ಗದಗ -ಹಿರಿಯ ಸಾಹಿತಿ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ, ನಿರಂತರ ಪ್ರಕಾಶನದ ಸಂಚಾಲಕ ಎ. ಎಸ್. ಮಕಾನದಾರ ಅವರು 2024ನೇ ಸಾಲಿನ ರಾಜ್ಯ ಮಟ್ಟದ ಕನಕ -ಷರೀಫ್ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆಂದು ಆಯ್ಕೆ ಸಮಿತಿಯ ಅಧ್ಯಕ್ಷ, ಹಿರಿಯ ಬಂಡಾಯ ಸಾಹಿತಿ ಡಾ. ಸತೀಶ್ ಕುಲಕರ್ಣಿ ಕಾರ್ಯಕ್ರಮದ ಸಂಚಾಲಕ ಪ್ರೊ. ರಂಜಾನ್ ಹೆಬಸೂರ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ದೊಡ್ಡಾಟ ಕಲೆಗೆ ಹೊಸ ಸ್ಪರ್ಶ ನೀಡಿದ ಹಿರಿಯ ರಂಗಕರ್ಮಿ ಉತ್ಸವ ರಾಕ್ ಗಾರ್ಡನ್ ನ ಸಂಸ್ಥಾಪಕರಾದ ಕಲಾ ಗುರು ಡಾ. ಟಿ.ಬಿ.ಸೊಲಬಕ್ಕನವರ ಅವರ 79ನೇ ಹುಟ್ಟುಹಬ್ಬದ ಸ್ಮರಣಾರ್ಥ ಶಿಗ್ಗಾವಿ ತಾಲೂಕಿನ ಉತ್ಸವ ರಾಕ್ ಗಾರ್ಡನ್ ನಲ್ಲಿ ಧಾರವಾಡ ಜಿಲ್ಲೆಯ ಹೆಬಸೂರ್ ನ ಉತ್ತರ ಸಾಹಿತ್ಯ ವೇದಿಕೆ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ, ಗಜಲ್ ಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು.
ರಾಜ್ಯ ಮಟ್ಟದ ಕನಕ -ಷರೀಫ್ ಕಾವ್ಯ ಪ್ರಶಸ್ತಿ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯ, ಹಿರಿಯ ಕವಿ ಡಾ. ಚನ್ನಪ್ಪ ಅಂಗಡಿ 2022ನೇ ಸಾಲಿಗೆ, ಸಿಂಧನೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಹಿರಿಯ ವಿಮರ್ಶಕ, ಡಾ. ಜಾಜಿ ದೇವೇಂದ್ರಪ್ಪ ಅವರು 2023ನೇ ಸಾಲಿಗೆ, ಕರ್ನಾಟಕ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪುರಸ್ಕಾರ ಪಡೆದ ನ್ಯಾಯಾಂಗ ಇಲಾಖೆಯ ನಿವೃತ್ತ ಉದ್ಯೋಗಿ ಹಿರಿಯ ಸಾಹಿತಿ ಎ ಎಸ್. ಮಕಾನದಾರ ಅವರು 2024ನೇ ಸಾಲಿಗೆ ಮತ್ತು ಹಿರಿಯ ಅನುವಾದಕಿ ಪತ್ರ ಕರ್ತೆ ಮಂಜುಳಾ ಕಿರುಗಾವಲು ಇವರು 2025 ನೇ ಸಾಲಿನ ಪುರಸ್ಕಾರ ಕ್ಕೆ ಭಾಜನರಾಗಿದ್ದಾಗಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ಸತೀಶ್ ಕುಲಕರ್ಣಿ, ಸದಸ್ಯರಾದ ಅಬ್ದುಲ್ ಹೈ ತೋರಣಗಲ್ಲು, ಶ್ರೀಶೈಲ ಮಾದಣ್ಣವರ, ರಂಜಾನ್ ಹೆಬಸೂರ, ದೀಪಾ ಗೋನಾಳ ಡಾ. ವೇದಾ ರಾಣಿ ದಾಸನೂರ ಮುಂತಾದವರು ಆಯ್ಕೆ ಸಮಿತಿಯಲ್ಲಿದ್ದರು.
ಈ ಪೂರ್ವ ಕನಕ -ಷರೀಫ್ ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ವಿಜಯ ಕಾಂತ್ ಪಾಟೀಲ್, ಗಜಲ್ ಕವಿ ಕೊಪ್ಪಳ ಜಿಲ್ಲೆಯ ಅಲ್ಲಾ ಗಿರಿರಾಜ್, ದಾವಣಗೆರೆ ಜಿಲ್ಲೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ, ಕವಿ ಬಿ. ಶ್ರೀನಿವಾಸ್, ಆಕಾಶವಾಣಿ ಧಾರವಾಡ ಕೇಂದ್ರದ ನಿರ್ದೇಶಕ, ಕತೆಗಾರ ಬೆಳಗಾವಿ ಜಿಲ್ಲೆಯ ಡಾ. ಬಸು ಬೇವಿನ ಗಿಡದ ಅವರು ಭಾಜನರಾಗಿದ್ದನ್ನಿಲ್ಲಿ ಸ್ಮರಿಸಬಹುದು.
- ಕರುನಾಡ ಕಂದ ಸುದ್ದಿ




















