ಅದೊಂದು ಪುಟ್ಟ ಹಳ್ಳಿ.
ಸಂಜೆ ಹೊತ್ತಿನ ಸಮಯ.
ಅಲ್ಲಿನ ಅಶ್ವತ್ಥ ಮರದ ಕೆಳಗೆ ಹಳ್ಳಿಯ ಹಿರಿಯರು, ಯುವಕರು ಸೇರುತ್ತಿದ್ದಾರೆ.
ಆ ಊರಿನಲ್ಲಿ ಶಿಕ್ಷಕನಾಗಿ ನಿವೃತ್ತರಾಗಿದ್ದ ‘ವಿಶ್ವನಾಥ್’ ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.
ಯುವಕ ‘ಸಿದ್ಧಾರ್ಥ’ ತುಂಬಾ ಹತಾಶನಾಗಿ ಮರದ ಕೆಳಗೆ ಬಂದು ಕುಳಿತಿದ್ದಾನೆ.
ಅವನ ಕಣ್ಣುಗಳಲ್ಲಿ ನೀರಿದೆ.
ಇದನ್ನು ಗಮನಿಸಿದ ವಿಶ್ವನಾಥ್ ಅವರು ಹತ್ತಿರ ಬಂದು ಕೇಳಿದರು –
”ಏನಪ್ಪಾ ಸಿದ್ಧಾರ್ಥ, ಯಾಕೆ ಇಷ್ಟು ಬೇಸರದಲ್ಲಿದ್ದೀಯಾ?”
”ಏನು ಮಾಡಲಿ ಸಾರ್, ನಮ್ಮೂರಿನ ಜನರ ಪರಿಸ್ಥಿತಿ ನೋಡಿ ಸಾಕಾಗಿದೆ. ಪಕ್ಕದ ಮನೆಯ ರಂಗಣ್ಣ ಕೆಲಸ ಮಾಡಿ ತಂದಿದ್ದ ಹಣವನ್ನೆಲ್ಲಾ ಕುಡಿತಕ್ಕೆ ಸುರಿದು ಬಂದಿದ್ದಾನೆ. ಇತ್ತ ನೋಡಿದರೆ ಸೋಜಮ್ಮ ತನ್ನ ಮಗು ಹುಷಾರಿಲ್ಲ ಅಂದ್ರೆ ಆಸ್ಪತ್ರೆಗೆ ಹೋಗುವ ಬದಲು ಯಾವುದೋ ಮೌಢ್ಯಕ್ಕೆ ಬಿದ್ದು ದೆವ್ವ ಬಿಡಿಸುತ್ತೇನೆ ಎಂದು ಮಗುವನ್ನು ಕಷ್ಟಕ್ಕೆ ದೂಡುತ್ತಿದ್ದಾಳೆ. ನಾವೆಲ್ಲಾ ಎಂದು ಉದ್ಧಾರ ಆಗ್ತೀವೋ ಗೊತ್ತಿಲ್ಲ.”
”ಸಿದ್ಧಾರ್ಥ, ಈ ಕಲ್ಲಿಗೆ ಹೂವು ಏರಿಸಿದರೆ ಅದು ನಿನ್ನ ಕಷ್ಟ ಪರಿಹರಿಸುತ್ತಾ?”
“ಖಂಡಿತ ಇಲ್ಲ ಸಾರ್, ಅದು ಕೇವಲ ಕಲ್ಲು.”
”ಸರಿ, ಹಾಗಾದರೆ ಆ ರಂಗಣ್ಣ ಕುಡಿದು ಬಂದು ಮನೆಯಲ್ಲಿ ಬಿದ್ದಿದ್ದಾನಲ್ಲ, ಅವನಿಗೆ ದೇಶದ ಸಂವಿಧಾನದ ಬಗ್ಗೆ ಅಥವಾ ಅವನ ಹಕ್ಕುಗಳ ಬಗ್ಗೆ ಮಾತಾಡಿದರೆ ಅರ್ಥವಾಗುತ್ತಾ?”
”ಇಲ್ಲ ಸರ್, ಅವನು ಪ್ರಜ್ಞೆಯಲ್ಲೇ ಇರೋದಿಲ್ಲ.”
