ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಗುಣಸಾಗರ ಗ್ರಾಮಕ್ಕೆ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ತನ್ನ ಸ್ವಂತ ಹಣದಿಂದ ಶಾಲೆಗಾಗಿ ಭೂಮಿಯನ್ನು ಕೊಡಿಸಿ, ಹಾಗೆಯೇ ಸರ್ಕಾರದಿಂದ ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಅನುದಾನವನ್ನು ತಂದು ಭೂಮಿ ಪೂಜೆಯನ್ನು ನೆರವೇರಿಸಲು ಬಂದ ಹಿನ್ನೆಲೆಯಲ್ಲಿ, ಸ್ಥಳೀಯ ಕಾಂಗ್ರೆಸ್ ಯುವ ಮುಖಂಡರಾದ ಕೊಟ್ರೇಶ ಅವರ ನೇತೃತ್ವದಲ್ಲಿ, ಊರಿನ ಹಿರಿಯರು, ಮುಖಂಡರು ಮತ್ತು ಯುವಕರು ಸೇರಿ ಭರ್ಜರಿಯಾಗಿ ಸಂಭ್ರಮ ಹಾಗೂ ಅಭಿಮಾನದಿಂದ ಬೈಕ್ ರ್ಯಾಲಿಯಿಂದ ಅಭೂತಪೂರ್ವವಾಗಿ ಶಾಸಕರಿಗೆ ಸ್ವಾಗತ ಕೋರಿ ಕರೆ ತಂದರು.
ಆ ನಿಟ್ಟಿನಲ್ಲಿ ದಿನಾಂಕ;31-12-2024 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೆ.ಕೆ. ಆರ್.ಡಿ. ಬಿ. ಮೈಕ್ರೋ ಯೋಜನೆ ಅಡಿ 2 ನೂತನ ಶಾಲಾ ಕೊಠಡಿ, ಅಡುಗೆ ಕೋಣೆ, ಶೌಚಾಲಯ ಹಾಗೂ ನೀರು ಸಂಗ್ರಹಣ ಸೌಲಭ್ಯ ನಿರ್ಮಾಣ ಕಾಮಗಾರಿ ಭೂಮಿಪೂಜೆಯನ್ನು ಗುಣಸಾಗರ ಗ್ರಾಮದಲ್ಲಿ ಗಣ್ಯಮಾನ್ಯರು ಮತ್ತು ಹಿರಿಯರೊಂದಿಗೆ ಶಾಸಕರು ಅದ್ಧೂರಿಯಾಗಿ ನೆರವೇರಿಸಿದರು.
ಶಾಸಕರು ಬೆಳಗಾವಿಯ ವಿಧಾನ ಮಂಡಲ ಅಧಿವೇಶನದಲ್ಲಿ ಹೈದರಾಬಾದ್ – ಕರ್ನಾಟಕ 371 ಜೆ ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದ ಸಮಸ್ಯೆ -ಸವಾಲುಗಳನ್ನು ಕುರಿತು ಮಾತನಾಡುತ್ತಾ, ಪ್ರಾದೇಶಿಕವಾಗಿ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗಾಗಿ ಅನುದಾನ ನೀಡಿ, ಅಭಿವೃದ್ಧಿಗೆ ಗಮನ ಹರಿಸಲು ಧ್ವನಿ ಎತ್ತಿರುವೆ ಎಂದರು. ಹಾಗೆಯೇ ನಮ್ಮ ಭಾಗದ 25 ಕ್ಕಿಂತ ಹೆಚ್ಚಿನ ಶಾಸಕರು ಮತ್ತು ಸಚಿವರು ನನಗೆ ಅಭಿನಂದನೆಗಳು ತಿಳಿಸಿದರು. ಆ ಹಿನ್ನೆಲೆಯಲ್ಲಿ ಕೆ.ಕೆ. ಆರ್. ಡಿ. ಬಿ. ಅಧ್ಯಕ್ಷರಾದ ಮಾನ್ಯ ಡಾ. ಅಜಯ್ ಸಿಂಗ್ ಅವರನ್ನು ಭೇಟಿ ಮಾಡಿ, ನಮ್ಮ ಕೂಡ್ಲಿಗಿ ಕ್ಷೇತ್ರದ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಕೊಟ್ಟು ಅಭಿವೃದ್ಧಿಗಾಗಿ ಒತ್ತು ಕೊಡಲು ಚರ್ಚಿಸಿದಾಗ, ಅವರು ನಮ್ಮ ಕ್ಷೇತ್ರದ ಅಭಿವೃದ್ಧಿಯ ಮನವಿಗೆ ಸ್ಪಂದಿಸಿ, ಸಹಕರಿಸಿದ್ದಾರೆ ಎಂದೂ ಹೇಳಿದರು.
