
ರೋಣ: ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಹಾಗೂ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಣ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಮಾಕಾಂತ ಕಮತಗಿ ಅವರು ಮಾತನಾಡಿ, “ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಒಲವು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ನಾಡು-ನುಡಿಯ ಸೇವೆಗೆ ಸದಾ ಬದ್ಧವಾಗಿದ್ದು, ಯುವ ಪೀಳಿಗೆಯಲ್ಲಿ ಭಾಷಾಭಿಮಾನ ಮೂಡಿಸಲು ಇಂತಹ ಜಂಟಿ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ,” ಎಂದು ತಿಳಿಸಿದರು.
ಸಂಸ್ಕೃತಿಯ ಹಿರಿಮೆ ಎತ್ತಿಹಿಡಿದ ಉಪನ್ಯಾಸಕರು :
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಶೇಷ ಉಪನ್ಯಾಸ ನೀಡಿದ ಪ್ರಮುಖರಾದ ಕಾಶಿನಾಥ್ ಸಾಲಿಮಠ ಅವರು ಸಾಹಿತ್ಯ ಮತ್ತು ಭಾಷೆಯ ಮಹತ್ವದ ಕುರಿತು ಆಳವಾಗಿ ಮಾತನಾಡಿದರು.
ನಂತರ ಇನ್ನೋರ್ವ ವಿಶೇಷ ಉಪನ್ಯಾಸಕರಾದ ವಿ. ಕೆ. ಪಾಟೀಲ ಅವರು ಮಾತನಾಡಿ, ಕನ್ನಡ ನಾಡಿನ ಭವ್ಯ ಇತಿಹಾಸ ಹಾಗೂ ಇಲ್ಲಿನ ಜನರ ಶ್ರೀಮಂತ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಗಣ್ಯರ ಉಪಸ್ಥಿತಿ:
ವೇದಿಕೆಯ ಮೇಲೆ ಕಾಲೇಜಿನ ಪ್ರಾಚಾರ್ಯರಾದ (ಪ್ರಿನ್ಸಿಪಾಲ್) ಎಂ. ಎಚ್. ಅರಹುಣಸಿ ಹಾಗೂ ಕಸಾಪ ತಾಲ್ಲೂಕು ಸಂಘಟನಾ ಕಾರ್ಯದರ್ಶಿಯಾದ ಪಿ. ಬಿ. ಪಾಟೀಲ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರುಗಳಾದ ವಿ. ಡಿ. ಬಡಿಗೇರ, ಸರಸ್ವತಿ ದೊಡ್ಡಮನಿ, ಡಿ. ಎ. ತಹಶೀಲ್ದಾರ್, ಎಸ್. ಎಚ್. ದರಗಾದ, ಸುನೀಲ ಗಾಡಗೊಳ್ಳಿ, ಮಂಜು ಹೂವಿನಹಾಳ ಹಾಗೂ ಪ್ರತಿಭಾ ಕುರಿ ಸೇರಿದಂತೆ ಕಾಲೇಜಿನ ಉಪನ್ಯಾಸಕ ವೃಂದ, ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ವರದಿ ಶರಣಪ್ಪಗೌಡ ಸಕ್ಕರಗೌಡರ




