ಅಷ್ಟರಲ್ಲಿ ಅಲ್ಲೇ ಬರುತ್ತಿದ್ದ ರಾಮಣ್ಣ ಎಂಬುವವರು ಮಾತು ಸೇರಿಸಿದರು –
“ಅಲ್ಲಾ ಸಾಬ್, ದೇವರು ನಮಗೆ ಹಣೆಬರಹ ಬರೆದ ಮೇಲೆ ನಾವು ಬದಲಾಗೋಕೆ ಸಾಧ್ಯವಾ? ಕುಡಿತ ಅನ್ನೋದು ಮನುಷ್ಯನ ಹವ್ಯಾಸ, ಅದು ಬಿಡೋದು ಕಷ್ಟ ಬಿಡಿ.”
ವಿಶ್ವನಾಥ್ ಅವರು ಗಂಭೀರವಾಗಿ –
“ನೋಡಿ ರಾಮಣ್ಣ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದಾರೆ— ‘ದೇವರು ಎಂಬ ಮೌಢ್ಯ ಹಾಗೂ ಕುಡಿತ ಎಂಬ ದುಶ್ಚಟ ನಮ್ಮ ಜನರ ಪ್ರಗತಿಗೆ ದೊಡ್ಡ ಅಡ್ಡಿ’ ಎಂದು. ಇದು ಕೇವಲ ಮಾತಲ್ಲ, ಇದೊಂದು ಎಚ್ಚರಿಕೆ.”
ರಾಮಣ್ಣ-
“ಅದಕ್ಕೆ ಅಂಬೇಡ್ಕರ್ ಅವರು ಹಾಗೆ ಯಾಕೆ ಹೇಳಿದ್ರು ಸರ್?”
ವಿಶ್ವನಾಥ್ –
“ಯೋಚನೆ ಮಾಡಿ, ನಾವು ‘ದೇವರು ನಮ್ಮ ಹಣೆಬರಹ ಬರೆದಿದ್ದಾನೆ, ನಾವು ಹೀಗೆ ಇರಬೇಕು’ ಎಂದು ನಂಬಿ ಸುಮ್ಮನೆ ಕುಳಿತರೆ ಅನ್ಯಾಯದ ವಿರುದ್ಧ ಹೋರಾಡುವ ಕೆಚ್ಚು ಎಲ್ಲಿಂದ ಬರುತ್ತೆ? ಅದು ಮೌಢ್ಯ. ನಮಗೆ ಕಷ್ಟ ಬಂದಾಗ ದೇವರ ಮೇಲೆ ಹಾಕಿ ಕೈಕಟ್ಟಿ ಕುಳಿತರೆ ನಾವು ಗುಲಾಮರಾಗಿಯೇ ಉಳಿಯುತ್ತೇವೆ. ದೇವರು ನಮ್ಮನ್ನು ಉದ್ಧಾರ ಮಾಡುವುದಿಲ್ಲ, ನಮ್ಮ ಜ್ಞಾನ ನಮ್ಮನ್ನು ಉದ್ಧಾರ ಮಾಡುತ್ತದೆ.”
ಸಿದ್ಧಾರ್ಥ –
“ನಿಜ ಸಾರ್, ಮೌಢ್ಯ ನಮ್ಮ ಆಲೋಚನಾ ಶಕ್ತಿಯನ್ನು ಕೊಲ್ಲುತ್ತದೆ. ಆದರೆ ಈ ಕುಡಿತದ ಬಗ್ಗೆ?”
ವಿಶ್ವನಾಥ್-
“ಕುಡಿತ ಮನುಷ್ಯನ ಕೇವಲ ಆರೋಗ್ಯವನ್ನಲ್ಲ, ಅವನ ಪ್ರಜ್ಞೆಯನ್ನು ಕೊಲ್ಲುತ್ತದೆ. ಒಬ್ಬ ಮನುಷ್ಯನಿಗೆ ತನ್ನ ಮನೆಯ ಜವಾಬ್ದಾರಿ, ಮಕ್ಕಳ ಶಿಕ್ಷಣ ಮತ್ತು ಸಮಾಜದಲ್ಲಿ ತನಗಾಗುತ್ತಿರುವ ಅವಮಾನಗಳ ಅರಿವಾಗಬೇಕಾದರೆ ಅವನು ಮೊದಲು ಪ್ರಜ್ಞಾವಂತನಾಗಿರಬೇಕು. ಕುಡಿದ ಅಮಲಿನಲ್ಲಿರುವವನು ತಾನು ಅನುಭವಿಸುತ್ತಿರುವ ಶೋಷಣೆಯನ್ನು ಮರೆತುಬಿಡುತ್ತಾನೆ. ಅದಕ್ಕೇ ಬಾಬಾಸಾಹೇಬರು ಹೇಳಿದ್ದು – ಈ ಎರಡು ಅನಿಷ್ಟಗಳನ್ನು ತೊರೆದ ದಿನ ನಮ್ಮ ಪ್ರಗತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು.”
