ಬಳ್ಳಾರಿ / ಕಂಪ್ಲಿ : ಆ.7ರ ಒಳಗಾಗಿ ತುಂಗಭದ್ರಾ ಮುನಿರಾಬಾದ್ ಕೇಂದ್ರ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ರೈತರಿಗೆ ಬೆಳೆ ಬೆಳೆಯಲು ನೀರು ಒದಗಿಸಿ ಕೊಡಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ನೇತೃತ್ವದಲ್ಲಿ ಹೊಸಪೇಟೆಯ ಮುನಿರಾಬಾದ್ನ ಜಲಾಶಯದ ನೀರಾವರಿ ಕೇಂದ್ರ ವಲಯದ ಕಛೇರಿಯಲ್ಲಿ ಅಧೀಕ್ಷಕ ಅಭಿಯಂತರ ಎಸ್.ಜಿ.ಮಲ್ಲಿಗರಾವ್ ಇವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ನಂತರ ಬಿ.ವಿ.ಗೌಡ ಮಾತನಾಡಿ, ಈ ಬಾರಿ ಮುಂಗಾರು ತಡವಾಗಿ ಬಂದಿದ್ದು ಮಳೆಯ ಪ್ರಮಾಣ ಕಡಿಮೆಯಾಗಿದ್ದು ನಮ್ಮೆಲ್ಲರ ಗಮನಕ್ಕೆ ಇದೆ. ಕಳೆದ 4-5 ದಿನಗಳಿಂದ ಮೇಲ್ಬಾಗದಲ್ಲಿ ಮಳೆ ಚೆನ್ನಾಗಿ ಆಗುತ್ತಿದ್ದು, ರೈತರಲ್ಲಿ ಸಂತಸ ಮೂಡಿದೆ.
ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ ಅಂದಾಜು 45.00 ಟಿಎಂಸಿ ನೀರು ಇದ್ದು, ಪ್ರಸ್ತುತ 40,000 ಕ್ಯೂಸೆಕ್ಸ್ ಗಳಿಗಿಂತಲೂ ಹೆಚ್ಚು ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು ಮಾಹಿತಿಯ ಪ್ರಕಾರ ಈ ಒಳಹರಿವಿನ ಪ್ರಮಾಣ ನಾಳೆಯಿಂದ ಇನ್ನು ಹೆಚ್ಚಾಗಲಿದ್ದು ತುಂಗಾ ಡ್ಯಾಮ್ನಿಂದ ಹೆಚ್ಚಿನ ನೀರು ಬಿಡುಗಡೆಯಾಗಿದ್ದು ಜಲಾಶಯಕ್ಕೆ ಹೆಚ್ಚಿನ ನೀರು ಬರುವ ನಿರೀಕ್ಷೆ ಇದೆ. ಹಾಗೆಯೇ ತುಂಗಭದ್ರಾ ಜಲಾಶಯವು ತುಂಬಾಬಹುದೆಂಬ ಆಶಯದಲ್ಲಿದ್ದು, ಕೂಡಲೇ ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಮುನಿರಾಬಾದ್ ಕೇಂದ್ರ ಕಚೇರಿಯಲ್ಲಿ ನಡೆಸಬೇಕು ಮತ್ತು ಸಭೆಯಲ್ಲಿ ಎಲ್ಲಾ ರೈತ ಮುಖಂಡರಿಗೆ ಮತ್ತು ರೈತರಿಗೆ ಅವಕಾಶ ಕಲ್ಪಿಸಬೇಕು. ಪ್ರಸ್ತುತ 45.00 ಟಿಎಂಸಿ ನೀರು ಇದ್ದು, ಒಳಹರಿವು ಹೆಚ್ಚಿರುವುದರಿಂದ ತುಂಗಭದ್ರ ನದಿ ಪಾತ್ರ, ಎಲ್.ಎಲ್.ಸಿ ಮತ್ತು ಹೆಚ್.ಎಲ್.ಸಿ ಕಾಲುವೆ ರೈತರಿಗೆ ಬೆಳೆ ಬೆಳೆಯಲು ನೀರನ್ನು ಹರಿಸಬೇಕು ಹಾಗೆಯೇ ವಿಜಯನಗರ ಕಾಲುವೆ ಸೇರಿದಂತೆ ಇತರೆ ಕಾಲುವೆ ಆಶ್ರಿತ ಪ್ರದೇಶದಲ್ಲಿ ಬೆಳೆದ ರೈತರ ಬೆಳೆಗಳಿಗೆ ನೀರು ಬಿಡಬೇಕು. ಒಂದು ವೇಳೆ ಆ.7ರ ಒಳಗೆ ಸಭೆ ಕರೆದು ರೈತರಿಗೆ ನೀರು ಬಿಡುವ ಕಾರ್ಯ ಮಾಡದಿದ್ದ ಪಕ್ಷದಲ್ಲಿ ಎಲ್ಲಾ ರೈತರು ಮುನಿರಾಬಾದ್ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಖಾಜಾಹುಸೇನ್ ನಿಯಾಜಿ ಸೇರಿದಂತೆ ರೈತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















