ಬಳ್ಳಾರಿ / ಕಂಪ್ಲಿ : ಪಟ್ಟಣದ ಎಂ.ಡಿ.ಕ್ಯಾಂಪಿನ 22ನೇ ವಾರ್ಡಿನ ಸ್ಲಂ ಬಡಾವಣೆ ಮನೆಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗಿದೆ. ಇದರಿಂದ ಬಡಾವಣೆ ನಿವಾಸಿಗಳು ಆತಂಕದಲ್ಲಿ ಜೀವನ ಸಾಗಿಸಬೇಕಿದೆ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.
ಇಲ್ಲಿನ ಸ್ಲಂ ವಾರ್ಡಿನಲ್ಲಿರುವ ಮನೆಗಳಲ್ಲಿ ಕಳೆದ 20 ವರ್ಷಗಳಿಂದ ವಾಸಿಸುತ್ತಿದ್ದಾರೆ. 10 ಮನೆಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಅಪಘಾತಕ್ಕೆ ಆಹ್ವಾನಿಸುತ್ತಿವೆ.
ಈ ಮನೆಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗಿವೆ. ಇವುಗಳನ್ನು ಬದಲಿಸುವಂತೆ ದೂರು ನೀಡಿದ್ದರೂ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ.
ಇಲ್ಲಿ ಮನೆಗಳ ಮೇಲೆ ಹೋದರೆ ಕೈಗೆಟುಕುವಂತೆ ವಿದ್ಯುತ್ ತಂತಿಗಳಿವೆ. ಮಳೆ ಬಂದರೆ ಎಲ್ಲಿ ಮನೆ ಗೋಡೆಗಳಿಗೆ ವಿದ್ಯುತ್ ಪ್ರವಹಿಸಿ ಅನಾಹುತ ಸಂಭವಿಸುತ್ತದೆಯೊ ಎಂಬ ಭಯ ಇಲ್ಲಿನ ಜನರಲ್ಲಿದೆ. ಮನೆಗಳ ಮೇಲೆ ಹೋದರೆ ಸಾಕು ಅನಾಹುತ ಕಟ್ಟಿಟ್ಟ ಬುತ್ತಿ ಎಂಬಂತಿದೆ. ಇಲ್ಲಿನ ಜನರು ಕಡುಬಡವರಾಗಿದ್ದು, ಮನೆಯವರು ದಿನನಿತ್ಯದ ದುಡಿಮೆಗಾಗಿ ತೆರಳುವದುಂಟು. ಆದ್ದರಿಂದ ಮನೆಯವರು ಕೆಲಸಕ್ಕೆ ಹೋದಾಗ ಮಕ್ಕಳು ಮನೆ ಮೇಲೆ ಹೋದರೆ ಸಮಸ್ಯೆಯಾಗುತ್ತದೆ. ಇಲ್ಲಿನ ವಿದ್ಯುತ್ ತಂತಿಗಳು ಅಪಾಯಕ್ಕೆ ಆಹ್ವಾನಿಸುವಂತಿದೆ. ಇಲ್ಲಿ ಅಪಾಯದಲ್ಲಿ ನಿವಾಸಿಗಳ ಗೋಳು ಕೇಳುವವರು ಇಲ್ಲದಂತಾಗಿದೆ. ಮತ್ತು ಇಲ್ಲಿ ನಿವಾಸಿ ಕಾರೇಕಲ್ ಅಂಜಿನಪ್ಪ ಅವರ ಮನೆ ಮೇಲೆ
ಬಾಗಿರುವ ವಿದ್ಯುತ್ ತಂತಿಗಳಿಗೆ ಕಟ್ಟಿಗೆಗಳನ್ನು ಕಟ್ಟಿ ಪೋಟಿ ನೀಡಿದ್ದಾರೆ. ಆದರೆ, ಯಾವಾಗ ಅಪಾಯವಾಗುತ್ತದೋ ಎಂಬ ಆತಂಕ ಮನೆ ಮಾಡಿದೆ. ಇಲ್ಲಿನ ಕಂಬದೊಂದಿಗೆ ತಂತಿಗಳನ್ನು ಸ್ಥಳಾಂತರಿಸಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಏನು ಪ್ರಯೋಜನೆ ಇಲ್ಲದಂತಾಗಿದೆ. ಅಧಿಕಾರಿಗಳು ತಂತಿ ಸ್ಥಳಾಂತರಿಸದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸುವ ಜೊತೆಗೆ ಕೂಡಲೇ ಕಂಬದೊಂದಿಗೆ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸಬೇಕು ಎಂದು ಬಡಾವಣೆ ನಿವಾಸಿಗಳಾದ ಹಮಾಲಿ ಸಂಘದ ಗೌರವಾಧ್ಯಕ್ಷ ಬಾಲಪ್ಪ, ಜಂಡೆಕಟ್ಟೆ ಅಂಜಿನಪ್ಪ, ಕೆ.ಹೊನ್ನೂರಸ್ವಾಮಿ ಒತ್ತಾಯಿಸಿದ್ದಾರೆ.
