ಬಳ್ಳಾರಿ / ಕಂಪ್ಲಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ರಾಮ್ ಅವರು ನೀಡಿದ ಕೊಡುಗೆಗಳು ಜಗತ್ತಿಗೆ ಅಪಾರವಾಗಿವೆ ಎಂದು ಶಾಸಕ ಜೆ.ಎನ್.ಗಣೇಶ್ ಅವರ ಸೋದರಳಿಯ ರಾಜೇಶ್ಸಿಂಗ್ ಹೇಳಿದರು.
ಸ್ಥಳೀಯ ಸಣಾಪುರ ರಸ್ತೆಯ ಅಂಬೇಡ್ಕರ್ ಕಾಲೋನಿ ಬಳಿಯಲ್ಲಿ ಮುಖ್ಯರಸ್ತೆ ಬದಿಯಲ್ಲಿ ನಿರ್ಮಾಣಗೊಂಡ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ರಾಮ್ ಅವರ ನೂತನ ಪುತ್ಥಳಿಯನ್ನು ಬುಧವಾರ ಅದ್ಧೂರಿಯಾಗಿ ಲೋಕಾರ್ಪಣೆಗೊಳಿಸಿದ ಮಾತನಾಡಿ, ಇಂದಿನ ದಿನಮಾನದಲ್ಲಿ ನಾಗರಿಕರು ನೆಮ್ಮದಿಯ ಜೀವನ ನಡೆಸಲು ಅಂಬೇಡ್ಕರ್ ನೀಡಿದ ಸಂವಿಧಾನವೇ ಅತಿ ಮುಖ್ಯವಾಗಿದೆ. ಇದರ ಜೊತೆಗೆ ಬಾಬು ಜಗಜೀವನ್ರಾಮ್ ಅವರು ಸಹ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಮಹಾನ್ ನಾಯಕರ ತತ್ವಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು, ಉತ್ತಮ ಶಿಕ್ಷಣದೊಂದಿಗೆ ಒಳ್ಳೆಯ ಭವಿಷ್ಯದ ಕಡೆಗೆ ಸಾಗಬೇಕು. ದಲಿತ ಸಮಾಜದವರು ಮಕ್ಕಳಿ ಶಿಕ್ಷಣ ಒಳ್ಳೆಯ ಶಿಕ್ಷಣ ಕೊಡಿಸುವ ಜೊತೆಗೆ ಅಂಬೇಡ್ಕರ್ ಅವರ ಜೀವನ ಚರಿತ್ರೆಗಳ ಪುಸ್ತಕಗಳನ್ನು ನೀಡಬೇಕು. ಅಂದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ರುದ್ರಮುನಿ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಸ್ವತಂತ್ರ ಜೀವನಕ್ಕೆ ಅಂಬೇಡ್ಕರ್ ಅವರು ದಾರಿ ಮಾಡಿಕೊಟ್ಟಿದ್ದಾರೆ. ಇವರ ತತ್ವ, ವಿಚಾರಗಳೊಂದಿಗೆ ಸಮಾಜ ಅಭಿವೃದ್ಧಿ ಜೊತೆಗೆ ಜನಪರ ಸೇವೆಗೆ ಸದಾ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮುಖಂಡರಾದ ಮೌಲಾಹುಸೇನ್ ಸೇರಿದಂತೆ ಅಂಬೇಡ್ಕರ್ ಸಂಘದ ಸರ್ವ ಸದಸ್ಯರು ಮತ್ತು ಮಾದಿಗ ಸಮಾಜದವರು ಪಾಲ್ಗೊಂಡಿದ್ದರು.
ಮೆರವಣಿಗೆ : ಇಲ್ಲಿನ ಸಣಾಪುರ ರಸ್ತೆಯ ನೂತನ ಪುತ್ಥಳಿ ಅನಾವರಣಗೊಂಡ ಸ್ಥಳದಿಂದ ಅಂಬೇಡ್ಕರ್ ಮತ್ತು ಜಗಜೀವನ್ರಾಮ್ ಭಾವಚಿತ್ರ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ಆರಂಭಗೊಂಡು, ಪಟ್ಟಣದ ಸಂತೆ ಮಾರುಕಟ್ಟೆ, ನಡುವಲ ಮಸೀದಿ, ಡಾ.ರಾಜಕುಮಾರ ರಸ್ತೆ, ಮಾರೆಮ್ಮ ಗುಡಿ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಪುನೀತ್ ಸರ್ಕಲ್ ಮುಖಾಂತರ ಪುನ: ಅಂಬೇಡ್ಕರ್ ಕಾಲೋನಿಯಲ್ಲಿ ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ ಧ್ವನಿ ವರ್ಧಕದ ವಿವಿಧ ಹಾಡುಗಳಿಗೆ ಯುವಕರು, ಮಹಿಳೆಯರು, ಮಕ್ಕಳು ಕುಣಿದು ಕುಪ್ಪಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