ನಮ್ಮ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರವೂ, ಚರಿತ್ರೆ ಮತ್ತು ಸಂಸ್ಕೃತಿಗೆ ತುಂಬಾ ಪ್ರಸಿದ್ಧಿಯಾದದ್ದು. ಹಾಗೆಯೇ, ಗುಣಸಾಗರ ಗ್ರಾಮಕ್ಕೆ ಭೇಟಿ ನೀಡಿ ಶಾಲೆಯನ್ನು ಪರಿಶೀಲಿಸಿದಾಗ ಇಲ್ಲಿನ ಮಕ್ಕಳ ಶಾಲಾ ಕೊಠಡಿಗಳು ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವುದನ್ನು ಅರಿತುಕೊಂಡಿರುವೆ. ಆ ಸಂದರ್ಭದಲ್ಲಿ ಸ್ಥಳೀಯ ಮುಖಂಡರು , ಗ್ರಾಮಸ್ಥರು ಮತ್ತು ಶಿಕ್ಷಕರು
ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಸಹಕಾರ ಕೊಟ್ಟು ಅಭಿವೃದ್ಧಿಗೆ ಒತ್ತು ನೀಡಬೇಕು ಎಂದೂ ಮನವಿ ಮಾಡಿದರು.
ಆ ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುದಾನ ತಂದು ಶಾಲೆಯ ಕಟ್ಟಡದ ಭೂಮಿಪೂಜೆಯನ್ನು ನೆರವೇರಿಸಲು ಊರಿಗೆ ಬಂದ ಸಂದರ್ಭದಲ್ಲಿ ಅದನ್ನು ಅಲ್ಲಿಗೆ ಕೈ ಬಿಟ್ಟು, ತಕ್ಷಣ ಎಚ್ಚೆತ್ತುಕೊಂಡು ಅದನ್ನು ಬೇರೆ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡು ಚರಿತ್ರೆ ಮತ್ತು ಸಂಸ್ಕೃತಿಗೆ ಹೆಸರಾದ ಗುಣಸಾಗರ ಗ್ರಾಮದ ಅಭಿವೃದ್ಧಿಗೆ ಹೊಸ ಕಳೆ ತರುವ ನಿಟ್ಟಿನಲ್ಲಿ, ಹಾಗೆಯೇ ಶಾಲಾ ಮಕ್ಕಳಿಗೆ ಆಟದ ಮೈದಾನವನ್ನು ನಿರ್ಮಿಸುವುದರ ಜೊತೆಗೆ ಇಲ್ಲಿನ ಊರಿನ ಮತ್ತು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೊಸದಾಗಿ ಶಾಲೆಯ ನಿರ್ಮಾಣಕ್ಕಾಗಿ ಜಾಗವನ್ನು ಸಿದ್ಧಪಡಿಸಿಕೊಂಡಿದ್ದೇವೆ. ಹಾಗೆಯೇ ಸರ್ಕಾರದ ಮಟ್ಟದಲ್ಲಿ ಅನುದಾನ ತಂದು ಈ ದಿನ ಈ ಸುಂದರ ಪರಿಸರದಲ್ಲಿ ಶಾಲೆಯ ನಿರ್ಮಾಣಕ್ಕಾಗಿ ಎಲ್ಲರ ಸಮ್ಮುಖದಲ್ಲಿ ಭೂಮಿಪೂಜೆಯನ್ನು ನೆರವೇರಿಸಿದ್ದೇವೆ ಎಂದರು. ಇದರ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಹಕಾರ ಕೊಡುತ್ತೇನೆ ಎಂದೂ ಹೇಳಿದರು.
