ಜೆಸ್ಕಾಂ ಎಇಇ ಕಚೇರಿ ಕಟ್ಟಡ ನಿರ್ಮಾಣಕ್ಕೆ ಗ್ರಹಣ : ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಾಮಗಾರಿಗೆ ಸ್ಥಗಿತ ಎಂಬ ಬರಹದ ಅಡಿಯಲ್ಲಿ ಪ್ರಕಟಗೊಂಡಿದ ಸುದ್ದಿಗೆ ಎಚ್ಚೆತ್ತ ಅರಣ್ಯ ಇಲಾಖೆ ಕಟ್ಟಡಕ್ಕೆ ಗ್ರೀನ್ ಸಿಗ್ನಲ್ ನೀಡಿದೆ
ಬಳ್ಳಾರಿ / ಕಂಪ್ಲಿ: ಪಟ್ಟಣದ ಜೆಸ್ಕಾಂ ಉಪವಿಭಾಗ ಎಇಇ ನೂತನ ಕಚೇರಿ ಅರಂಭಕ್ಕೆ ಅರಣ್ಯ ಇಲಾಖೆಯ ನಿಧಾನಗತಿಯಿಂದಾಗಿ ಕಟ್ಟಡ ನಿರ್ಮಾಣಕ್ಕೆ ಅಡಚಣೆಯಾಗಿತ್ತು. ಆದರೆ, ಇದೀಗ ಅರಣ್ಯ ಇಲಾಖೆ ಕಚೇರಿ ಕಟ್ಟಡ ನಿರ್ಮಾಣದ ಸ್ಥಳದಲ್ಲಿದ್ದ 10ಕ್ಕೂ ಅಧಿಕ ಗಿಡ ಮರಗಳನ್ನು ತೆರವುಗೊಳಿಸಲು ಅನುಮತಿ ನೀಡಿದ್ದು, ಹಾಗೂ ಅಲ್ಲಿನ ಗಿಡಮರಗಳನ್ನು ತೆರವುಗೊಳಿಸಿದ್ದರಿಂದ ಕಚೇರಿ ಕಟ್ಟಡ ನಿರ್ಮಾಣಕ್ಕಿದ್ದ ಗ್ರಹಣ ಬಿಟ್ಟಿದ್ದು, ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ ಇಂದಿನಿಂದ ಆರಂಭಗೊಂಡಿದೆ.
ದೇವರು ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವಂತೆ ಕಂಪ್ಲಿ ಕ್ಷೇತ್ರದ ಶಾಸಕರು ತಾಲ್ಲೂಕು ಕೇಂದ್ರದಲ್ಲಿ ಜೆಸ್ಕಾಂ ಇಲಾಖೆಯ ತಾಲ್ಲೂಕು ಮಟ್ಟದ ಕಚೇರಿ ಆರಂಭಕ್ಕೆ ಅನುದಾನ ಮಂಜೂರು ಮಾಡಿಸಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ತಿಂಗಳುಗಳೇ ಅಗಿದ್ದರೂ ಸಹಿತ ಸ್ಥಳದಲ್ಲಿದ್ದ ಗಿಡಮರಗಳನ್ನು ತೆರವುಗೊಳಿಸುವ ವಿಚಾರ ನೆನೆಗುದಿಗೆ ಬಿದ್ದಿತ್ತು. ಗಿಡಮರಗಳನ್ನು ತೆರವುಗೊಳಿಸಲು ಒಪ್ಪಿಗೆ ಸೂಚಿಸಲು ಅರಣ್ಯ ಇಲಾಖೆ ಮೀನಾಮೇಷ ಮಾಡಿದ್ದರಿಂದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಗ್ರಹಣ ಬಡಿದಿತ್ತು. ಇದರಿಂದಾಗಿ ಗುತ್ತಿಗೆದಾರರು ಆತಂಕ ಪಡುವಂತಾಗಿತ್ತು.
2024 ಆ.9ರಂದು ಸ್ಥಳೀಯ ಜೆಸ್ಕಾಂ ಸಹಾಯಕ ಇಂಜಿನಿಯರ್ (ವಿ) ಕಾರ್ಯಪಾಲನಾ ಶಾಖೆಯನ್ನು ಉಪವಿಭಾಗ (ಎಇಇ) ಕಚೇರಿಯನ್ನಾಗಿ ಉನ್ನತೀಕರಿಸಲಾಗಿತ್ತು. ಆದರೆ, ಉನ್ನತೀಕರಣಗೊಂಢು ಎರಡು ವರ್ಷಗಳಾದರೂ ಎಇಇ ಕಚೇರಿಗೆ ಪ್ರತ್ಯೇಕ ಕಟ್ಟಡ ಇಲ್ಲದ ಕಾರಣ ಸಹಾಯಕ ಇಂಜಿನಿಯರ್ ಕಾರ್ಯಪಾಲನಾ ಕಚೇರಿ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿತ್ತು. ಕಂಪ್ಲಿ ಜೆಸ್ಕಾಂ ಇಲಾಖೆಗೆ ಪ್ರತ್ಯೇಕ ಎಇಇ ಕಚೇರಿಯ ಅಗತ್ಯತೆಯನ್ನು ಅರಿತ ಶಾಸಕರಾದ ಜೆ.ಎನ್.ಗಣೇಶ ಅವರು 2025-26ನೇ ಸಾಲಿನ ಜೆಸ್ಕಾಂ ಅನುದಾನದ ಯೋಜನೆಯಡಿಯಲ್ಲಿ 1.50.ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಕ್ಕೆ 2026 ಏ.18ರಂದು ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಆದರೆ, ಅರಣ್ಯ ಇಲಾಖೆಯ ನಿಧಾನಗತಿಯಿಂದಾಗಿ ಕಚೇರಿ ನಿರ್ಮಾಣ ನೆನೆಗುದಿಗೆ ಬಿದ್ದಿತ್ತು. ಇತ್ತೀಚೆಗೆ ಪತ್ರಿಕೆಯಲ್ಲಿ ಎಇಇ ಕಚೇರಿ ಕಟ್ಟಡ ನಿರ್ಮಾಣಕ್ಕೆ ಗ್ರಹಣ ಎನ್ನುವ ವಿಸ್ತೃತ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪತ್ರಿಕೆಯ ವರದಿ ಫಲಶೃತಿಯಿಂದಾಗಿ ಈಗ ಕಚೇರಿ ನಿರ್ಮಾಣಕ್ಕೆ ಜೆಸ್ಕಾಂ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮಾರ್ಕಿಂಗ್ ಮಾಡುವ ಮೂಲಕ ಚಾಲನೆ ನೀಡಿದ್ದು, ಶೀಘ್ರದಲ್ಲಿ ಕಚೇರಿ ಕಟ್ಟಡ ನಿರ್ಮಾಣ ಮಾಡುವ ಭರವಸೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಜೆಸ್ಕಾಂ ಇಲಾಖೆಯ ಇಇ ಖಾಜ ಮೋಹಿದ್ದೀನ್, ಸಂತೋಷ್, ಕೆ.ಶ್ರೀನಿವಾಸಪ್ರಸಾದ್, ಗುತ್ತಿಗೆದಾರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















