
ವಿಶೇಷ ವರದಿ : ಜಿಲಾನಸಾಬ್ ಬಡಿಗೇರ್
ಬಳ್ಳಾರಿ / ಕಂಪ್ಲಿ : ಪ್ರಾಚೀನ ಕಾಲ ಘಟ್ಟದಿಂದಲೂ ಆಚರಿಸಿಕೊಂಡು ಬಂದಿರುವ ಉತ್ತರ ಕರ್ನಾಟಕದ ಪ್ರಸಿದ್ಧ ಹಬ್ಬಗಳಲ್ಲಿ ಒಂದಾದ ಜೋಕುಮಾರ ಹಬ್ಬಕ್ಕೆ ತನ್ನದೇ ವಿಶಿಷ್ಟ ಮಹತ್ವವಿದೆ. ಅದರಂತೆಯೆ ಕಂಪ್ಲಿ ತಾಲೂಕು ಸೇರಿದಂತೆ ಸಮೀಪದ ಹಳೆ ದರೋಜಿಯಲ್ಲಿ ಪ್ರತಿ ವರ್ಷದಂತೆ ಈ ಸಲವೂ ಗಣೇಶನ ನಿರ್ಗಮನವಾಗುತ್ತಿರುವ ನಡುವೆ ಜೋಕುಮಾರನ ಆಗಮನವಾಗಿದೆ.

ಕಂಪ್ಲಿ ಸೇರಿದಂತೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಉಷ್ಣಾಂಶಕ್ಕೆ ಜನರು ತತ್ತರಿಸುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಬರದ ಛಾಯೆ ರೈತರ ಬೆನ್ನು ಬಿಡದಂತೆ ಕಾಡುತ್ತಿದೆ. ಈ ಬಾರಿ ಮಳೆ ಕೈಕೊಟ್ಟಿತ್ತಾದರೂ, ಜಲಾಶದಯಲ್ಲಿ ಗಂಗೆಮಾತೆ ಜಳಮಳಸುತ್ತಿದ್ದರೂ, ಜಲಾಶಯದ ಬಲದಂಡೆಯ ನಾಲೆ ಭಾಗದ ರೈತರಿಗೆ ಸಮರ್ಪಕವಾಗಿ ನೀರಿಲ್ಲದೇ ಇರುವುದು ಮತ್ತೊಮ್ಮೆ ರೈತರನ್ನು ಬರಗಾಲಕ್ಕೆ ದೂಡಿದ್ದು, ಇನ್ನೇನು ಗಣಪತಿ ಬಂದನಪ್ಪಾ ಮಳೆ ಬಂದಿದಪ್ಪಾ ಎನ್ನುವ ವಾಡಿಕೆ ಈ ಬಾರಿಯೂ ಉಸಿಯಾಗಿದ್ದು, ಗಣಪತಿ ನಿರ್ಗಮಿಸುತ್ತಿದ್ದಂತೆ ಜೋಕುಮಾರನ ಆಗಮನವಾಗಿದ್ದು, ಈಗಲಾದರೂ ಮಳೆ, ಬೆಳೆಯೊಂದಿಗೆ ಸಮೃದ್ಧಿ ನೆಲೆಸುವ ಆಶಾಭಾವನೆ ಮೂಡಿದೆ.
ಗಣಪತಿ ಬಪ್ಪಾ ಮೋರಯಾ ಎಂಬಂತೆ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ದಿನಗಳಂತೆ ಗಣಪತಿ ವಿಸರ್ಜಣೆ ಮಾಡಲಾಗುತ್ತಿದ್ದು, ಈಗ ಗಣೇಶನ ನಿರ್ಗಮನವಾಗುತ್ತಿದ್ದಂತೆ ಜೋಕುಮಾರನ ಆಗಮನವಾಗಿದ್ದು, ಜಾನಪದ ಸೊಗಡಿನ ಜೋಕುಮಾರನ ಹಬ್ಬವನ್ನು ಸಾಂಪ್ರದಾಯಕವಾಗಿ ಆಚರಿಸಲಾಗುತ್ತಿದೆ.
