ಬಳ್ಳಾರಿ / ಕಂಪ್ಲಿ : ನಂ.10 ಮುದ್ದಾಪುರ ಗ್ರಾ. ಪಂ. ಯ ವ್ಯಾಪ್ತಿಯ ಬೆಳಗೋಡ್ಹಾಳ್ ಗ್ರಾಮದಲ್ಲಿ ನೆನೆಗುದಿಗೆ ಬಿದ್ದಿದ್ದ ಖಬರುಸ್ತಾನ್ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸುವಂತೆ ಸಂಬಂಧಿಸಿದವರಿಗೆ ಸೂಚಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇತ್ತೀಚೆಗೆ ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಶಾಸಕರ ಕಛೇರಿಗೆ ಮುಸ್ಲಿಂ ಸಮಾಜದವರು ಭೇಟಿ ನೀಡಿ, ಸಮಾಜದ ಅಭಿವೃದ್ಧಿಗೆ ಸಂಬಂಧಿಸಿಡಂತೆ ಚರ್ಚಿಸಿದಾಗ ಮಾತನಾಡಿ, ಮುಸ್ಲಿಂ ಸಮಾಜದವರು ವೈಯಕ್ತಿಕತೆಯನ್ನು ಬದಿಗಿಟ್ಟು, ಒಗ್ಗೂಡಿದಾಗ ಮಾತ್ರ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಮುಸ್ಲಿಂ ಸಮಾಜದವರು ಮುಂದಾಗಬೇಕು. ಪ್ರತಿಯೊಂದು ಹಂತದಲ್ಲಿ ನಿಮ್ಮ ಜೊತೆಗಿದ್ದು, ಸಮಾಜದ ಏಳಿಗೆಗೆ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸದಾ ಸಿದ್ಧ ಎಂದರು.
ಮುಸ್ಲಿಂ ಸಮಾಜದ ಯುವ ಮುಖಂಡ ಬಿ.ನಬೀಸಾಬ್ ಮಾತನಾಡಿ, ಬೆಳಗೋಡ್ಹಾಳ್ ಗ್ರಾಮದಲ್ಲಿ ಮುಸ್ಲಿಂ ಸಮಾಜದವರು ವಾಸಿಸುತ್ತಿದ್ದು, ಇಲ್ಲಿನ ಮೃತರ ದಫನ್ ಮಾಡಲು ಜಾಗದ ಸಮಸ್ಯೆಯಾಗುತ್ತಿತ್ತು. ಆದರೆ, ಜನಪ್ರಿಯ ಶಾಸಕರಾದ ಜೆ.ಎನ್.ಗಣೇಶ್ ಅವರು ಖಬರುಸ್ತಾನ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇದರಿಂದ ಸಮಾಜದ ಏಳಿಗೆ ಜೊತೆಗೆ ಖಬರುಸ್ತಾನ್ ಅಭಿವೃದ್ಧಿಗೊಳ್ಳುತ್ತಿರುವುದು ಹರ್ಷದಾಯಕವಾಗಿದೆ. ಇಲ್ಲಿನ ಖಬರುದ್ತಾನ್ಗೆ ತೆರಳುವ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಶಾಸಕರು ಅನುದಾನ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಮುಖಂಡರಾದ ಸಿ.ಆರ್.ಹನುಮಂತ, ಮಸ್ತಾನ್ ಪೇಂಟರ್, ಬಿ.ಸಿದ್ದಪ್ಪ, ವರದಿ ಶಬ್ಬೀರ್, ಹೊನ್ನೂ, ಅಗರಿ ಮೌಲಾ, ವಿರುಪಣ್ಣ, ವಾಸುಕುಮಾರ, ದೊಡ್ಡಬಸವರಾಜ ಬಡಗಿ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















