ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರ ಗ್ರಾಪಂಯ ಬೆಳಗೋಡ್ಹಾಳ್ ಗ್ರಾಮದ ಮುಸ್ಲಿಂ ಸಮಾಜದ ಖಬರುಸ್ತಾನ್(ಸ್ಮಶಾನ) ಸ್ಥಳಕ್ಕೆ ಶಾಸಕ ಜೆ.ಎನ್.ಗಣೇಶ್ ಭೇಟಿ ನೀಡಿ, ಇಲ್ಲಿನ ಸಮಸ್ಯೆಗೆ ಅತಿ ಶೀಘ್ರದಲ್ಲಿ ಮುಕ್ತಿ ನೀಡುವ ಭರವಸೆ ನೀಡಿದರು.
ಇಲ್ಲಿನ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಯುವ ಮುಖಂಡ ಮತ್ತು ಕಂಪ್ಲಿ ತಾಲೂಕು ಮಾನವ ಬಂಧುತ್ವ ಅಧ್ಯಕ್ಷ ಬಿ.ನಬೀಸಾಬ್ ಇವರು ಖಬರುಸ್ತಾನ್ ಸ್ಥಳಕ್ಕೆ ಹೋಗಿ ಬರಲು ಸಮರ್ಪಕವಾಗಿ ರಸ್ತೆ ಇಲ್ಲದಂತಾಗಿದೆ. ಕಿರಿದಾದ ರಸ್ತೆಯಲ್ಲಿ ಮೃತ ದೇಹವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಲು ಸಮಸ್ಯೆಯಾಗುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಶಾಸಕ ಜೆ.ಎನ್.ಗಣೇಶ್ ಅವರಲ್ಲಿ ಮನವಿಯೊಂದಿಗೆ ಅಳಲು ತೋಡಿಕೊಳ್ಳುವ ಜೊತೆಗೆ ಕಿರಿದಾದ ಮಣ್ಣಿನ ದಾರಿ, ಎರಡೂ ಬದಿ ಹಸಿರು ಭತ್ತದ ಗದ್ದೆ, ಆ ದಾರಿಯ ಕೊನೆಯಲ್ಲಿ ಅರ್ಧ ಕಟ್ಟಿದ ಕಾಂಪೌಂಡ್ ಗೋಡೆಯ ಖಬರುಸ್ತಾನ್ನಲ್ಲಿರುವ ಸಮಸ್ಯೆಯ ಗಂಭೀರತೆಯನ್ನು ತಿಳಿಸಿದರು.
ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಮನುಷ್ಯನ ಅಂತಿಮ ಶವ ಯಾತ್ರೆಯನ್ನು ಗೌರವದಿಂದ ಕಳುಹಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ. ಇದು ಭಾವನಾತ್ಮಕ ಮತ್ತು ಮಾನವೀಯದ ಪ್ರತೀಕವಾಗಿದೆ. ಇಲ್ಲಿನ ಖಬರುಸ್ತಾನ್(ಸ್ಮಶಾನ)ವನ್ನು ಅಭಿವೃದ್ಧಿಗೊಳಿಸುವ ಜೊತೆಗೆ ಕಿರಿದಾದ ರಸ್ತೆಯನ್ನು ಅಗಲೀಕರಣಗೊಳಿಸಿ, ಗುಣಮಟ್ಟದ ರಸ್ತೆ ಮಾಡುವ ಮೂಲಕ ಶವ ಯಾತ್ರೆಗೆ ಅನುಕೂಲ ಮಾಡಿಕೊಡಲಾಗುವುದು. ಮುಸ್ಲಿಂ ಸಮಾಜದ ಏಳಿಗೆ ಜೊತೆಗೆ ಪ್ರತಿಯೊಂದು ಹಂತದಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಮುಖಂಡರಾದ ಪೇಂಟರ್ ಮಸ್ತಾನ್, ಸಿ.ಆರ್.ಹನುಮಂತ, ಕೆ.ಷಣ್ಮುಕಪ್ಪ, ಜಾಫರ್, ವರದಿ ಶಬ್ಬೀರ್, ಹೊನ್ನೂರವಲಿ, ಗೂಡುಸಾಬ್, ರಾಜಾಭಕ್ಷಿ, ಪೀರಸಾಬ್, ಲೋಕರಾಜ, ಶರಣಗೌಡ, ಖಾಜಾ ಹುಸೇನ್, ನೂರ್ಬಾಷಾ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