ಇಲ್ಲಿನ ಹಳೆ ದರೋಜಿ ಗ್ರಾಮದಲ್ಲಿರುವ ಗಂಗಾಮತ ಸಮಾಜದ ಮನೆಯಲ್ಲಿ ಜೋಕುಮಾರ ಆಗಮವಾಗಿ, ಅವತಾರವೆತ್ತ ಜೋಕುಮಾರನನ್ನು ಬೇವಿನ ಎಲೆ, ಕಪ್ಪು ಮಸಿ ಸೇರಿದಂತೆ ಇನ್ನಿತರವಾಗಿ ರೂಪ ನೀಡಿ, ನಂತರ ವಿಶೇಷ ಪೂಜೆ ಸಲ್ಲಿಸಿ, ಬುಟ್ಟಿಯಲ್ಲಿ ಜೋಕುಮಾರನ ಪ್ರತಿಷ್ಠಾಪಿಸಿ, ಕರಿಯಮ್ಮ, ಗೀತಮ್ಮ, ದುರ್ಗಮ್ಮ, ಕುಸುಮ, ಲಕ್ಷ್ಮಮ್ಮ, ಗೀತಮ್ಮ ತಂಡದ ಮಹಿಳೆಯರು ಪಟ್ಟಣ, ಗ್ರಾಮೀಣ ಪ್ರದೇಶ ಹಳ್ಳಿಗಳ ಮನೆ ಮನೆಗೆ ತೆರಳಿ, ಜನತೆಗೆ ಜೋಕುಮಾರನ ಆಶೀರ್ವಾದ ಕಲ್ಪಿಸುತ್ತಿದ್ದಾರೆ.
ಗಣೇಶ ಹಬ್ಬದಲ್ಲಿ ಮಳೆ ತರದಿದ್ದರೂ ಜೋಕುಮಾರ ಖಂಡಿತವಾಗಿಯೂ ಮಳೆ ತಂದೇ ತರುತ್ತಾನೆ ಎಂಬ ನಂಬಿಕೆ ರೈತರಲ್ಲಿದೆ. ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆಯ ಮುಂಗಾರು ಸುಗ್ಗಿಯ ಹಾಗೂ ಹಿಂಗಾರಿ ಬಿತ್ತನೆಯ ನಡುವೆ ಜೋಕುಮಾರ ಬರುತ್ತಾನೆ. ಅನಂತನ ಹುಣ್ಣಿಮೆಗೆ ಹಳ್ಳಿಗಳಲ್ಲಿ ಜೋಕ್ಯಾನ ಹುಣ್ಣಿಮೆ ಎಂದು ಕರೆಯುತ್ತಾರೆ. ಪಟ್ಟಣ ಮತ್ತು ಗ್ರಾಮೀಣ ಜನರು ಪ್ರತಿ ವರ್ಷ ಶ್ರದ್ಧೆ, ಭಕ್ತಿ, ನಿಷ್ಠೆಯಿಂದ ಜೋಕುಮಾರನ ಹಬ್ಬ ಆಚರಿಸುತ್ತಾರೆ.
ಗಂಗೆ ಮಕ್ಕಳು ಎನ್ನುವ ಗಂಗಾಮತ ಸಮಾಜದ ಮಹಿಳೆಯರು ಜೋಕುಮಾರ ಮೂರ್ತಿಯನ್ನು ಬುಟ್ಟಿಯಲ್ಲಿ ಕೂಡಿಸಿಕೊಂಡು ಜೋಕ್ಯಾನ ವರ್ಣಿನೆಯ ಜನಪದ ಹಾಡುಗಳಲ್ಲಿ ಲಯಬದ್ಧವಾಗಿ ಹಾಡುತ್ತ ಹಳ್ಳಿಯ ಓಣಿ ಓಣಿಯಲ್ಲಿ ತಿರುಗುತ್ತಾರೆ. ಜೋಕುಮಾರನಿಗೆ ಅಕ್ಕಿ, ಜೋಳ, ದವಸ ಧಾನ್ಯಗಳನ್ನು ನೈವೇದ್ಯವಾಗಿ ಅರ್ಪಿಸಿದಾಗ ಬುಟ್ಟಿ ಹೊತ್ತು ತಂದ ಮಹಿಳೆಯರು ಪ್ರತಿಯಾಗಿ ಅವರ ಮರದಲ್ಲಿ ಬೇವಿನ ತಪ್ಪಲು ನುಚ್ಚನ್ನು ಪ್ರಸಾದವಾಗಿ ನೀಡುತ್ತಾರೆ.
ರೈತ ಮಹಿಳೆಯರು ಜೋಕಪ್ಪನ ಬಾಯಿಗೆ ಬೆಣ್ಣೆ ಹಚ್ಚುತ್ತಾರೆ. ಆ ಬೆಣ್ಣೆಯನ್ನು ಕಣ್ಣಿಗೆ ಹಚ್ಚಿಕೊಂಡರೆ ಕಣ್ಣುಬೇನೆ ಹೋಗುತ್ತದೆ, ನಾಡಿನಲ್ಲಿ ಉತ್ತಮ ಮಳೆ, ಬೆಳೆಯೊಂದಿಗೆ ನೆಮ್ಮದಿ ಜೀವನ ದಯಪಾಲಿಸುತ್ತಾನೆಂಬ ನಂಬಿಕೆ ಹೊಂದಿದ್ದಾರೆ.
