ಬಳ್ಳಾರಿ / ಕಂಪ್ಲಿ : ಎಲ್ಎಲ್ಸಿ ಕಾಲುವೆಯ ಸೂಗೂರು ಡಿಸ್ಟಿಬ್ಯೂಟರ್ನಲ್ಲಿ ಬರುವ 14ನೇ ಮೈಲು ಕಾಲುವೆಗಳಿಗೆ ಸಮರ್ಪಕ ನೀರು ಪೂರೈಯಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಂಪ್ಲಿ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ಪಟ್ಟಣದ ನೀರಾವರಿ ಉಪ ವಿಭಾಗದ ಕಛೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ನಂತರ ಎಇಇ ಶ್ರೀನಿವಾಸಗೆ ಮನವಿ ಪತ್ರ ಸಲ್ಲಿಸಿದರು.
ನಂತರ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಮತ್ತು ತಾಲೂಕು ಅಧ್ಯಕ್ಷ ವಿ.ವಿರೇಶ ಮಾತನಾಡಿ, ತುಂಗಭದ್ರಾ ಜಲಾಶಯ ರೈತರ ಜೀವನಾಡಿಯಾದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ ರೈತ ಜೀವ ಅಪಾಯದಲ್ಲಿದೆ. ಈಗಾಗಲೇ ಕಳೆದ ಬಾರಿ ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ಸಹ ಹೊಸ ಗೇಟ್ಗಳ ಅಳವಡಿಕೆಯಲ್ಲೇ ಬೆಳೆಗಳನ್ನು ಕಳೆದುಕೊಂಡಿದ್ದೀವಿ. ಪ್ರಸ್ತುತವಾಗಿ ಜಲಾಶಯದಲ್ಲಿ ಸುಮಾರು 95 ಟಿಎಂಸಿಯಷ್ಟು ನೀರಿದೆ. ಆದರೆ, ಇಲ್ಲಿನ ಎಲ್ಎಲ್ಸಿ ಕಾಲುವೆಯ ಕೆಳ ಭಾಗದ ಸೂಗೂರು ಡಿಸ್ಟಿಬ್ಯೂಟರ್ ಬಳಿಯ 14ನೇ ಮೈಲು ಇ-ಕಾಲುವೆಗಳಿಗೆ ಸಮರ್ಪಕವಾಗಿ ನೀರಿಲ್ಲದಂತಾಗಿದೆ. ಇಲ್ಲಿ ಸಾವಿರಾರು ಎಕರೆಯಷ್ಟು ರೈತರು ಜಮೀನುಗಳಿದ್ದು, ನೀರಿಲ್ಲದೇ ಬೆಳೆ ಬೆಳೆಯುವುದಕ್ಕೆ ಆಗುತ್ತಿಲ್ಲ. ಅನಧಿಕೃತ ಪೈಪ್ಗಳ ಹಾವಳಿ ಹೆಚ್ಚಾಗಿದೆ. ನೀರಾವರಿ ಇಲಾಖೆಯ ಎಇಇ ಸೇರಿದಂತೆ ಮೇಲಿನ ಅಧಿಕಾರಿಗಳ ಬೇವಾಬ್ದಾರಿಗೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈಗಾಗಲೇ ಈ ಭಾಗದ ರೈತರು ಭತ್ತದ ಸಸಿಗಳನ್ನು ಹಾಕಿ ನೀರಿಗಾಗಿ ಕಾಯುತ್ತಿದ್ದಾರೆ. ಆದರೂ ಸಹ ನೀರಿಲ್ಲದಂತಾಗಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಗೂರು ಡಿಸ್ಟಿಬ್ಯೂಟರ್ನ 14ನೇ ಮೈಲು ಇ-ಕಾಲುವೆಗಳಿಗೆ ನೀರನ್ನು ಸಮರ್ಪಕವಾಗಿ ಹರಿಸಬೇಕು. ಇಲ್ಲವಾದಲ್ಲಿ ರೈತರು ಹೋರಾಟ ಉಗ್ರ ತಾಳುತ್ತದೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೊಟ್ಟೂರು ರಮೇಶ, ಕಾಗಿ ಈರಣ್ಣ, ಬಿ.ನಾಗರಾಜ, ಬಿ.ಮಲ್ಲಿಕಾರ್ಜುನ, ಸಣ್ಣ ಜಡೆಪ್ಪ, ಸುಮಂತ್ ಸ್ವಾಮಿ, ಬಿ.ಬಸವರಾಜ, ರಾಜ, ವಿರೇಶ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















