ಬಳ್ಳಾರಿ / ಕಂಪ್ಲಿ : ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಂಪ್ಲಿ, ಅಕ್ಕ ಮಹಾದೇವಿ ಮಹಿಳಾ ಮಂಡಳಿ, ಅಕ್ಷತಾ ಪ್ಲವರ್ ಸ್ಟಾಲ್ ಸಹಯೋಗದಲ್ಲಿ ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಮಕ್ಕಳಿಗೆ ರಾಧಾ ಕೃಷ್ಣ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಮನಸ್ಸು ಹೂವಿನ ಹಾಗ ಇರುತ್ತದೆ, ಹಾಗೂ ಚಿಕ್ಕ ಮಕ್ಕಳಿಗೆ ಯಾವುದೇ ವೇಷಭೂಷಣ ತೊಡಸಿದರೂ ಅಂದ ಚೆಂದವಾಗಿ ಕಾಣುತ್ತಾರೆ, ಹಿಂದಿನ ಇತಿಹಾಸ ತಿಳಿಸುವ ಪಾತ್ರಗಳು ಮಕ್ಕಳಿಗೆ ಅರಿವು ಮೂಡಿಸಲು ಇಂತಹ ಸ್ಪರ್ಧೆಗಳು ಸಹಕಾರಿ, ಚಿಕ್ಕ ಮಗು ಇರುವಾಗಲೇ ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಬೆಳೆಸಬೇಕು. ಇಂದಿನ ಮಕ್ಕಳಲ್ಲಿ ನೈತಿಕತೆ ಕಾಣೆಯಾಗುತ್ತಿದೆ. ಹೀಗಾಗಿ ಪಾಲಕರು ಮಕ್ಕಳಿಗೆ ಉತ್ತಮ ದಾರಿ ತೋರುವಂತಾಗಬೇಕು, ಪರಸ್ಪರ ವಿಶ್ವಾಸ ಪ್ರೀತಿಯಿಂದ ಇರುವಂತೆ ನೋಡಿಕೊಳ್ಳಬೇಕು. ಚಿಕ್ಕ ಮಕ್ಕಳಲ್ಲಿ ಪಾಲಕರು ಎಂದಿಗೂ ಮೊಬೈಲ್ ಕೊಡಬಾರದು, ಈ ಗೀಳು ಬೆಳೆಯಿತು ಎಂದರೆ ಶಿಕ್ಷಣದ ಕಡೆಗೆ ಒಲವು ಕಡಿಮೆಯಾಗುತ್ತದೆ ಎಂದರು.
ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಕಲಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯ ಎಂದರು.
ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಧಾ ಕೃಷ್ಣ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತರಾದ ಸಹಸ್ರ ಲಕ್ಷ್ಮಿ(ಪ್ರಥಮ), ನಂದನ್(ದ್ವಿತೀಯ), ಗಿಪ್ಲಾ(ತೃತೀಯ), ಇಷಾ(ನಾಲ್ಕನೇ ಸ್ಥಾನ) ಇವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಘನಮಠ ಸ್ವಾಮಿ, ಜನ ಜಾಗೃತಿ ಉಪಾಧ್ಯಕ್ಷೆ ಮಹೇಶ್ವರಿ, ಅಕ್ಕ ಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದಾ ಹಿರೇಮಠ, ಸಹಕಾರ್ಯದರ್ಶಿ ಬಿ.ಎಂ.ಪುಷ್ಪಾ, ಒಕ್ಕೂಟದ ಅಧ್ಯಕ್ಷೆ ನಿರ್ಮಲಾ, ನಿರ್ಣಾಯಕರಾದ ಬನಶಂಕರಿ, ಶಿಲ್ಪ ದರೋಜಿ, ಸಮನ್ವಯಾಧಿಕಾರಿ ಮಂಜುಳಾ, ಮೇಲ್ವಿಚಾರಕಿ ಮಂಜುಳಾ, ಕೃಷಿ ಅಧಿಕಾರಿ ಸಂಜೀವಕುಮಾರ ಸೇರಿದಂತೆ ಸೇವಾ ಪ್ರತಿನಿಧಿಗಳು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















