ಬಳ್ಳಾರಿ / ಕಂಪ್ಲಿ : ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮತ್ತು ಶಿಕ್ಷಣ ಇಲಾಖೆಯ ಸಂಯೋಗದಲ್ಲಿ ಬಳ್ಳಾರಿ ನಗರದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರದಲ್ಲಿ ಅನುದಾನರಹಿತ ಶಾಲೆಗಳ ಪ್ರಾಥಮಿಕ ವಿಭಾಗದಲ್ಲಿ ಕಂಪ್ಲಿಯ ಪ್ರತಿಷ್ಠಿತ ವಿದ್ಯಾಸಾಗರ ಇಂಟರ್ನ್ಯಾಷನಲ್ ಶಾಲೆಯ ಮುಖ್ಯಗುರು ಎಂ.ಎ.ಶರಣಬಸವರಾಜ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಕಂಪ್ಲಿ ಕ್ವೀನ್ ಮೇರಿ ಶಾಲೆಯ ದೈಹಿಕ ಶಿಕ್ಷಕ ಕೆ.ಸಂತೋಷಕುಮಾರ್ ಇವರಿಗೆ 2025-26ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಉತ್ತಮ ದೈಹಿಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಂತರ ಪ್ರಶಸ್ತಿ ಪುರಸ್ಕೃತ ಎಂ.ಎ.ಬಸವರಾಜ, ಕೆ.ಸಂತೋಷ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ, ಈ ಪ್ರಶಸ್ತಿ ನೀಡಿದ್ದು, ಇನ್ನಷ್ಟು ಸೇವೆಗೆ ಉತ್ಸಾಹ ಹೆಚ್ಚಿಸಿದೆ. ಶಿಕ್ಷಣ ಎಂಬುವುದು ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವರು ಘರ್ಜಿಸಲೇಬೇಕು ಎನ್ನುವ ಹಾಗೇ ಶಿಕ್ಷಣ ಪಡೆದ ಪ್ರತಿಯೊಂದು ಘರ್ಜಿಸುವ ಜೊತೆಗೆ ಜೀವನ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ.
ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕುರುಗೋಡು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಪದ್ಮ ರೆಡ್ಡಿ ಮತ್ತು ಜಿಲ್ಲಾ, ತಾಲೂಕು ಅಧ್ಯಕ್ಷರು ಹಾಗೂ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