ಅಲ್ಲೇ ನಿಂತಿದ್ದ ಇತರ ಯುವಕರು ಇದನ್ನು ಕೇಳಿ ಮೌನವಾದರು.
ವಿಶ್ವನಾಥ್ ಮುಂದುವರೆಸಿದರು –
”ನೋಡಿ ಹುಡುಗರೇ, ನಮ್ಮ ಕೈಯಲ್ಲಿ ಹಣವಿಲ್ಲದಿರಬಹುದು, ಆದರೆ ನಮಗೊಂದು ‘ಮತ’ ಚಲಾಯಿಸುವ ಅಧಿಕಾರವಿದೆ. ಆದರೆ ನಾವೇನು ಮಾಡುತ್ತಿದ್ದೇವೆ? ಚುನಾವಣೆಯ ಸಮಯದಲ್ಲಿ ಒಂದು ಬಾಟಲಿ ಸಾರಾಯಿಗೆ ಅಥವಾ ದೇವರ ಹೆಸರಿನಲ್ಲಿ ಬರುವ ಆಮಿಷಗಳಿಗೆ ಬಲಿಯಾಗಿ ನಮ್ಮ ಭವಿಷ್ಯವನ್ನು ಮಾರಿಕೊಳ್ಳುತ್ತಿದ್ದೇವೆ. ಅಂಬೇಡ್ಕರ್ ಅವರು ಬಯಸಿದ್ದು ನಾವೆಲ್ಲರೂ ‘ಪ್ರಜ್ಞಾವಂತ’ರಾಗಬೇಕೆಂದು. ಅಂದರೆ ಏನು ಸರಿ, ಏನು ತಪ್ಪು ಎಂದು ತಿಳಿಯುವ ವಿವೇಕ ನಮ್ಮಲ್ಲಿ ಇರಬೇಕು.”
ಸಿದ್ಧಾರ್ಥ ಎದ್ದು ನಿಂತು –
“ಇವತ್ತೇ ನನಗೆ ಅರ್ಥವಾಯಿತು ಸಾರ್. ನಾವು ದೇವಸ್ಥಾನದ ಮುಂದೆ ಸಾಲು ನಿಲ್ಲುವ ಬದಲು ಲೈಬ್ರರಿಗಳ ಮುಂದೆ ನಿಲ್ಲಬೇಕು. ಕೈಯಲ್ಲಿ ಗ್ಲಾಸ್ ಹಿಡಿಯುವ ಬದಲು ಪುಸ್ತಕ ಹಿಡಿಯಬೇಕು. ಈ ಮೌಢ್ಯ ಮತ್ತು ವ್ಯಸನದಿಂದ ಹೊರಬಂದಾಗಲೇ ನಮಗೆ ನಿಜವಾದ ಸ್ವಾತಂತ್ರ್ಯ ಸಿಗೋದು”ಎಂದು ಹೇಳಿದನು.
ಈ ದಿನ ಹಳ್ಳಿಯ ಆ ಮರದ ಕೆಳಗೆ ಹೊಸದೊಂದು ವೈಚಾರಿಕ ಕ್ರಾಂತಿ ಶುರುವಾಗಿದೆ.
ಜನರು ತಮ್ಮ ದೌರ್ಬಲ್ಯಗಳನ್ನೇ ಶತ್ರುಗಳೆಂದು ಗುರುತಿಸಲು ಆರಂಭಿಸಿದ್ದಾರೆ.
ವಿಶ್ವನಾಥ್ ಮಾಸ್ತರರು ಹಾಕಿಕೊಟ್ಟ ವೈಚಾರಿಕ ಕಿಡಿ ಸಿದ್ಧಾರ್ಥನ ಮನಸ್ಸಿನಲ್ಲಿ ಬೆಂಕಿಯಂತೆ ಉರಿಯತೊಡಗಿದೆ.
