅಕ್ರಮವಾಗಿ ಗೆಸ್ಟ್ ಹೌಸ್ , ಕಾರ್ಮಿಕರ ಶಡ್, ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ. ಬ್ಲಾಸ್ಟಿಂಗ್ ನಿಂದ, ಜಲ್ಲಿ ಸಾಗಾಟದಿಂಚ ಬರುವ ಧೂಳಿನಿಂದ ಸುತ್ತಮುತ್ತಲಿನ ಜಮೀನಿನಲ್ಲಿಟ್ಟ ಬೆಳೆ, ಮರ-ಗಿಡಗಳು ಬಾಡಿ ಹೋಗಿ ರೈತರು ನಷ್ಟಕ್ಕೆ ಸಿಲುಕಿದ್ದಾರೆ. ಶಾಸಕರು ಮಾತ್ರ ತಾಲ್ಲೂಕಿನ ಜನರ ಮತ ಪಡೆದು ಅಧಿಕಾರದ ಮಧದಿಂದ ಬಡ ನಿರ್ಗತಿಕ ರೈತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿರುವುದು ತಾಲ್ಲೂಕಿನಲ್ಲಿ ತುಗಲಕ್ ಸರ್ಕಾರದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಾದಿತ ರೈತ ಶ್ರೀರಂಗಪ್ಪ ಮಾತನಾಡಿ ಭೂ ಮಂಜೂರಿ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದು, 2014 ರಲ್ಲಿ ಹಾಲಿ ಶಾಸಕರ ಮತ್ತು ಪತ್ನಿ ಶಶಕಲಾ ರವರ ಒಡೆತನದಲ್ಲಿ ಅದೇ ಸರ್ಕಾರಿ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ಪ್ರಾರಂಭವಾಗಿದೆ. ಕಲ್ಲು ಗಣಿಗಾರಿಕೆಯಿಂದ ಬರುವ ಧೂಳಿನಿಂದ ಬೆಳೆ ಬಾರದಂತಾಗಿದೆ, ಮರಗಿಡಗಳು ಒಣಗುತ್ತಿವೆ. ಮಂಜೂರಾದ ಜಮೀನಿನಲ್ಲಿ ಅಕ್ರಮವಾಗಿ ರಸ್ತೆ ಮಾಡಿಕೊಂಡು ವಾಣಿಜ್ಯ ಉದ್ದೇಶಕ್ಕೆ ವಾಹನಗಳನ್ನು ಓಡಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ಗ್ರಾಮಸ್ಥರ ಮತ್ತು ನಮ್ಮಗಳ ನಡುವೆ ಕಂದಕ ಸೃಷ್ಠಿಸಿ ಹೊಡೆಸಿ ಬಡಿಸುತ್ತಿದ್ದಾರೆ. ಸುಖಾ ಸುಮ್ಮನೆ ಪೊಲೀಸರನ್ನು ಬಳಸಿಕೊಂಡು ಪ್ರಕರಣ ದಾಖಲಿಸಲಾಗುವುದೆಂದು ಹೆದರಿಸುತ್ತಿದ್ದಾರೆ. ಅತಿಕ್ರಮ ಬಗ್ಗೆ ಕೇಳಿದರೆ ದ್ವೇಷದಿಂದ ಶಾಸಕರ ಅಧಿಕಾರ ಬಳಿಸಿಕೊಂಡು ಸೋಲಾರ್ ಕಂಪನಿಯಲ್ಲಿ ಮಾಡುತ್ತಿದ್ದ ಮಗನನ್ನು ಕೆಲಸವನ್ನು ತೆಗೆಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಗೆಸ್ಟ್ ಟೀಚರ್ ಕೆಲಸ ಮಾಡುತ್ತಿದ್ದ ನನ್ನ ಮಗಳನ್ನು ಸಹ ಕೆಲಸದಿಂದ ತೆಗೆಸಿದ್ದಾರೆ. ಈಗ ನಮಗೆ ಜಮೀನು ಇಲ್ಲ, ಉದ್ಯೋಗವೂ ಇಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ. ನಮ್ಮ ಮೇಲೆ ಸುಳ್ಳು ಕೇಸುಗಳನ್ನು ಹಾಕಲು ಯತ್ನಿಸುತ್ತಿದ್ದಾರೆ. ಶಾಸಕರ ಸ್ವಗ್ರಾಮದ ಮನೆಯ ಎದುರಿಗೆ ಇರುವ ನಾವು ತಂದೆಯ ಕಾಲದಿಂದಲೂ ಇವರ ಪಕ್ಷಕ್ಕಾಗಿ ದುಡಿದಿದ್ದಕ್ಕೆ ನಮಗೆ ಸಿಕ್ಕ ಪ್ರತಿಫಲ ಇದೇನಾ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರ ಮಧ್ಯಪ್ರವೇಶಿಸಿ ತಮಗೆ ನ್ಯಾಯ ಕೊಡಿಸಬೇಕೆಂದು ಅವಲತ್ತುಕೊಂಡಿದ್ದಾರೆ.
ರೈತ ನಾಗಪ್ಪ ಮಾತನಾಡಿ ಸರ್ವೇ ನಂಬರ್ 41/1 ಮೂರು ಎಕರೆ ಜಮೀನಿದ್ದು, ಸಾಲ ಮಾಡಿ ಕೊಳೆಬಾವಿ ಕರೆಸಿಕೊಂಡು ಮಾವು ಮತ್ತು ಹುಣಸೆ ಮರಗಳನ್ನು ಹಾಕಿದ್ದು, ಶಾಸಕರ ಒಡೆತನದ ಕಲ್ಲುಗಣಿಗಾರಿಕೆಯಿಂದ ಬರುವ ಧೂಳಿನಿಂದ ಫಸಲಿಗೆ ಬಂದಿರುವ ಮರ ಗಿಡಗಳು ಬಾಡಿ ಹೋಗುತ್ತಿವೆ. ಈ ಬಗ್ಗೆ ಕಳೆದ 7 ವರ್ಷದಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇಲ್ಲಿವರೆಗೆ ಯಾವುದೇ ಕ್ರಮ ವಹಿಸಿಲ್ಲ. ಅಧಿಕಾರಿಗಳು ಸಹ ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ವ್ಯವಸಾಯ ನಮಗೆ ಜೀವನಾಧಾರವಾಗಿದ್ದು, ಸಮಸ್ಯೆ ಬಗೆಹರಿಸದಿದ್ದರೆ ತಾಲೂಕು ಕಚೇರಿ ಮುಂದೆ ಕುಟುಂಬ ಸಮೇತರಾಗಿ ವಿಷ ಸೇವನೆ ಮಾಡಿ ಸಾಯುತ್ತೇವೆಂದು ಎಚ್ಚರಿಸಿದರು.
ಈ ವೇಳೆ ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ, ಅಕ್ಕಮ್ಮ ರವರ ಸೋದರ ಗುಡಪಲ್ಲಿ ರಂಗಪ್ಪ ಮಾತನಾಡಿದರು.
ಈ ವೇಳೆ ಎಎಪಿ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ನಾರಾಯಣಪ್ಪ, ಬಾದಿತ ರೈತರ ಸಂಬಂಧಿ ಗುಡುಪಲ್ಲಿ ರಂಗಪ್ಪ, ಹೊಸಹಳ್ಳಿ ಸ್ವಾಮಿ ನಾಯ್ಕ ಸೇರಿದಂತೆ ರೈತರು ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.




















