ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ಶ್ರೀ ಮಹಾದೇವಿ ಯಲ್ಲಮ್ಮ, ಮಾರೆಮ್ಮ, ಹುಲಿಗೆಮ್ಮ ದೇವಿಯ ಗಂಗೆಸ್ಥಳ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಮಂಗಳವಾರ ಜರುಗಿತು.
ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ದೇವಿಯರ ಗಂಗೆಸ್ಥಳ ಮೆರವಣಿಗೆ ಈ ಬಾರಿ ಅತ್ಯಂತ ಸಂಭ್ರಮ ಸಡಗರದಿಂದ ಸಕಲ ಕಲಾ ಪ್ರಕಾರಗಳೊಂದಿಗೆ ನಡೆಯಿತು.
ಕಂಪ್ಲಿ-ಕೋಟೆಯ ತುಂಗಭದ್ರ ನದಿ ತಟದಲ್ಲಿ ಗಂಗೆಪೂಜೆ ಪೂಜೆ ಸಲ್ಲಿಸಿದ ನಂತರ ವೆಂಕಟರಮಣ ದೇವಸ್ಥಾನದಿಂದ ಆರಂಭಗೊಂಡ ಭವ್ಯ ಮೆರವಣಿಗೆ ಗಂಡುಗಲಿ ಕುಮಾರರಾಮನ ಕೋಟೆ ಮುಖಾಂತರ ಪಟ್ಟಣದ ನಡುವಲ ಮಸೀದಿ, ಡಾಕ್ಟರ್ ರಾಜಕುಮಾರ್ ಮುಖ್ಯ ರಸ್ತೆ, ಮಾರೆಮ್ಮ ದೇವಸ್ಥಾನ, ಅಂಬೇಡ್ಕರ್ ವೃತ್ತ, ಗಂಗಾನಗರ ಮೂಲಕ ಸಂಚರಿಸಿ, ಯಲ್ಲಮ್ಮ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಈ ಮೆರವಣಿಗೆಯಲ್ಲಿ ಉಡುಪಿಯ ಚಂಡಿ ಮೇಳ, ಕೊಟ್ಟೂರಿನ ನಂದಿಕೋಲು, ಕಂಪ್ಲಿ ಮತ್ತು ಮಲಪನಗುಡಿಯ ಡೊಳ್ಳು ಕುಣಿತ, ಕಂಪ್ಲಿ ವಿರುಪಣ್ಣ ತಾತನವರ ಭಜನಾ ಮಂಡಳಿ, ತಾಷಾರಾಂಡೋಲ್ ಸೇರಿದಂತೆ ನಾನಾ ಕಲಾಪ್ರಕಾರಗಳು ಪಾಲ್ಗೊಂಡಿದ್ದವು.
ಈ ಮೆರವಣಿಗೆಯಲ್ಲಿ ಹಾಲಿ ಶಾಸಕ ಜೆ.ಎನ್.ಗಣೇಶ್, ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ಪಾಲ್ಗೊಂಡು ದೇವಿಯ ದರ್ಶನದೊಂದಿಗೆ ಪುನೀತರಾದರು.
ಈ ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಅಯೋಧ್ಯೆ ವೆಂಕಟೇಶ್ ಗಂಗಾಮತ ಸಮಾಜದ ಅಧ್ಯಕ್ಷ ಎಲೆಗಾರ ನಾಗರಾಜ್, ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷ ಜೆ.ಪ್ರಕಾಶ್, ಮುಖಂಡರಾದ ದೊಡ್ಡ ವೆಂಕಟೇಶ್, ನಡವಿ ಮಲ್ಲಿಕಾರ್ಜುನ, ಕರೇಕಲ್ ಮನೋಹರ್, ಬಿ.ಸಿದ್ದಪ್ಪ, ಗಂಗಣ್ಣ, ವೀರಪ್ಪ, ಬಿ.ಮಲ್ಲಿ, ಅಯೋಧಿ ರಮೇಶ್ ಸೇರಿದಂತೆ ಮುಖಂಡರು, ಯುವಕರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು. ನಂತರ ಅನ್ನ ಸಂತರ್ಪಣೆ ಜರುಗಿತು.
ವರದಿ : ಜಿಲಾನಸಾಬ್ ಬಡಿಗೇರ್




