ಆದರೆ ಬದಲಾವಣೆ ಅಷ್ಟು ಸುಲಭವಾಗಿರಲಿಲ್ಲ.
ಊರಿನ ಜಾತ್ರೆಯ ಸಮಯ ಹತ್ತಿರ ಬರುತ್ತಿದೆ.
ಜಾತ್ರೆಯ ನೆಪದಲ್ಲಿ ಊರಿನ ತುಂಬೆಲ್ಲಾ ಕುಡಿತದ ಅಬ್ಬರ ಮತ್ತು ಪ್ರಾಣಿ ಬಲಿಯ ಹೆಸರಿನಲ್ಲಿ ಮೌಢ್ಯದ ಆಚರಣೆಗಳು ಸಿದ್ಧವಾಗುತ್ತಿವೆ.
ಸಿದ್ಧಾರ್ಥ ತನ್ನ ಗೆಳೆಯರ ಪಡೆಯನ್ನು ಕಟ್ಟಿಕೊಂಡು ರಂಗಣ್ಣನ ಮನೆಗೆ ಬಂದಿದ್ದಾನೆ.
ರಂಗಣ್ಣ ಎಂದಿನಂತೆ ಅಮಲಿನಲ್ಲಿ ತೂಗುತ್ತಿದ್ದಾನೆ.
ಸಿದ್ಧಾರ್ಥ –
“ರಂಗಣ್ಣ, ಎದ್ದೇಳು. ಈ ಸಲ ಜಾತ್ರೆಗೆ ನೀನು ಕುಡಿಯಬಾರದು ಅಂತ ನಾವು ನಿರ್ಧಾರ ಮಾಡಿದ್ದೀವಿ.”
ರಂಗಣ್ಣ ನಗುತ್ತಾ –
“ಲೇ ಸಿದ್ಧಾರ್ಥ, ಇದು ನಮ್ಮ ಸಂಪ್ರದಾಯ ಕಣೋ. ಜಾತ್ರೆ ಅಂದ್ಮೇಲೆ ಮಜ ಇರಬೇಡವೇ? ದೇವರಿಗೆ ಪ್ರಾಣಿ ಬಲಿ ಕೊಟ್ಟು, ನಾವು ಸ್ವಲ್ಪ ತೀರ್ಥ (ಸಾರಾಯಿ) ತಗೊಂಡ್ರೆ ಏನಂತೆ? ಇದು ನಮ್ಮ ಹಣೆಬರಹ.”
ಸಿದ್ಧಾರ್ಥ –
“ರಂಗಣ್ಣ, ಇದೆ ಹಣೆಬರಹ ಅಂತ ಕೂತಿದ್ದಕ್ಕೆ ನಿನ್ನ ಮಗ ಇವತ್ತು ಶಾಲೆಯ ಫೀಸ್ ಕಟ್ಟಲಾಗದೆ ಮನೆಯಲ್ಲಿದ್ದಾನೆ. ಬಾಬಾಸಾಹೇಬರು ಹೇಳಿದ ‘ಪ್ರಜ್ಞಾವಂತ’ ಅನ್ನೋ ಪದದ ಅರ್ಥ ನಿನಗೆ ಗೊತ್ತಾ? ನಿನ್ನ ಕಷ್ಟಕ್ಕೆ ಕಾರಣ ದೇವರು ಬರೆದ ಹಣೆಬರಹ ಅಲ್ಲ, ನಿನ್ನ ಕೈಯಲ್ಲಿರೋ ಈ ಸಾರಾಯಿ ಬಾಟಲಿ ಮತ್ತು ‘ದೇವರು ನೋಡ್ಕೋತಾನೆ’ ಅನ್ನೋ ನಿನ್ನ ಮೌಢ್ಯ.”
ಸಿದ್ಧಾರ್ಥನ ಮಾತು ಕೇಳಿ ರಂಗಣ್ಣನ ಹೆಂಡತಿ ಸಾವಿತ್ರಿ ಒಳಗಿನಿಂದ ಬಂದಳು.
ಅವಳ ಕಣ್ಣಲ್ಲಿ ಆಸೆ ಇದೆ.
