ಸಬ್ ಸ್ಟೇಷನ್ ಬೇರೆ ಕಡೆ ಸ್ಥಳಾಂತರ ಮಾಡದಂತೆ ಹತ್ತಾರು ಹಳ್ಳಿಗಳ ರೈತರಿಂದ ಒತ್ತಾಯ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮಕ್ಕೆ 110/11 ಕೆವಿ ಸಬ್ ಸ್ಟೇಷನ್ ಮಂಜೂರಾಗಿದ್ದು, ಮಂಜೂರಾದ ಸ್ಥಳದಲ್ಲಿಯೇ ಸಬ್ ಸ್ಟೇಷನ್ ಕಾಮಗಾರಿ ಪ್ರಾರಂಭ ಮಾಡುವಂತೆ ಒತ್ತಾಯಿಸಿ ಕನ್ನೆಳ್ಳಿ, ಕೂಡಲಗಿ, ಬೈಚಬಾಳ, ಕಚಕನೂರು, ಕೆ.ತಳ್ಳಳ್ಳಿ, ಚಿಕ್ಕನಹಳ್ಳಿ, ಹಾಗೂ ಯಡಹಳ್ಳಿ ಗ್ರಾಮದ ನೂರಕ್ಕೂ ಹೆಚ್ಚು ರೈತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದ ಸೀಮಾಂತರದಲ್ಲಿ ಬರುವ ಸರ್ವೆ ನಂ. 118 ವಿಸ್ತೀರ್ಣ 2 ಎಕರೆ 20 ಗುಂಟೆ ಜಮೀನು ಕಾರ್ಯನಿರ್ವಾಹಕ ಅಭಿಯಂತರರು (ವಿ) ಯೋಜನೆಗಳ ವಿಭಾಗ ಕ.ನಿ.ಪ್ರ.ನಿ.ನಿ ಯಾದಗಿರಿಯವರ ಹೆಸರಿನಲ್ಲಿ ಮಂಜೂರಾಗಿರುತ್ತದೆ. ಮತ್ತು ಸದರಿ ಜಮೀನಿನಲ್ಲಿ Proposed Sub-Station 110/11KV Kannalli ಎಂದು 2018 ರಲ್ಲಿ ಮಂಜೂರಾಗಿರುತ್ತದೆ. ಸದರಿ ಸ್ಟೇಷನ್ ಕಾಮಗಾರಿ ಟೆಂಡರ್ ಕರೆದು ಉದ್ಘಾಟನೆಯಾಗಿರುವುದಿಲ್ಲ.
ಆದರೆ ಇದರ ಜೊತೆಯಲ್ಲಿ ಮಂಜೂರಾದ ಸಬ್ ಸ್ಟೇಷನ್ಗಳಾದ ಕೆಂಭಾವಿ, ಹುಣಸಗಿ, ಮುದನೂರು ಹಾಗೂ ಇನ್ನಿತರ ಕಡೆಗಳಲ್ಲಿ ಸ್ಟೇಷನ್ ಟೆಂಡರ್ ಆಗಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಿ ಕಚೇರಿಗಳು ಚಾಲ್ತಿಯಲ್ಲಿರುತ್ತವೆ.
ಆದರೆ ಕೇವಲ ನಮ್ಮ ಕನ್ನೆಳ್ಳಿ ಗ್ರಾಮದಲ್ಲಿ ಮಾತ್ರ ಇನ್ನೂ ಕಾಮಗಾರಿ ಟೆಂಡರ್ ಆಗದೆ ಹಾಗೆ ನೆನೆಗುದಿಗೆ ಬಿದ್ದಿದ್ದು, ಈಗ ಸಬ್ ಸ್ಟೇಷನ್ ಬೇರೆ ಕಡೆ ಸ್ಥಳಾಂತರ ಮಾಡುತ್ತಿರುವ ವಿಷಯ ನಮ್ಮ ಗಮನಕ್ಕೆ ಬಂದಿರುತ್ತದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸದರಿ ಸಬ್ ಸ್ಟೇಷನ್ ಸ್ಥಳಾಂತರ ಮಾಡದೆ ಇದ್ದ ಸ್ಥಳದಲ್ಲಿಯೇ ಟೆಂಡರ್ ಕರೆದು ತೀವ್ರಗತಿಯಲ್ಲಿ ಕಾಮಗಾರಿ ಪ್ರಾರಂಭ ಮಾಡುವ ಮೂಲಕ ಈ ಭಾಗದ ಹತ್ತಾರು ಹಳ್ಳಿಗಳ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಒಂದು ವೇಳೆ ತಾವೇನಾದರೂ ಕ್ರಮ ಕೈಗೊಳ್ಳದೆ ಹೋದಲ್ಲಿ ತಮ್ಮ ಕಚೇರಿಯಲ್ಲಿ ನಮಗೆ ನ್ಯಾಯ ಸಿಗುವರೆಗೂ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕನ್ನಳ್ಳಿ, ಕೂಡಲಗಿ, ಬೈಚಬಾಳ, ಕಚಕನೂರು, ಕೆ.ತಳ್ಳಳ್ಳಿ, ಚಿಕ್ಕನಹಳ್ಳಿ, ಯಡಹಳ್ಳಿ ಸೇರಿದಂತೆ ಇತರೆ ಗ್ರಾಮದ ಸಾರ್ವಜನಿಕರು ಇದ್ದರು.
- ಕರುನಾಡ ಕಂದ ಸುದ್ದಿ




