ಜೋಕುಮಾರ ಗಂಗಾಮತ ಸಮಾಜದವರ ಮನೆಯಲ್ಲಿ ಹುಟ್ಟುತ್ತಾನೆ, ಅಗಲವಾದ ಮುಖ, ಅದಕ್ಕೆ ತಕ್ಕಂತೆ ಕಣ್ಣು, ಮೂಗು, ತಲೆಗೆ ರುಮಾಲು, ಹಣೆಗೆ ವಿಭೂತಿ, ಕುಂಕಮ ಇಷ್ಟೆಲಾ ಶೋಭಾಮಾನವಾಗಿರುವ ಮೂರ್ತಿ ತುಂಬಿರುವ ಬೇವಿನ ತಪ್ಪಲದ ಬುಟ್ಟಿಯಲ್ಲಿ ಕುಳಿತು 7ದಿನಗಳ ತನಕ ಊರು ಊರುಗಳಿಗೆ ತಿರುಗುತ್ತಾರೆ. ನಾಲ್ಕೈದು ಜನ ಮಹಿಳೆಯರು ಪುಟ್ಟಿಯನ್ನು ಹೊತ್ತುಕೊಂಡು ಜಾನಪದ ಹಾಡು ಹಾಡುತ್ತಾ ಅಲೆಯುತ್ತಾರೆ. ಗುಳ್ಳವ್ವ ಜೋಕುಮಾರ ಸ್ವಾಮಿಯ ಮಡದಿ ದೇವಸ್ವರೂಪಿಯಾದ ಜೋಕುಮಾರ ಸ್ವಾಮಿ ಆನಂತನ ಹುಣ್ಣಿಮೆ ರಾತ್ರಿ ಸಂಪ್ರದಾಯದಂತೆ ಜೋಕುಮಾರನನ್ನು ಭೂಲೋಕದಿಂದ ಕೈಲಾಸಕ್ಕೆ ಕಳುಹಿಸಿಕೊಡುತ್ತಾರೆ. ಹೀಗಾಗಿ ಕಂಪ್ಲಿ ಸೇರಿದಂತೆ ಬಳ್ಳಾರಿ ಜಿಲ್ಲೆಯೊಂದಿಗೆ ಉತ್ತರ ಕರ್ನಾಟಕದ ಬಹುಭಾಗದ ಹಳ್ಳಿಗರ ಮನದಲ್ಲಿ ಜೋಕುಮಾರಸ್ವಾಮಿ ಉಳಿದುಕೊಂಡಿದ್ದಾನೆ. ಒಟ್ಟಾರೆ ಜೋಕುಮಾರಸ್ವಾಮಿ ರೈತರ ಬಾಳಿನಲ್ಲಿ ಇನ್ನೂ ಜೀವಂತ ದೇವತೆಯಾಗಿ ಉಳಿದಿರುವುದು ವಿಶೇಷವಾಗಿದೆ. ದಶ್ಣಾದೇವಿಯ ಮಗನೆನಿಸಿರುವ ಜೋಕುಮಾರ ಇಷ್ಟೆಲ್ಲ ಪರಂಪರೆ ಸಂಪ್ರದಾಯ ಹೊಂದಿದ್ದರೂ ಈತನಿಗೆ ಗುಡಿ ಗುಂಡಾರಗಳಿಲ್ಲ, ಮಧ್ಯದಲ್ಲಿಯೇ ಹುಟ್ಟಿ ಬಂದು ನಡುವೆಯೇ ಪ್ರಾಣ ಬಿಡುವ ಜೋಕುಮಾರನ ಕುರಿತು ಅನೇಕ ಜನಪದ ಕಥೆಗಳಿವೆ ಎಂದು ಹೇಳಲಾಗುತ್ತದೆ.
ಈ ಆಚರಣೆಯ ವಿಶೇಷವೇನೆಂದರೆ ಗಣೇಶನ ಮುಂದೆ ಜೋಕುಮಾರ ಬರಬಾರದಂತೆ. ಆದ್ದರಿಂದ ಜೋಕುಮಾರನ ಮುಖ ಗಣೇಶ ನೋಡಬಾರದು ಎಂಬ ನಂಬಿಯಿಂದಾಗಿ ಗಣೇಶನ ಮುಖಕ್ಕೆ ಬಟ್ಟೆ ಹಾಕುತ್ತಾರೆ. ಅದು ಇಂದಿಗೂ ಚಾಲ್ತಿಯಲ್ಲಿರುವುದು ಕಂಡು ಬಂತು. ಒಟ್ನಲ್ಲಿ ಜೋಕುಮಾರನ ಹಬ್ಬವೂ ತನ್ನದೇ ವಿಶೇಷತೆಯೊಂದಿಗೆ ಜನರ, ಭಕ್ತರ, ರೈತರ ನಂಬಿಕೆಗಳಿಗೆ ಜೀವ ತುಂಬುತ್ತಾ, ಹಬ್ಬವನ್ನ ಆಚರಿಸಿಕೊಂಡು ಬರಲಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















