ಬಳ್ಳಾರಿ / ಕಂಪ್ಲಿ : ರಾಜ್ಯದಲ್ಲಿ ಭ್ರಷ್ಟಾಚಾರದ ಅಮಲಿನಲ್ಲಿ ತೇಲುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಮುಂದಿನ ದಿನದಲ್ಲಿ ಬುಡ ಸಮೇತವಾಗಿ ಕಿತ್ತಿ ಹಾಕಿ, ಬಿಜೆಪಿ ಬಾವುಟ ಹಾರಿಸುವುದು ಎಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನರೆಡ್ಡಿ ಗುಡುಗಿದರು.
ಪಟ್ಟಣದ ಕೊಟ್ಟಾಲ್ ರಸ್ತೆಯ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಅವರ ತುಂಗಭದ್ರಾ ಕಾರ್ಯಾಲಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡಿಸಿ, ಹಮ್ಮಿಕೊಂಡಿರುವ ಪಾದಯಾತ್ರೆ ಹಿನ್ನಲೆ ಸೆ. 6ಕ್ಕೆ ಕಂಪ್ಲಿಗೆ ಪಾದಯಾತ್ರೆ ಆಗಮಿಸುವ ಸಂಬಂಧ ಮಂಗಳವಾರದಂದು ಸಂಜೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ವಾಲ್ಮೀಕಿ ನಿಗಮದ ಬಹು ಕೋಟಿ ಹಣ ಹಗರಣದ ಹಿನ್ನಲೆ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿರುವುದು ಬಿಜೆಪಿಗೆ ತಂದ ಜಯವಾಗಿದೆ. ಕಾಂಗ್ರೆಸ್ನವರು ಈ ಹಿಂದೆ ನಮ್ಮ ಮೇಲೆ ಪಿತೂರಿಯೊಂದಿಗೆ ಜೈಲಿಗಟ್ಟಿ ಬಳ್ಳಾರಿ ಸೇರಿದಂತೆ ಅಖಂಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಮಾಡಿಕೊಂಡಿದ್ದಾರೆ. ಕಳೆದ ಇಪ್ಪತ್ತು ವರ್ಷ ಬಳ್ಳಾರಿ ಬಿಜೆಪಿ ಭದ್ರ ಕೋಟೆಯಾಗಿತ್ತು. ಆದರೆ, ಈಗ ಕಾಂಗ್ರೆಸ್ನವರು ಜನರಿಗೆ ಮಂಕುಬೂದಿ ಹಚ್ಚಿ ಅಧಿಕಾರಕ್ಕೆ ಬಂದಿದ್ದಾರೆ. ಈಗಾಗಲೇ ನಾನು ಬಳ್ಳಾರಿಗೆ ಬಂದಾಯ್ತು. ಇನ್ಮೇಲೆ ಕಾಂಗ್ರೆಸ್ನವರ ಆಟ ನಡೆಯುವುದಿಲ್ಲ. ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ವಿಜಯನಗರ ಒಳಗೊಂಡಂತೆ ಅಖಂಡ ಬಳ್ಳಾರಿ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಬಿಜೆಪಿ ಬಾವುಟ ಹಾರಿಸುವುದು ಖಚಿತ. ಇನ್ನು ಮುಂದೆ ಕಾಂಗ್ರೆಸ್ನವರು ಗಂಟುಮೂಟೆ ಕಟ್ಟಬೇಕು. 