ಬೆಂಗಳೂರು : ಕರ್ನಾಟಕ ವಿಧಾನ ಸಭೆಯ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ, ಅಧ್ಯಕ್ಷರು ಹಾಗೂ ಕೊಳ್ಳೇಗಾಲ ಶಾಸಕರಾದ ಎ.ಆರ್ ಕೃಷ್ಣಮೂರ್ತಿ ರವರಿಗೆ ಚಿಕ್ಕನಾಯಕನಹಳ್ಳಿಯ ತಹಶೀಲ್ದಾರರು, ಕಂದಾಯ ಇಲಾಖೆ ಸಿಬ್ಬಂದಿಗಳು, ಅರಣ್ಯ ಇಲಾಖೆ ಸಿಬ್ಬಂಧಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಹುಳಿಯಾರು ಹೋಬಳಿಯ, ಅಂಬಾರಪುರ ಹಾಗೂ ಮುತುಗದಹಳ್ಳಿ ಗ್ರಾಮದಲ್ಲಿ ಜಮೀನಿಗೆ ಅತಿಕ್ರಮಣ ಪ್ರವೇಶ ಮಾಡಿ, ಸಾವಿರಾರು ಮರಗಳನ್ನು ನಾಶ ಮಾಡಿ, ಬೆಳೆ ನಾಶ, ಕೃಷಿ ಸಾಮಗ್ರಿ ನಾಶ, ಗುಡಿಸಿಲು ಮನೆ ನಾಶಗಳನ್ನು ಮಾಡಿ ಹಾಗೂ ಜಮೀನಿಗೆ ಹೋಗದಂತೆ ಟ್ರಂಚ್ ( ಚರಂಡಿ ರೀತಿಯ ಹಳ್ಳ ) ಮಾಡಿ ಅನುಸೂಚಿತ ಜಾತಿಯ ಕುಟುಂಬದವರಿಗೆ ಕೃಷಿ ಚಟುವಟಿಕೆ ಮಾಡದಂತೆ ದೌರ್ಜನ್ಯ ಮಾಡಿರುವ ಕುರಿತಾಗಿ, ಅಂಬಾರಪುರದ ರೈತರುಗಳಾದ ಜಯಲಕ್ಷ್ಮಿ, ಕೃಷ್ಣಮೂರ್ತಿ ಹಾಗೂ ಪುಟ್ಟಸ್ವಾಮಿ ರವರುಗಳು ಹಾಗೂ ಮುತುಗದಹಳ್ಳಿ ರೈತರುಗಳಾದ ಗೀತಾ ಹಾಗೂ ಜಯಕುಮಾರ್ ರವರುಗಳು ದೂರನ್ನು ಶಾಸಕರ ಭವನ, ವಿಧಾನ ಸೌಧದಲ್ಲಿ ನೀಡಿರುತ್ತಾರೆ.

ಮೈಸೂರು ಮಹಾರಾಜರ ಸರ್ಕಾರ ಅರಣ್ಯ ಇಲಾಖೆಗೆ ಭೂಮಿಯನ್ನು ನೀಡಿ ಆದೇಶವಾಗಿದೆ ಎಂದು ರೈತರಿಗೆ ಮಂಜೂರು ಆಗಿರುವ ಭೂಮಿಯನ್ನು ಕಸಿದುಕೊಂಡು ಒಕ್ಕಲೆಬ್ಬಿಸುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಕಂಡು ಬಂದಿವೆ. ಇತ್ತೀಚೆಗಷ್ಟೇ ತುಮಕೂರು ಜಿಲ್ಲೆಯ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ, ಮುತ್ತುಗದಹಳ್ಳಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿ ಪೋಲೀಸರ ಭದ್ರತೆ ಪಡೆದು, 20 ವರ್ಷ ವಯಸ್ಸಿನ ಹಾಗೂ ಸರಿಸುಮಾರು 40 ಅಡಿ ಎತ್ತರವಿರುವ 5000 ಕ್ಕೂ ಹೆಚ್ಚು ಅಡಿಕೆ ಹಾಗೂ ತೆಂಗಿನ ಮರಗಳನ್ನು ಕಡಿದು ಹಾಕಿ ಹಾಗೂ ಅದರ ಜೊತೆಗೆ ಅಲ್ಲಿದ್ದ ರೈತರ ಪೂರ್ವಜರ ಸಮಾಧಿಯನ್ನು ನಾಶ ಮಾಡಿರುತ್ತಾರೆ ಹಾಗೂ ಅದಲ್ಲದೆ ಅಲ್ಲಿದ್ದ ಕೃಷಿ ಉಪಕರಣಗಳು, ಗುಡಿಸಲು ಮನೆಗಳು ಹಾಗೂ ಮಾರಮ್ಮನ ಗುಡಿಯನ್ನೂ ನಾಶಮಾಡಿರುತ್ತಾರೆ ಮತ್ತು ರೈತರನ್ನು ಒಕ್ಕಲೆಬ್ಬಿಸಿರುತ್ತಾರೆ.

