ಸುರಪುರ ಸುದ್ದಿ : ತಾಲೂಕಿನ ಕುರುಬನ ತಳ್ಳಳ್ಳಿ ಗ್ರಾಮದಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗ್ರಾಮದ ಸುಮಾರು 25 ಕ್ಕಿಂತ ಹೆಚ್ಚು ಜನ ಕಚಕನೂರ ಗ್ರಾಮ ಪಂಚಾಯಿತಿಗೆ ತೆರಳಿ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಗ್ರಾಮದ ಮುಖ್ಯ ಅಗಸಿಯ ಆಂಜನೇಯ ದೇವಸ್ಥಾನದಿಂದ ಕನ್ನೆಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಸಿ. ಸಿ. ರಸ್ತೆ ಅತಿಕ್ರಮಣ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿರುವ ವ್ಯಕ್ತಿ ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗೆ ಒತ್ತಾಯಿಸಿದರು.
2024-25 ನೇ ಸಾಲಿನಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದ್ದು ರಸ್ತೆಯ ಮೇಲೆ ಖಾಸಗಿ ವ್ಯಕ್ತಿಗಳಾದ ಬಸ್ಸಮ್ಮ ಗಂ/ ಚಂದಪ್ಪ ಕೋಳಿಹಾಳ ಮತ್ತು ಗೋಪರಡ್ಡಿ ಕಾಕರಗಲ್ಲ ಎಂಬುವ ವ್ಯಕ್ತಿಗಳು ರಸ್ತೆ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿದ್ದಾರೆ, ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಅತಿಕ್ರಮಣ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ದೇವಿಂದ್ರಪ್ಪ ದೊರಿ, ಚನ್ನಗೌಡ ಚನ್ನೂರ, ಚಂದಪ್ಪ ಛಲವಾದಿ, ದೇವಿಂದ್ರಪ್ಪ ಕಚಕನೂರ, ಬಾಲಯ್ಯ ಕಡಿಮನಿ, ಚನ್ನಪ್ಪ ಆಲಗೂರ, ಮಲ್ಲಿಕಾರ್ಜುನ ದೇವಿಕೇರಿ, ಭೀಮಶಂಕರ ದೇವಿಕೇರಿ, ಸಾಬಣ್ಣ ಜಾಲಹಳ್ಳಿ, ದೇವಿಂದ್ರಪ್ಪ ಕಡಿಮನಿ, ರವಿಕಾಂತ ಕಡಿಮನಿ, ಅಪ್ಪಾಸಾಬ ಕಡಿಮನಿ, ಕರಿಬಸಪ್ಪಗೌಡ ಚನ್ನೂರ, ಶಿವಪ್ಪ ಕಡಿಮನಿ, ಪ್ರಭು ಕಚಕನೂರ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ ಸುದ್ದಿ




















