ಬಳ್ಳಾರಿ / ಕಂಪ್ಲಿ : ಪಟ್ಟಣದ ಬಳ್ಳಾರಿ ರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಬಳಿಯಲ್ಲಿ ವೀರಶೈವ ಲಿಂಗಾಯತ ಮಹಾ ವೇದಿಕೆಯ ತಾಲೂಕು ಘಟಕ ಕಚೇರಿಯನ್ನು ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ, ತಾಲೂಕಾಧ್ಯಕ್ಷ ಬಳೆ ಮಲ್ಲಿಕಾರ್ಜುನ ಸಮ್ಮುಖದಲ್ಲಿ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ಗುರುವಾರ ಉದ್ಘಾಟಿಸಿದರು.
ಇಲ್ಲಿನ ನಂ.10 ಮುದ್ದಾಪುರದ ಯಲ್ಲಮ್ಮಕ್ಯಾಂಪ್ ಬಳಿಯಲ್ಲಿ ರಾಜ್ಯಾಧ್ಯಕ್ಷರನ್ನು ಅದ್ಧೂರಿಯಾಗಿ ಸ್ವಾಗತಿಸಿ, ನಂತರ ಅಲ್ಲಿಂದ ನೂರಾರು ಬೈಕ್ಗಳೊಂದಿಗೆ ರ್ಯಾಲಿ ಮೂಲಕ ಪ್ರಥಮ ದರ್ಜೆ ಕಾಲೇಜು ಮೂಲಕ ನೂತನ ತಾಲೂಕು ಕಛೇರಿಗೆ ಆಗಮಿಸಿ, ರಿಬ್ಬನ್ ಕಟ್ ಮಾಡುವ ಮೂಲಕ ಅತ್ಯಂತ ವಿಜೃಂಭಣೆಯಿಂದ ಉದ್ಘಾಟಿಸಿದರು.
ತದನಂತರ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು. ಇದರ ಜೊತೆಗೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಅವರ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಯಾಣಚೌಕಿ ಮಠದ ಬಸವರಾಜ ಶಾಸ್ತ್ರಿ, ಅಪೇಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ವೀರಶೈವ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ, ಮಹಾ ವೇದಿಕೆ ಉಪಾಧ್ಯಕ್ಷರಾದ ಬಿ.ವಿ.ಗೌಡ, ಎಸ್.ಚಂದ್ರಶೇಖರಗೌಡ, ಮುಖಂಡರಾದ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಇಟಗಿ ಬಸವರಾಜಗೌಡ, ಕನಕಗಿರಿ ರೇಣುಕಾಗೌಡ, ಅಮರೇಗೌಡ, ಕರಿಬಸಯ್ಯಸ್ವಾಮಿ, ಜೀರ್ ಅಯ್ಯಪ್ಪ, ವಿ.ಬಿ.ನಾಗರಾಜ ಸೇರಿದಂತೆ ವೀರಶೈವ ಸಮಾಜ ಸೇರಿದಂತೆ ಎಲ್ಲಾ ಸಮಾಜದ ಬಂಧುಗಳು ಪಾಲ್ಗೊಂಡಿದ್ದರು.
ತದನಂತರ ಕಛೇರಿಯಿಂದ ಹೊರಟ ಬೈಕ್ ರ್ಯಾಲಿ ಮುಂದುವರೆಸಿ, ವಾಲ್ಮೀಕಿ, ಅಂಬೇಡ್ಕರ್ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು, ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶಗೆ ಕ್ರೇನ್ಗಳ ಮೂಲಕ ಬೃಹತ್ ಹೂವಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಇಲ್ಲಿನ ಐತಿಹಾಸಿಕ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಮಹಾಮಂಗಳಾರತಿ ಮೂಲಕ ದರ್ಶನ ಪಡೆದು, ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವರದಿ : ಜಿಲಾನಸಾಬ್ ಬಡಿಗೇರ್



















