
ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಹನುಮಂತಪುರ ಗ್ರಾಮದ ಸರ್ವೇ ನಂ. 8/9, 10 ಹಾಗೂ 6 ರಲ್ಲಿರುವ ಎಲೆರಾಂಪುರ ನಿವಾಸಿ ರಾಜಣ್ಣ ಅವರಿಗೆ ಸೇರಿದ ಬುದ್ಧನ ಮನೆ ವಾಲ್ಮೀಕಿ ವನ ಫಾರ್ಮ್ ಹೌಸ್ ಬಳಿ ಕಳೆದ ಜೂನ್ 29ರಂದು ಚಿರತೆಯೊಂದು ನಾಯಿ ಹಿಡಿದುಕೊಂಡು ಹೋಗಿತ್ತು. ಈ ಘಟನೆ ಫಾರ್ಮ್ ಹೌಸ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು.
ಘಟನೆಯ ಬಳಿಕ ರಾಜಣ್ಣ ಅವರು ಕೊರಟಗೆರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳದಲ್ಲಿ ಬೋನು ಅಳವಡಿಸಿದ್ದರು.
ಅದರಂತೆ, ಜುಲೈ 1ರ ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಚಿರತೆ ಬೋನಿಗೆ ಬಿದ್ದಿದೆ. ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದರು.
ಮಧುಗಿರಿ ಎಸ್ಸಿಎಫ್ ಮಲ್ಲಿಕಾರ್ಜುನ್ ಹಾಗೂ ಕೊರಟಗೆರೆ ವಲಯ ಅರಣ್ಯಾಧಿಕಾರಿ ಹನುಮಂತರಾಜು ಅವರ ಮಾರ್ಗದರ್ಶನದಲ್ಲಿ, ಉಪ ವಲಯ ಅರಣ್ಯಾಧಿಕಾರಿ ದಿಲೀಪ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪೃಥ್ವಿ, ಗಂಗಾಧರ್, ವೆಂಕಟೇಶ್, ಕೆಂಪಯ್ಯ ಹಾಗೂ ಚಾಲಕ ಕೃಷ್ಣಮೂರ್ತಿ, ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದರು.
ಸೆರೆ ಹಿಡಿದ ಚಿರತೆಯನ್ನು ಬಳಿಕ ಸುರಕ್ಷಿತವಾಗಿ ಬನ್ನೇರುಘಟ್ಟ ಅಭಯಾರಣ್ಯಕ್ಕೆ ಸಾಗಿಸಲಾಯಿತು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಕಾಡು ಪ್ರಾಣಿಗಳು ಕಂಡುಬಂದರೆ ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ತಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ವರದಿ. ಪ್ರಸನ್ನಕುಮಾರ್. ಎಸ್. ಕೊರಟಗೆರೆ




