ಸಾವಿತ್ರಿ –
“ನೋಡ್ರಿ, ಈ ಹುಡುಗರು ಹೇಳ್ತಿರೋದು ಸರಿ ಇದೆ. ಪ್ರತಿ ವರ್ಷ ಜಾತ್ರೆ ಮುಗಿಯೋ ಹೊತ್ತಿಗೆ ನಾವು ಸಾಲದ ಸುಳಿಗೆ ಸಿಲುಕಿರ್ತೀವಿ. ಈ ಸಲ ಬಲಿ ಕೊಡೋ ಕುರಿ ಮಾರಿದ್ರೆ ಮಗನ ಓದಿಗೆ ಹಣ ಆಗುತ್ತೆ.”
ಅಷ್ಟರಲ್ಲಿ ಊರಿನ ಪೂಜಾರಿ ಮತ್ತು ಕೆಲವು ಹಿರಿಯರು ಅಲ್ಲಿಗೆ ಬಂದರು.
ಹಿರಿಯರು –
“ಏನಿದು ಸಿದ್ಧಾರ್ಥ? ಅನಾದಿ ಕಾಲದಿಂದ ಬಂದಿರೋ ಪದ್ಧತಿಯನ್ನ ನಿಲ್ಲಿಸೋಕೆ ನೀನ್ಯಾರು? ದೇವರಿಗೆ ಕೊಡೋ ಕಾಣಿಕೆ ನಿಲ್ಲಿಸಿದ್ರೆ ಊರಿಗೆ ಕೆಟ್ಟದಾಗುತ್ತೆ ಅನ್ನೋ ಭಯ ಇಲ್ವಾ ನಿನಗೆ?”
ಸಂದರ್ಭ ಉದ್ವಿಗ್ನಗೊಂಡಿತು.
ಆಗ ಅಲ್ಲಿಗೆ ನಿಧಾನವಾಗಿ ವಿಶ್ವನಾಥ್ ಮಾಸ್ತರರು ಬಂದರು.
ಅವರು ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದರು.
ವಿಶ್ವನಾಥ್ –
“ಭಯ ಪಡಬೇಡಿ ಹಿರಿಯರೇ. ನೈಜ ಭಕ್ತಿ ಇರೋದು ಜ್ಞಾನದಲ್ಲಿ, ಮೂಢನಂಬಿಕೆಯಲ್ಲಲ್ಲ. ಬಾಬಾಸಾಹೇಬರು ‘ದೇವರೆಂಬ ಮೌಢ್ಯ’ ಎಂದು ಹೇಳಿದ್ದು ಯಾಕೆ ಗೊತ್ತಾ? ನಾವು ನಮ್ಮ ಶಕ್ತಿಯನ್ನು ನಂಬುವ ಬದಲು ಯಾವುದೋ ಅದೃಶ್ಯ ಶಕ್ತಿಯ ಮೇಲೆ ಹಾಕಿ ಸೋಮಾರಿಗಳಾಗುತ್ತಿದ್ದೇವೆ. ನಮ್ಮ ಜನರ ಹಣ ಕುಡಿತಕ್ಕೆ ಮತ್ತು ಅನಗತ್ಯ ಆಚರಣೆಗಳಿಗೆ ವ್ಯಯವಾಗುತ್ತಿದೆ. ಈ ಹಣದಿಂದ ಒಬ್ಬ ವಿದ್ಯಾರ್ಥಿ ಡಾಕ್ಟರೋ, ಇಂಜಿನಿಯರೋ ಆದರೆ ಅದು ಈ ಸಮಾಜಕ್ಕೆ ದೊಡ್ಡ ಪ್ರಗತಿ ಅಲ್ವಾ?”
ಪೂಜಾರಿ ವಾದ ಮಾಡಿದರು –
“ಹಾಗಾದ್ರೆ ನಮ್ಮ ನಂಬಿಕೆಗೆ ಬೆಲೆಯೇ ಇಲ್ವಾ?”
