ಬಳ್ಳಾರಿ / ಕಂಪ್ಲಿ : ದನಕರುಗಳಿಗಾಗಿ ಭತ್ತದ ಹುಲ್ಲನ್ನು ಮುಂಜಾಗ್ರತೆಯಾಗಿ ಸಂಗ್ರಹಿಸುತ್ತಿದ್ದಾರೆ ಮತ್ತು ಕೆಲವೆಡೆ ಮೆಕ್ಕೆಜೋಳದಂತಹ ಕಡಿಮೆ ನೀರಿನ ಅವಶ್ಯಕತೆ ಇರುವ ಬೆಳೆಗಳಿಗೆ ಮೊರೆ ಹೋಗುತ್ತಿದ್ದಾರೆ.
ತುಂಗಭದ್ರಾ ಜಲಾಶಯದ ಕ್ರೆಸ್ಟ್ಗೇಟ್ಗಳ ಅಳವಡಿಕೆ ಕಾರ್ಯ ನಡೆಯುತ್ತಿರುವುದರಿಂದ ಈ ಬಾರಿ ಹಿಂಗಾರು ಭತ್ತ ನಾಟಿಗೆ ನೀರಿಲ್ಲದಂತಾಗಿದೆ. ಈ ಕಾರಣದಿಂದ ಮುಂಗಾರಿನಲ್ಲಿ ಬೆಳೆದ ಭತ್ತದ ಮೇವು, ಸೊಪ್ಪೆಯನ್ನು ರೈತರು ಬಣವೆ ಹಾಕಿ ಜತನದಿಂದ ಕಾಪಾಡಿಕೊಂಡಿರುವುದು ತಾಲ್ಲೂಕಿನಲ್ಲಿ ಕಂಡು ಬರುತ್ತಿದೆ.
ಮುಂದಿನ ಬೆಳೆಗಳು ಕೈಸೇರುವವರೆಗೆ ಭತ್ತದ ಒಣ ಮೇವು, ಜೋಳ ಮತ್ತು ಮೆಕ್ಕೆಜೋಳದ ಸೊಪ್ಪೆ(ದಂಟು), ತೊಗರಿ, ಶೇಂಗಾ ಹೊಟ್ಟನ್ನು ರೈತನ ಜೀವನಾಡಿಗಳಾದ ದನಕರುಗಳ ಆಪತ್ಕಾಲದ ಆಹಾರವಾಗಿ ಬಳಕೆ ಮಾಡಲಾಗುತ್ತದೆ.
ತಾಲ್ಲೂಕಿನ ತುಂಗಭದ್ರಾ ಬಲದಂಡೆ ಕೆಳಮಟ್ಟ ಮತ್ತು ಮೇಲ್ಮಟ್ಟ ಕಾಲುವೆ, ತುಂಗಭದ್ರಾ ನದಿ, ವಿಜಯನಗರ ಕಾಲುವೆ, ಕೆರೆ ನೀರಾವರಿ, ಕೊಳವೆಬಾವಿ, ಏತನೀರಾವರಿ ಸೇರಿ ಸುಮಾರು 23,000 ಹೆಕ್ಟೇರ್ನಲ್ಲಿ ಬಹುತೇಕ ರೈತರು ವಾಣಿಜ್ಯ ಬೆಳೆಯಾದ ವಿವಿಧ ತಳಿ ಭತ್ತ ನಾಟಿ ಮಾಡಿದ್ದರೆ. ಕೆಲವೇ ರೈತರು ಜೋಳ, ಮುಸುಕಿನಜೋಳ, ತೊಗರಿ ಬೆಳೆದಿದ್ದರು.
ಇದೀಗ ಆ ರೈತರು ಹೊಲ, ಗದ್ದೆ, ಊರ ಹೊರವಲಯದ ಬಯಲಿನಲ್ಲಿ ಆಯತಾ, ತ್ರಿಕೋನಾ, ಚೌಕಾಕಾರ ಮತ್ತು ಪಿರಮಿಡ್ ಆಕಾರಗಳಲ್ಲಿ ಬಣವೆಗಳನ್ನು ನಿರ್ಮಿಸಿ ರಕ್ಷಿಸಿಕೊಂಡಿದ್ದಾರೆ. ಇನ್ನು ಕೆಲವರು ಟಾರ್ಪಲಿನ್ ಹೊದಿಕೆ ಹಾಕಿದ್ದರೆ, ಅಲ್ಲಲ್ಲಿ ಶೆಡ್ಗಳಲ್ಲಿಯೂ ಮೇವು ಸಂಗ್ರಹಿಸಿದ್ದಾರೆ.
‘ಪಶುಪಾಲನೆ ಮಾಡುವ ರೈತ ಅಷ್ಟೊಂದು ಶ್ರದ್ಧೆಯಿಂದ ಬಣವೆಯನ್ನು ನಿರ್ಮಿಸಿರುತ್ತಾನೆ. ಆತ ಯಾವ ಎಂಜಿನಿಯರ್ಗೂ ಕಡಿಮೆ ಇಲ್ಲದಂತೆ ತಾನು ಕರಗತ ಮಾಡಿಕೊಂಡಿರುವ ಸಾಂಪ್ರದಾಯಿಕ ಜ್ಞಾನವನ್ನು ಬಳಸಿ ವರ್ಷಾನುಗಟ್ಟಲೇ ಮೇವು ಮತ್ತು ಹೊಟ್ಟನ್ನು ಶೇಖರಿಸಿ ಇಡುತ್ತಾನೆ’ ಎಂದು ಮೆಟ್ರಿ ಗ್ರಾಮದ ಡೈರಿ ಫಾರಂ ಮಾಲೀಕ ಉದ್ಯಾಳು ವೀರನಗೌಡ ವಿವರಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