ಇದೆ ರೀತಿಯಲ್ಲಿ ಇದೆ ಗ್ರಾಮದ ಪಕ್ಕದ ಗ್ರಾಮವಾದ ಅಂಬಾರಪುರದಲ್ಲೂ ಸರಿಸುಮಾರು 1150 ಕ್ಕೂ ಹೆಚ್ಚು ಮರಗಳನ್ನು ಕಡಿದುಹಾಕಿ ರೈತರನ್ನು ಒಕ್ಕಲೆಬ್ಬಿಸಿರುತ್ತಾರೆ.
ಈರೀತಿಯ ಅಮಾನವೀಯ ಘಟನೆಯಲ್ಲಿ ರೈತರು ಮಾಡಿದ ತಪ್ಪೇನು ಎಂಬ ಪ್ರಶ್ನೆಯೂ ಕೂಡ ಉದ್ಭವಿಸುತ್ತದೆ, ರೈತರಿಗೆ ಕಾನೂನು ಬದ್ದವಾಗಿ ಸುಮಾರು 45 ವರ್ಷಗಳ ಹಿಂದೆಯೇ ಭೂಮಿ ಮಂಜೂರು ಆಗಿರುತ್ತದೆ ಹಾಗೂ ಅದರ ಮೇಲೆ ರೈತರು ಸಾಲಕೂಡ ಪಡೆದಿರುತ್ತಾರೆ ಹಾಗೂ ಭೂಮಿಯನ್ನು ಅಭಿವೃದ್ಧಿ ಕೂಡ ಮಾಡಿರುತ್ತಾರೆ ಹೀಗೆಲ್ಲಾ ಇದ್ದಾಗ ರೈತರುಗಳು ಸೋತ್ತಿದ್ದೆಲ್ಲಿ ಹಾಗೂ ಹೀಗೆ ಆಗಲು ಕಾರಣ ಏನು ಎಂದು ಹುಡುಕಿನೋಡಿದರೆ, ಕಾರ್ಯಾಂಗದ ಅಧಿಕಾರಿಗಳ ಬಡಪಾಯಿಗಳ ಮೇಲೆ ತೋರಿಸಿದ ಕರ್ತವ್ಯ ನಿಷ್ಠೆ ಹಾಗೂ ಕಣ್ಣು ಮುಚ್ಚಿಕುಂತ ಜನಪ್ರತಿನಿಧಿಗಳು. ರಾಜ್ಯದಲ್ಲಿ ಎಷ್ಟೋ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಹಲವು ಪ್ರಭಾವಿಗಳು ರೆಸಾರ್ಟ್ ಗಳನ್ನು ನಿರ್ಮಾಣ ಮಾಡಿಕೊಂಡು ಹಣ ಮಾಡುತ್ತಿದ್ದಾರೆ ಹಾಗೆಯೇ ಭವ್ಯವಾದ ಮಂದಿರಗಳನ್ನು ಕಟ್ಟಿ ಒಳ್ಳೆಯ ವಾಣಿಜ್ಯ ಕೇಂದ್ರಗಳಂತೆ ನೆಡೆಯುತ್ತಿವೆ. ಇನ್ನೂ ರಾಜ ಕಾಲುವೆಗಳನ್ನು ಮತ್ತು ಇತರೆ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಮನೆ, ಅಪಾಟ್ಮೆಂಟ್, ಕಾಲೇಜುಗಳು ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಕಟ್ಟಿಕೊಂಡು ಪ್ರಭಾವಿಗಳು ಲಾಭಗಳಿಸುತ್ತಿದ್ದರೆ, ಇಂತವರ ಮೇಲೆ ಅಧಿಕಾರಿಗಳು ತಮ್ಮ ಕರ್ತವ್ಯ ನಿಷ್ಠೆಯನ್ನು ತೋರದೆ ಬಡಪಾಯಿಗಳ ಹಾಗೂ ರೈತರುಗಳ ಮೇಲೆ ಕರ್ತವ್ಯ ನಿಷ್ಠೆಯನ್ನು ತೋರಿ ರೈತರ ಬೆಳೆ ನಾಶ ಮಾಡಿ ಒಕ್ಕಲೆಬ್ಬಿಸುತ್ತಿರುವುದು ಸರ್ಕಾರದ ವೈಫಲ್ಯವೇ ಸರಿ.

