ಗಂಗಾವತಿ: ತಾಲೂಕಿನ ಶಿಕ್ಷಣ ಇಲಾಖೆಯ ಅಂಗವಿಕಲ ಅಧೀಕ್ಷಕ ಹುದ್ದೆಯ ನೌಕರರಾದ ಮಂಜುನಾಥ್ ಹೆಚ್.ಜಿ. ಅವರು ಕಚೇರಿಯ ಸಹೋದ್ಯೋಗಿ ಹಾಗೂ ಮೇಲಾಧಿಕಾರಿಗಳ ಕಿರುಕುಳ ತಾಳಲಾರದೆ ಕಳೆದ ತಿಂಗಳು ಆಗಸ್ಟ್-24 ಸೋಮವಾರ, ಆರಾಳ ಹತ್ತಿರದ ತುಂಗಭದ್ರಾ ಎಡದಂಡೆ ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಘಟನೆಯು ಅತ್ಯಂತ ದುರದೃಷ್ಟಕರ ಹಾಗೂ ಖಂಡನೀಯವಾಗಿದೆ ಎಂದು ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಗಂಗಾವತಿ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಕಳವಳ ವ್ಯಕ್ತಪಡಿಸಿದರು.
ಅವರು ಇಂದು ಮೃತ ನೌಕರ ಮಂಜುನಾಥ್ ಹೆಚ್.ಜಿ ಅವರ ಆತ್ಮಹತ್ಯೆಗೆ ಕಾರಣರಾದ ನೌಕರರನ್ನು ಕೂಡಲೇ ಅಮಾನತ್ತುಗೊಳಿಸಿ ಬಂಧಿಸಿ, ಶಿಸ್ತು ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಮಂಜುನಾಥ ಹೆಚ್. ಅವರು ತಮ್ಮ ಸಾವಿಗೆ ಕಚೇರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಡೆತ್ನೋಟ್ ಬರೆದಿಟ್ಟಿದ್ದಾರೆ. ಇದರ ಆಧಾರದ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಬಿ ನಟೇಶ್, ವ್ಯವಸ್ಥಾಪಕ ಶಿವಪ್ರಸಾದ್ ಸ್ವಾಮಿ ಮತ್ತು ಸೂಪರಿಂಟೆಂಡೆಂಟ್ ವೈ. ರೇಣುಕಾ ಗೌಡರ್ ಅವರ ವಿರುದ್ಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಆರೋಪಿತರನ್ನು ಬಂಧಿಸಿರುವ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿರುವುದಿಲ್ಲ. ಒಬ್ಬ ಅಂಗವಿಕಲ ನೌಕರನಿಗೆ ಇಲಾಖೆಯಲ್ಲೇ ಈ ಮಟ್ಟದ ಮಾನಸಿಕ ಕಿರುಕುಳ ನೀಡಿರುವುದು ಇಡೀ ಸಮಾಜ ತಲೆತಗ್ಗಿಸುವಂತಾಗಿದೆ. ಕೂಡಲೇ ಸೂಕ್ತವಾಗಿ ತನಿಖೆ ಮಾಡಿ, ಆರೋಪಿತ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿ ಬಂಧಿಸಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ಅವರ ಕುಟುಂಬಕ್ಕೆ ಸೂಕ್ತ ಆರ್ಥಿಕ ಪರಿಹಾರ ಮತ್ತು ಕುಟುಂಬದ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಬೇಕು.
ಈ ರೀತಿಯಲ್ಲಿ ವಿವಿಧ ಇಲಾಖೆಗಳಲ್ಲಿ ಸಣ್ಣ ಹುದ್ದೆಯ ವಿಕಲಚೇತನ ನೌಕರರಿಗೆ ಮತ್ತು ಎಲ್ಲಾ ವರ್ಗಗಳಲ್ಲಿನ ಅಂಗವಿಕಲರಿಗೆ ಇಂತಹ ಕಿರುಕುಳ, ಅಪಮಾನಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. 2016ರ ನಿಯಮಗಳ ಪ್ರಕಾರ ಅಂಗವಿಕಲರ ಸಮುದಾಯದ ಮೇಲೆ ದೌರ್ಜನ್ಯ, ಅತ್ಯಾಚಾರ, ಕಿರುಕುಳ ನೀಡಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬಹುದಾಗಿರುತ್ತದೆ. ಆ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿ ಹಾಗೂ ಆರೋಪಿತ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತು ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಕರವೇ ಪ್ರವೀಣಕುಮಾರ ಶೆಟ್ಟಿ ಬಣ ಮನವಿ ಸಲ್ಲಿಸಿದೆ ಎಂದರು.
ಈ ಸಂದರ್ಭದಲ್ಲಿ ಕರವೇ (ಪ್ರವೀಣಕುಮಾರ ಶೆಟ್ಟಿ ಬಣ) ಅಂಗವಿಕಲರ ಘಟಕದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಮಂಜುನಾಥ ಹೊಸಕೇರಿ, ಎಂ.ಆರ್.ಡಬ್ಲ್ಯೂ ಆದ ಮಂಜುಳಾ ಹಿರೇಮಠ, ಯು.ಆರ್.ಡಬ್ಲ್ಯೂ ಆದ ಮಲಿಯಪ್ಪ, ವಿ.ಆರ್.ಡಬ್ಲ್ಯೂ ಆದ ಶಮೀನಾ, ವಿಕಲಚೇತನರಾದ ಮಹಮದ್ ಜೌಪರ್, ಜಂಬುನಾಥ, ರಾಜೇಶ್, ಹೈಮದ್, ಶೀವುಮೂರ್ತಿ, ರಮ್ಜಾನ್, ದೌಲ್ ಸಾಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು
- ಕರುನಾಡ ಕಂದ ಸುದ್ದಿ



