ವಿಶ್ವನಾಥ್ –
“ನಂಬಿಕೆ ಅಂದ್ರೆ ಬದುಕೋದನ್ನ ಕಲಿಸಬೇಕು, ಬಲಿಯನ್ನಲ್ಲ. ಅಂಬೇಡ್ಕರ್ ಅವರು ನಮಗೆ ಕಲಿಸಿಕೊಟ್ಟಿದ್ದು ‘ಆತ್ಮಗೌರವ’. ರಂಗಣ್ಣ ಕುಡಿದು ಚರಂಡಿಯಲ್ಲಿ ಬಿದ್ದಾಗ ಅವನ ಆತ್ಮಗೌರವ ಎಲ್ಲಿರುತ್ತೆ? ಅವನು ದೇವರಿಗೆ ಹರಕೆ ಹೊತ್ತು ಮೌಢ್ಯಕ್ಕೆ ಶರಣಾದಾಗ ಅವನ ತರ್ಕ ಎಲ್ಲಿರುತ್ತೆ? ಈ ಎರಡು ಅನಿಷ್ಟಗಳು ಮನುಷ್ಯನನ್ನು ಪಶುವಿಗಿಂತ ಕೀಳಾಗಿಸುತ್ತವೆ.”
ಸಿದ್ಧಾರ್ಥ ಮುಂದೆ ಬಂದು ಒಂದು ನಿರ್ಧಾರ ಘೋಷಿಸಿದನು –
“ಈ ಬಾರಿ ನಮ್ಮ ಓಣಿಯಲ್ಲಿ ಯಾರೂ ಕುಡಿಯುವುದಿಲ್ಲ. ಬಲಿ ಕೊಡಲು ತಂದ ಪ್ರಾಣಿಗಳನ್ನು ಮಾರಿ, ಆ ಹಣವನ್ನು ಊರಿನ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಖರೀದಿಸಲು ಬಳಸುತ್ತೇವೆ. ನಮಗೆ ಬೇಕಿರೋದು ದೇವಸ್ಥಾನದ ಮುಂದಿನ ಪಂಕ್ತಿ ಅಲ್ಲ, ಜ್ಞಾನದ ಪಂಕ್ತಿ!”
ಮೊದಲು ವಿರೋಧಿಸಿದ ರಂಗಣ್ಣ, ತನ್ನ ಮಗನ ಮುಖ ನೋಡಿದನು.
ಮಗನ ಕಣ್ಣಲ್ಲಿ ಓದಬೇಕೆಂಬ ಹಂಬಲವಿದೆ.
ರಂಗಣ್ಣ ಮೆಲ್ಲನೆ ಸಾರಾಯಿ ಬಾಟಲಿಯನ್ನು ನೆಲಕ್ಕೆ ಬಡಿದು ಒಡೆದನು.
ರಂಗಣ್ಣ –
“ಸಾಕು ಸಾರ್… ಬಾಬಾಸಾಹೇಬರು ಹೇಳಿದ್ದು ಇವತ್ತು ನನಗೆ ಅರ್ಥವಾಯ್ತು. ನಾನು ಪ್ರಜ್ಞಾವಂತನಾಗದೆ ಹೋದ್ರೆ ನನ್ನ ಮಗನೂ ನನ್ನಂತೆಯೇ ಗುಲಾಮನಾಗುತ್ತಾನೆ “ಎಂದು ಹೇಳಿದನು.
ಆ ವರ್ಷ ಆ ಹಳ್ಳಿಯಲ್ಲಿ ಜಾತ್ರೆ ನಡೆಯಿತು;
ಆದರೆ ರಕ್ತಪಾತವಿಲ್ಲದೆ.
ಸಾರಾಯಿ ವಾಸನೆಯ ಬದಲು ಪುಸ್ತಕದ ಹೊಸ ಪರಿಮಳ ಊರಿನಲ್ಲಿ ಹರಡಿತು.
ಅಂಬೇಡ್ಕರ್ ಅವರ ಮಾತುಗಳು ಕೇವಲ ಗೋಡೆಯ ಮೇಲಿನ ಬರಹವಾಗದೆ, ಜನರ ಬದುಕಿನ ಬೆಳಕಾದವು.

- ಜಿ ಎಲ್ ನಾಗೇಶ್
ಧನ್ನೂರ ಆರ್. – ೫೮೫೩೩೦
ಬಸವಕಲ್ಯಾಣ ತಾಲೂಕು
ಬೀದರ ಜಿಲ್ಲೆ.
ಮೊಬೈಲ್ ನಂ.೯೯೪೫೬೮೬೨೩೪




