14 ವರ್ಷದ ವನವಾಸದ ನಂತರ ಮತ್ತೇ ರಾಜಕೀಯಕ್ಕೆ ದುಮಕಿರುವೆ. ಗಂಗಾವತಿಯ ಹನುಮಾನ್ ಕ್ಷೇತ್ರದಲ್ಲಿ ರಾಜಕೀಯ ಪುನರ್ಜನ್ಮವಾಗಿದೆ. ಬಳ್ಳಾರಿಯ ಕಾಂಗ್ರೆಸ್ನವರಿಗೆ ನಮ್ಮ ಮುಂದೆ ನಿಂತುಕೊಂಡು ಮಾತಾಡುವ ಯೋಗ್ಯತೆ ಇಲ್ಲ. ಶಾಶ್ವತವಾಗಿ ಕಾಂಗ್ರೆಸ್ ತೊಲಗಿಸಲು ಪಣ ತೊಟ್ಟಿರುವೆ. ಮುಂದಿನ ದಿನದಲ್ಲಿ ಜಿಲ್ಲಾ ಅಭಿವೃದ್ಧಿಯೊಂದಿಗೆ ಸ್ವರ್ಗವನ್ನಾಗಿ ಮಾಡುವ ಸಂಕಲ್ಪ ಹೊಂದಲಾಗಿದೆ. ಬಳ್ಳಾರಿ ಏರ್ಪೋಟ್, ನವಲಿ ಜಲಾಶಯ ನಿರ್ಮಿಸುವ ಯೋಗ್ಯತೆ ಕಾಂಗ್ರೆಸ್ನವರಿಗಿಲ್ಲ. ಕಂಪ್ಲಿ ಕ್ಷೇತ್ರದಲ್ಲಿ ಸುರೇಶ್ ಬಾಬು ಮತ್ತೊಮ್ಮೆ ರಣಕಣಕ್ಕೆ ಇಳಿಯುವುದು ಸತ್ಯ, ಗೆಲ್ಲುವುದು ನಿಶ್ಚಿತ ಎಂದರು.
ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಮಾತನಾಡಿ, ಈ ಬಾರಿ ಮಳೆ, ಬೆಳೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜಲಾಶಯದಲ್ಲಿ ಬೇಕಾದಷ್ಟು ನೀರಿದ್ದರೂ ಸಮರ್ಪಕವಾಗಿ ನೀರೊದಗಿಸಲು ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ. ಬರೀ 30 ಟಿಎಂಸಿ ನೀರಿದ್ದಾಗ ನಾವು ರೈತರಿಗೆ ನೀರು ಕೊಟ್ಟಿದ್ದೀವಿ. ಆದರೆ, ಕಾಂಗ್ರೆಸ್ವರಿಗೆ ರೈತರ, ಜನ ಸಾಮಾನ್ಯ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಂತಾಗಿದೆ. ಕಂಪ್ಲಿ ಕ್ಷೇತ್ರದಲ್ಲಿ ಕಮಿಷನ್ ದಂಧೆ, ಮಟ್ಕ ಸೇರಿದಂತೆ ನಾನಾ ಅಕ್ರಮ ದಂಧೆಗಳು ನಡೆಯುತ್ತಿವೆ. ಕಾಂಗ್ರೆಸ್ ಭ್ರಷ್ಟ ಸರ್ಕಾರವಾಗಿದೆ. ಇಂತಹ ದುರಾಡಳಿತವನ್ನು ಖಂಡಿಸಿ, ಲಿಂಗಸೂಗೂರಿನಿಂದ ಈಗಾಗಲೇ ಪಾದಯಾತ್ರೆ ಆರಂಭಗೊಂಡಿದ್ದು, ಸೆ.6ರಂದು ಸಂಜೆಗೆ ಕಂಪ್ಲಿಗೆ ಪಾದಯಾತ್ರೆ ಆಗಮಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಜನರು ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅನೀಲ್ ಕುಮಾರ ಮೋಕಾ, ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ, ಮುಖಂಡರಾದ ಪಕೀರಪ್ಪ, ಸೋಮಶೇಖರರೆಡ್ಡಿ, ದಿವಾಕರಬಾಬು, ಪಂಪಾಪತಿ, ಅಳ್ಳಳ್ಳಿ ವಿರೇಶ, ಜಿ.ಸುಧಾಕರ, ಎನ್.ಚಂದ್ರಕಾಂತರೆಡ್ಡಿ, ಗೋರ್ತಿ ಶ್ರೀನಿವಾಸ, ಮನೋಜ್ಗೌಡ, ಬಡಿಗೇರ್ ವಿರೇಶ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















