ಕನಕ ಕುರಿ ಕಾಯುತ್ತಿದ್ದ,
ಕೃಷ್ಣ ದನ ಮೇಯಿಸುತ್ತಿದ್ದ,
ಪರಿಚಯವಾಯಿತು ಹೆಚ್ಚೇನಿಲ್ಲ.!
ಕನಕ ರೊಟ್ಟಿ ಒಯ್ಯುತ್ತಿದ್ದ,
ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ,
ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ.!
ಕನಕನಿಗೆ ಹಾಡು ಕಟ್ಟುವ ಹುಚ್ಚು,
ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು,
ಗೆಳೆತನ ಕುದುರಿತು ಹೆಚ್ಚೇನಿಲ್ಲ.!
ಕನಕ ಬ್ಯಾ ಬ್ಯಾ ಎಂದೂ,
ಕೃಷ್ಣ ಅಂಬಾ ಎಂದೂ,
ಕಿರ್ ಕಿರ್ ಮುರ್ ಮುರ್ ಕೂಗು ಹಾಕಿ,
ಕೂಡಿ ಆಡಿ ನಲಿದಾಡಿದರು ಹೆಚ್ಚೇನಿಲ್ಲ.!
ಕೃಷ್ಣ ಮಹಾತುಂಟ, ತರಲೆ, ಜಗಳಗಂಟ.
ಕನಕ ಅವನ ಭಂಟ, ನೆಂಟ, ಸರ್ವಸ್ವ..
ಇಬ್ಬರೂ ಬದುಕಿ ಬಾಳಿದರು ಹೆಚ್ಚೇನಲ್ಲ.!
ಕುಲದ ನೆಲೆಯಿಲ್ಲ, ಕಾಲದ ಹಂಗಿಲ್ಲ,
ಕನಕ ಮಣ್ಣಾದ, ಕೃಷ್ಣ ಕಲ್ಲಾದ,
ಇದೊಂದು ಕಲ್ಲು ಮಣ್ಣಿನ ಕಥೆ ಹೆಚ್ಚೇನಿಲ್ಲ.!!
–ಸವಿತಾ ನಾಗಭೂಷಣ್




