ಮರಗಳನ್ನು ಕಡಿದು ಹಾಗೂ ಬೆಳೆ ನಾಶ ಮಾಡಿ ರೈತರನ್ನು ಒಕ್ಕಲೆಬ್ಬಿಸಲು ಅಧಿಕಾರಿಗಳು ಮಾಡಿದ ಪ್ರಕ್ರಿಯೆಗಳು ಏನೆಂದು ನೋಡುವುದಾದರೆ, ಮೈಸೂರು ಮಹಾರಾಜರ ಸರ್ಕಾರ ಅರಣ್ಯ ಇಲಾಖೆಗೆ ಭೂಮಿಯನ್ನು ನೀಡಿ ಆದೇಶವಾಗಿದೆ ಹಾಗೂ ಆ ಭೂಮಿ ರೈತರಿಗೆ ಮಂಜೂರು ಮಾಡಿರುವುದು ಸರಿಯಲ್ಲ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ತಹಶೀಲ್ದಾರರು ಅಪೀಲುದಾರರು ಆಗಿ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಾರೆ ಹಾಗೂ ಆ ಅಪೀಲು ಅನ್ನು ಉಪವಿಭಾಗಾಧಿಕಾರಿಗಳು ಭಾಗಶಃ ಪುರಸ್ಕರಿಸುತ್ತಾರೆ ಹಾಗೂ ಅರಣ್ಯ ಇಲಾಖೆಗೆ ಮೈಸೂರು ಮಹಾರಾಜರ ಸರ್ಕಾರ ನೀಡಲಾಗಿದ್ದ ಭೂಮಿಯಾಗಿದ್ದರೆ, ರೈತರ ಮಂಜೂರಾತಿ ಪತ್ರವನ್ನು ( ಗ್ರಾಂಟ್ ಸರ್ಟಿಫಿಕೇಟ್ ) ಅನ್ನು ರದ್ದು ಪಡಿಸಿ, ರೈತರ ಹೆಸರುಗಳನ್ನೂ ಪಹಣಿಯಿಂದ ಕೈಬಿಡಲು ತಹಶೀಲ್ದಾರರಿಗೆ ಆದೇಶ ಮಾಡುತ್ತಾರೆ ಹಾಗೂ ತಹಶೀಲ್ದಾರರು ಗ್ರಾಂಟ್ ಸರ್ಟಿಫಿಕೇಟ್ ರದ್ದು ಪಡಿಸಿ ಪಹಣಿಯಲ್ಲಿ ರೈತರ ಹೆಸರು ತೆಗೆದು ಅರಣ್ಯ ಎಂದು ಬದಲಾವಣೆ ಮಾಡುತ್ತಾರೆ, ಪಹಣಿಯಲ್ಲಿ ಅರಣ್ಯ ಎಂದು ಬಂದಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿ ಪೋಲೀಸರ ಭದ್ರತೆ ಪಡೆದು ರೈತರ ಬೆಳೆ ನಾಶ ಮಾಡಿ ಹಾಗೂ ಮರಗಳನ್ನು ಕಡಿದು ರೈತರನ್ನು ಒಕ್ಕಲೆಬ್ಬಿಸುತ್ತಾರೆ.



















