ಬಳ್ಳಾರಿ / ಕಂಪ್ಲಿ : ಬುಧವಾರದಂದು ಬಾಗಲಕೋಟೆ ನಗರದ ಲಯನ್ಸ್ ಕ್ಲಬ್ನಲ್ಲಿ ಅಂತರಾಷ್ಟ್ರೀಯ ಹಿಂದೂ ಮಹಾಸಭಾ ಕರ್ನಾಟಕ ವಿಜಯಪುರ ಜಿಲ್ಲಾ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಿರಿ ಉತ್ಸವ ಹಾಗೂ ರಾಷ್ಟ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭದ್ರತೆ ಸಮಾಜ ಸೇವಾ ಕ್ಷೇತ್ರದಲ್ಲಿನ ಅಪಾರ ಸೇವೆಯನ್ನು ಗುರುತಿಸಿ, ಕಂಪ್ಲಿ ಗೃಹ ರಕ್ಷಕದಳದ ಘಟಕಾಧಿಕಾರಿ ಹೆಚ್.ಗಿರಿಧರ್ ಇವರಿಗೆ 2026ರ ಪ್ರಸ್ತುತ ಭಾರತ ಭೂಷಣ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತ ಹೆಚ್.ಗಿರಿಧರ್ ಮಾತನಾಡಿ, ಹಲವು ವರ್ಷಗಳಿಂದ ಗೃಹ ರಕ್ಷಕದಳದಲ್ಲಿ ಸೇವೆ ಮಾಡುವ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರಲಾಗಿದೆ. ಎಲೆಮರೆ ಕಾಯಿಯಂತಿರುವ ನಮ್ಮ ಸೇವೆಯನ್ನು ಗುರುತಿಸಿ, ಅಂತರಾಷ್ಟ್ರೀಯ ಹಿಂದೂ ಮಹಾಸಭಾ ಕರ್ನಾಟಕ ವಿಜಯಪುರ ಜಿಲ್ಲಾ ಪರಿಷತ್ನವರು ಭಾರತ ಭೂಷಣ ರಾಷ್ಟ್ರ ಪ್ರಶಸ್ತಿ ನೀಡಿರುವುದು ತುಂಬ ಖುಷಿದಾಯಕವಾಗಿದೆ. ಇದರಿಂದ ಇನ್ನಷ್ಟು ಸೇವೆಗೆ ಉತ್ಸುಕನಾಗಿದ್ದೇನೆ. ಇದೇ ತರನಾಗಿ ಇನ್ನೂ ಬಹಳಷ್ಟು ಜನರು ಎಲೆಮರೆ ಕಾಯಿಯಂತೆ ಸೇವೆ ಮಾಡುತ್ತಿದ್ದು, ಅಂತವರನ್ನು ಸಹ ಪ್ರಶಸ್ತಿ ನೀಡಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಸಾಗರ ಆರ್.ಕಲಾದಿಗಿ, ಸಾಹಿತ್ಯ ಕಲಾವಿದ ಡಾ.ಬಸವರಾಜ ಗವಿಮಠ ಸೇರಿದಂತೆ ಗಣ್ಯರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















