ಕೊಪ್ಪಳ : ತಾಲೂಕಿನ ಬೆಟಗೇರಿಯ ಸರಕಾರಿ ಪ್ರೌಢಶಾಲೆಯಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಜನ್ಮದಿನದ ಅಂಗವಾಗಿ ರಾಷ್ಟೀಯ ಗ್ರಂಥಪಾಲಕರ ದಿನವನ್ನು ಆಚರಿಸಲಾಯಿತು. ಗ್ರಂಥಾಪಾಲಕ, ಗಣಿತ ಶಿಕ್ಷಕ ಮರ್ದಾನಲಿ ಗಡಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ನಾವು ಜ್ಞಾನ, ಶಿಕ್ಷಣ ಮತ್ತು ಓದುವ ಸಂಸ್ಕೃತಿಯ ಮಹತ್ವವನ್ನು ಸಾರುವ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲು ಇಲ್ಲಿ ಸೇರಿದ್ದೇವೆ. ಪ್ರತಿವರ್ಷ ಆಗಸ್ಟ್ 12ರಂದು ಭಾರತದಲ್ಲಿ ಈ ದಿನವನ್ನು ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುತ್ತದೆ.
ಗ್ರಂಥಾಲಯವೆಂದರೆ ಕೇವಲ ಪುಸ್ತಕಗಳನ್ನು ಸಂಗ್ರಹಿಸಿಡುವ ಸ್ಥಳವಲ್ಲ. ಅದು ಜ್ಞಾನದ ಭಂಡಾರ, ಚಿಂತನೆಯ ಕೇಂದ್ರ, ಕಲಿಕೆಯ ತಾಣ ಮತ್ತು ವ್ಯಕ್ತಿತ್ವ ವಿಕಾಸದ ವೇದಿಕೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ, ಸ್ವಯಂ ಕಲಿಕೆಯ ಮನೋಭಾವ, ವಿಚಾರಶಕ್ತಿ ಹಾಗೂ ಸೃಜನಶೀಲತೆಯನ್ನು ಬೆಳೆಸುವಲ್ಲಿ ಗ್ರಂಥಾಲಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ.ಡಾ. ಎಸ್. ಆರ್. ರಂಗನಾಥನ್ ಅವರು ಗ್ರಂಥಾಲಯ ವಿಜ್ಞಾನಕ್ಕೆ ನೀಡಿದ ಕೊಡುಗೆ ಅಪಾರ. ಅವರ “ಗ್ರಂಥಾಲಯ ವಿಜ್ಞಾನದ ಐದು ನಿಯಮಗಳು” ಇಂದಿಗೂ ಗ್ರಂಥಾಲಯ ಸೇವೆಗಳಿಗೆ ಮಾರ್ಗದರ್ಶಕವಾಗಿವೆ. “ಪುಸ್ತಕಗಳು ಬಳಕೆಗೆ” ಎಂಬ ಅವರ ಆಶಯವು ಪುಸ್ತಕಗಳು ಕಪಾಟಿನಲ್ಲಿ ಉಳಿಯದೆ ಓದುಗರ ಕೈಗೆ ತಲುಪಬೇಕು ಎಂಬ ಸಂದೇಶವನ್ನು ನೀಡುತ್ತವೆ. ಈ ಪವಿತ್ರ ದಿನದಂದು ಡಾ. ಎಸ್. ಆರ್ ರಂಗನಾಥನ್ ಅವರ ಆದರ್ಶಗಳನ್ನು ಸ್ಮರಿಸುತ್ತ ನಮ್ಮ ಶಾಲೆಯ ಗ್ರಂಥಾಲಯವನ್ನು ಹೆಚ್ಚು ಸಕ್ರೀಯವಾಗಿ ಬಳಸೋಣ. ಓದೋಣ, ಅರಿಯೋಣ, ಜ್ಞಾನವಂತರಾಗೋಣ ಎಂಬ ಸಂಕಲ್ಪ ಮಾಡೋಣ ಎಂದರು.
ಹಿರಿಯ ಶಿಕ್ಷಕರಾದ ಗಿರಿಯಪ್ಪ ಹಾರನಹಳ್ಳಿ ಮಾತನಾಡಿ, ನಮ್ಮ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿದಿನ ಸ್ವಲ್ಪ ಸಮಯವನ್ನು ಪುಸ್ತಕ ಓದುವುದಕ್ಕೆ ಮೀಸಲಿಡಬೇಕು. ಪುಸ್ತಕವನ್ನು ಸ್ನೇಹಿತನನ್ನಾಗಿ ಮಾಡಿಕೊಂಡಾಗ ಜ್ಞಾನ ವಿಸ್ತಾರವಾಗಿ ಭಾಷಾ ಕೌಶಲ್ಯ ಹೆಚ್ಚುತ್ತದೆ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ ಎಂದರು. ಶಿಕ್ಷಣ ಪ್ರೇಮಿಗಳಾದ ಶಂಕ್ರಪ್ಪ ಬಡಿಗೇರ್ ಮಾತನಾಡಿ ವಿದ್ಯಾರ್ಥಿಗಳು ಗ್ರಂಥಾಲಯವನ್ನು ಮಕ್ಕಳು ಸದ್ಭಳಕೆ ಮಾಡಿಕೊಳ್ಳಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿರುವ ಗ್ರಂಥಪಾಲಕರ ಕಾರ್ಯ ಉತ್ತಮವಾಗಿದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರುಗಳಾದ ಪರಶುರಾಮ ಸಾಲ್ಮನಿ ಮಾತನಾಡಿ ಮಕ್ಕಳು ಪ್ರತಿದಿನ ಅರ್ಧ ಗಂಟೆಯಾದರೂ ಪುಸ್ತಕ ಓದುವ ಹವ್ಯಾಸ ಬೆಳಿಸಿಕೊಳ್ಳಬೇಕೆಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ರಾಜಾಸಾಬ್ ಬಡಿಗೇರ್, ರವಿಕಿರಣ್ ಟಿಕಾರೆ ವೀರಯ್ಯ ಪೂಜಾರ್, ಶಾಂತವೀರಯ್ಯ ಕಳ್ಳಿಮಠ, ನಾರಾಯಣಪ್ಪ ಬಿಸನಳ್ಳಿ, ಸುನೀತಾ ಯಾಳಗಿ ಸೋಮಣ್ಣ ತಳಕಲ್, ರಾಧಿಕಾ ಎಚ್ ಮುಂತಾದವರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















