ಬಳ್ಳಾರಿ / ಕಂಪ್ಲಿ : ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ರಾಮಸಾಗರ ಗ್ರಾಮದ ಮತದಾರರ ಪಟ್ಟಿಯಲ್ಲಿ ಆಘಾತಕಾರಿ ಲೋಪವೊಂದು ಬೆಳಕಿಗೆ ಬಂದಿದೆ. ರಾಮಸಾಗರ ಗ್ರಾಮದ ನಿವಾಸಿ ಆನೆ ಪ್ರಕಾಶ (ತಂದೆ: ಆನೆ ಈರಪ್ಪ) ಅವರನ್ನು ಚುನಾವಣಾ ಆಯೋಗವು ಮೃತಪಟ್ಟಿದ್ದಾರೆ ಎಂದು ಪರಿಗಣಿಸಿ, ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಎಎಸ್ಡಿಡಿಒ (ASDDO) ಪಟ್ಟಿಯಲ್ಲಿ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಆನೆ ಪ್ರಕಾಶ ಅವರಿಗೆ ಸುಮಾರು 70 ವರ್ಷ ವಯಸ್ಸಾಗಿದ್ದು, ವಯಸ್ಸಿನ ಆಧಾರದ ಮೇಲೆ ಅವರನ್ನು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ ಎನ್ನಲಾಗಿದೆ. ಆದರೆ ವಾಸ್ತವವಾಗಿ ಅವರು ಜೀವಂತವಾಗಿದ್ದು, ತಮ್ಮ ಸ್ವಂತ ನಿವಾಸದಲ್ಲಿಯೇ ವಾಸಿಸುತ್ತಿದ್ದಾರೆ. ಚುನಾವಣಾ ಆಯೋಗದ ಪಟ್ಟಿಯಲ್ಲಿ ಮೃತರೆಂದು ನಮೂದಿಸಲಾಗಿರುವ ವ್ಯಕ್ತಿ ತಾವೇ ಎಂದು ಸ್ಪಷ್ಟಪಡಿಸಿರುವ ಆನೆ ಪ್ರಕಾಶ ಅವರು, ತಮ್ಮ ಆಧಾರ್ ಕಾರ್ಡ್ ತೋರಿಸಿ ತಮ್ಮ ಅಸ್ತಿತ್ವವನ್ನು ಸಾಬೀತು ಪಡಿಸಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡ ವಸಂತರಾಜ್ ಕಹಳೆ, ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
“ಚುನಾವಣಾ ಆಯೋಗ ನಡೆಸುತ್ತಿರುವ ಎಸ್ಐಆರ್ ಪ್ರಕ್ರಿಯೆಯು ಸಂಪೂರ್ಣ ಗೊಂದಲಕಾರಿ, ಅಸಂಬದ್ಧ ಹಾಗೂ ಅಸಂವಿಧಾನಿಕವಾಗಿದೆ. ಎಎಸ್ಡಿಡಿಒ ಪಟ್ಟಿಯಲ್ಲಿ ಬದುಕಿರುವವರನ್ನೇ ಸತ್ತಿದ್ದಾರೆಂದು ಪಟ್ಟಿ ಮಾಡಲಾಗಿದೆ. ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ 1ನೇ ವಾರ್ಡ್ನ ನಿವಾಸಿ ಆನೆ ಪ್ರಕಾಶ ಅವರೇ ಇದಕ್ಕೆ ಜೀವಂತ ಸಾಕ್ಷಿ. ವಾಸ್ತವವಾಗಿ ಬದುಕಿರುವ ವ್ಯಕ್ತಿಯನ್ನು ಮೃತರೆಂದು ದಾಖಲಿಸಿ ಮತಾಧಿಕಾರ ಕಸಿಯುವ ಪ್ರಯತ್ನ ನಡೆದಿದೆ. ಈ ಲೋಪಕ್ಕೆ ಚುನಾವಣಾ ಆಯೋಗ, ಸ್ಥಳೀಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಹೊಣೆಗಾರರಾಗಬೇಕು,” ಎಂದು ಅವರು ಆರೋಪಿಸಿದ್ದಾರೆ.
ಮತದಾರರ ಅಸ್ತಿತ್ವವನ್ನು ಸಮರ್ಪಕವಾಗಿ ಪರಿಶೀಲಿಸದೇ ಎಎಸ್ಡಿಡಿಒ ಪಟ್ಟಿಯಲ್ಲಿ ಹೆಸರು ಸೇರಿಸಿ, ಮತದಾರರ ಪಟ್ಟಿಯಿಂದ ತೆಗೆದುಹಾಕಲು ಮುಂದಾಗಿರುವುದು ಗಂಭೀರ ನಿರ್ಲಕ್ಷ್ಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಆನೆ ಪ್ರಕಾಶ ಅವರು ಫಾರ್ಮ್-6 ಅರ್ಜಿ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಸೂಚಿಸಿರುವುದು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬದುಕಿರುವ ವ್ಯಕ್ತಿಯನ್ನೇ ಮೃತರೆಂದು ದಾಖಲಿಸಿ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ಕುರಿತು ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಹಾಗೂ ಆನೆ ಪ್ರಕಾಶ ಅವರ ಮತದಾರರ ಹಕ್ಕನ್ನು ತಕ್ಷಣ ಮರುಸ್ಥಾಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















