ನಾಟಕ ಅಕಾಡೆಮಿ ಪ್ರಶಸ್ತಿ ಹಿಂಪಡೆಗೆ ಆಗ್ರಹ.
ಸುರಪುರ ಸುದ್ದಿ : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರನ್ನು ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದನ್ನು ಮರುಪರಿಶೀಲಿಸಿ ತಕ್ಷಣ ಪ್ರಶಸ್ತಿ ಆಯ್ಕೆಯನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸುರಪುರ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಮಾಸ್ತರ ಆಗ್ರಹಿಸಿದರು.
ಸುರಪುರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಸಂಘಟನೆಯ ತಾಲೂಕು ಘಟಕದ ವತಿಯಿಂದ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಹುಸೇನ್ ಸಾಬ್. ಎ. ಸರಕಾವಸ್ ಅವರಿಗೆ ಸಲ್ಲಿಸಿ ಅವರು ಮಾತನಾಡಿದರು.
ಶಿವಾನಂದ ತಗಡೂರು ಅವರ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 28-03-2026 ರಂದು ಐಪಿಸಿ ಕಲಂ 1860 (U/s-403,415,420, 421) ಅಡಿಯಲ್ಲಿ ಎಫ್ ಐ ಆರ್ ಪ್ರಕರಣ ದಾಖಲಾಗಿದೆ. ಮಾನ್ಯ ಡಿ. ವಿ. ಗುಂಡಪ್ಪ ನವರು ಸಂಸ್ಥಾಪಿಸಿದ 95 ವರ್ಷಗಳ ಇತಿಹಾಸವುಳ್ಳ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾಗಿ ಮುಂದುವರೆದಿರುವ ಇವರು ತಮ್ಮ ಅವಧಿಗೂ ಮುನ್ನವೇ ೨೫ ಲಕ್ಷ ಹಣ ಬಿಡುಗಡೆ ಮಾಡಿ ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಇಂತಹ ಆರೋಪಗಳು ಎದುರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯ ಸರ್ಕಾರ ನೀಡಿರುವ ವಿವಿಧ ಜವಾಬ್ದಾರಿಗಳು ಹಾಗೂ ಪ್ರಶಸ್ತಿ ಆಯ್ಕೆಯ ಕುರಿತು ಸಮಗ್ರ ಪರಿಶೀಲನೆ ನಡೆಸುವುದು ಅಗತ್ಯವಾಗಿದೆ ಎಂದು ರಾಘವೇಂದ್ರ ಮಾಸ್ತರ ಒತ್ತಾಯಿಸಿದರು.
ಈಗಾಗಲೇ ಶಿವಾನಂದ ತಗಡೂರು ಅವರನ್ನು ರಾಜ್ಯ ಸರ್ಕಾರ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಹಾಗೂ ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ಸಮಿತಿ ಸದಸ್ಯರಾಗಿ ನೇಮಕ ಮಾಡಿದೆ. ಹೀಗಾಗಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ತಕ್ಷಣ ತಮ್ಮ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು ಅಲ್ಲದೆ ಮಾಧ್ಯಮ ಅಕಾಡೆಮಿ ಮತ್ತು ಮಾಸಾಶನ ಸಮಿತಿ ಸದಸ್ಯತ್ವವನ್ನೂ ರದ್ದುಗೊಳಿಸಿ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗುವವರೆಗೆ ಯಾವುದೇ ರೀತಿಯ ಗೌರವ ಪ್ರಶಸ್ತಿ ಅಥವಾ ಪ್ರಮುಖ ಜವಾಬ್ದಾರಿಗಳನ್ನು ನೀಡುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು .
ಈ ಸಂದರ್ಭದಲ್ಲಿ ಪತ್ರಕರ್ತರಾದ ಮೌನೇಶ ಮಂಗಿಹಾಳ, ಮದನ ಲಾಲ್ ಕಟ್ಟಿಮನಿ, ಧರ್ಮರಾಜ ಸುಂಬಡ, ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