ಮನವಿ ಪತ್ರ ಸಲ್ಲಿಕೆ :
ಸ್ಥಳೀಯ ಎಂ.ಡಿ.ಕ್ಯಾಂಪಿನ ಮನೆಗಳ ಮೇಲೆ ಹಾದು ಹೋಗಿರುವ ಅಪಾಯದ ವಿದ್ಯುತ್ ತಂತಿಗಳನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ, ನಿವಾಸಿಗಳು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಮನವಿ ಪತ್ರ ಮಂಗಳವಾರ ಸಲ್ಲಿಸಿದರು.
ನಂತರ ಮುಖಂಡ ಕರಡಿ ವಲಿಸಾಬ್ ಮಾತಬಾಡಿ, ಇಲ್ಲಿನ ನಿವಾಸಿಗಳು ವಿದ್ಯುತ್ ಅಪಾಯದ ನಡುವೆ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ತಂತಿಗಳು ಮನೆ ಮೇಲೆ ಜೋತು ಬಿದ್ದಿವೆ. ಜೋರಾಗಿ ಮಳೆ ಬೀಸಿದಾಗ ತಂತಿಗಳು ಒಂದಾನೊಂದು ಸ್ಪರ್ಶಿಸಿ, ಬೆಂಕಿ ಬೀಳುತ್ತದೆ. ಇಲ್ಲಿನ ನಿವಾಸಿಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಕೆಲ ಸಲ ಮಕ್ಕಳನ್ನು ನಿವಾಸಿಗಳು ಅಪಾಯದಿಂದ ಪಾರು ಮಾಡಿದ್ದಾರೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ, ಪ್ರಯೋಜನೆಯಾಗುತ್ತಿಲ್ಲ. ಸ್ಥಳಕ್ಕೆ ಜೆಸ್ಕಾಂ ಲೈನ್ ಮ್ಯಾನ್ ಮತ್ತು ಜೆಇ ಬಂದು ಪರಿಶೀಲಿಸಿದರೂ ಸಮಸ್ಯೆಗೆ ಮುಕ್ತಿ ಇಲ್ಲದಂತಾಗಿದೆ. ಆದ್ದರಿಂದ ಮಾನ್ಯ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು. ಈಗಾಲಾದರೂ ಸಮಸ್ಯೆಗೆ ಬಗೆಹರಿಸುತ್ತದೆ ಎಂಬ ವಿಶ್ವಾಸವಿದೆ. ಆದರೆ, ಇದೇ ತರ ಬೇಜವಾಬ್ದಾರಿ ತೋರಿದಲ್ಲಿ ಮುಂದಿನ ದಿನದಲ್ಲಿ ಜೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಲಾಗುವುದು.
ಈ ಸಂದರ್ಭದಲ್ಲಿ ಹಮಾಲಿ ಸಂಘದ ಗೌರವಾಧ್ಯಕ್ಷ ಬಾಲಪ್ಪ, ಜಂಡೆಕಟ್ಟೆ ಅಂಜಿನಪ್ಪ, ಕೆ.ಹೊನ್ನೂರಸ್ವಾಮಿ, ಸಿ.ಬಸವರಾಜ ಸೇರಿದಂತೆ ನಿವಾಸಿಗಳಿದ್ದರು.
ಸ್ಥಳ ಪರಿಶೀಲನೆ : ಇಲ್ಲಿನ ಎಂ.ಡಿ.ಕ್ಯಾಂಪಿನ ಸ್ಲಂ ವಾರ್ಡಿನ ಮನೆಗಳ ಮೇಲೆ ಜೋತು ಬಿದ್ದ ಸ್ಥಳಕ್ಕೆ ತಹಶೀಲ್ದಾರ್ ಜೂಗಲ್ ಮಂಜುನಾಯಕ ಭೇಟಿ ನೀಡಿ, ಪರಿಶೀಲಿಸಿ, ಸೂಕ್ತ ಕ್ರಮಕ್ಕೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