ಹಾಗೆ ನೋಡಿದರೆ ನಮ್ಮ ಕ್ಷೇತ್ರದ ಪ್ರತಿ ಶಾಲೆಗೆ ಆಟದ ಮೈದಾನದ ಕೊರತೆಯೂ ಇದೆ ಎಂದೂ ನೆನಪಿಸಿಕೊಂಡರು. ಇನ್ನೂ, ನಮ್ಮ ಕ್ಷೇತ್ರದ ಐತಿಹಾಸಿಕ ಸ್ಥಳಗಳ ಹಿರಿಮೆಯನ್ನು ಹೊಂದಿರುವ ಹಳ್ಳಿಗಳ ಅಭಿವೃದ್ಧಿಗೆ ಯಾವುದೇ ಭೇದ ಭಾವ ಇಲ್ಲದೇ ಒತ್ತು ಕೊಡುತ್ತೇವೆ ಎಂದರು. ಕೆಲವು ದಿನಗಳಲ್ಲಿ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಕಾರಿಗಳು ನೇತೃತ್ವದಲ್ಲಿ, ಮುಖಂಡರ ಸಹಕಾರದೊಂದಿಗೆ ಮತ್ತು ನಮ್ಮ ಕಛೇರಿಯ ತಂಡದೊಂದಿಗೆ ಪ್ರತಿ ಮನೆಯ ಕುಂದುಕೊರತೆಗಳನ್ನು ಆಲಿಸಿ ಅದರ ಪ್ರತಿಯೊಂದು ಮಾಹಿತಿಯನ್ನು ಸಮೀಕ್ಷೆ ಮಾಡಿ ಸಂಗ್ರಹಿಸಿಕೊಂಡು ಸರ್ವ ರೀತಿಯಲ್ಲಿ ಬಡವರ ಅಭಿವೃದ್ಧಿಗೆ ಒತ್ತು ಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಶಿಕ್ಷಣ ಅಧಿಕಾರಿಗಳಾದ ಶ್ರೀ ಪದ್ಮನಾಭಕರಣಂ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ರಾಜಣ್ಣ, ಸೂಲದಹಳ್ಳಿ ಗ್ರಾ. ಪಂ. ಅಧ್ಯಕ್ಷರಾದ ರತ್ನಮ್ಮ, ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಮಂಜುನಾಥ, ಎ. ಪಿ. ಎಂ.ಸಿ. ಮಾಜಿ ಅಧ್ಯಕ್ಷರಾದ ತಮ್ಮಣ್ಣ ಎನ್.ವಿ, ಮುಖಂಡರಾದ ಡಾ. ಹುಲಿಕೆರೆ ಓಂಕಾರಪ್ಪ, ಶೇಖರಪ್ಪ, ಗಪ್ಪಣ್ಣ, ಕಲ್ಲೇಶ, ಮಲ್ಲೇಶ, ಮಯೂರು ಮಂಜುನಾಥ, ಮಾಜಿ ಗ್ರಾ. ಪಂ. ಅಧ್ಯಕ್ಷರಾದ ಪಾತ್ರಿ ಸಿದ್ದಪ್ಪ, ಬಸವರಾಜ, ಹನುಮಂತ, ಮಲ್ಲಿಕಾರ್ಜುನ, ಚಿತ್ತಪ್ಪ, ತಿಮ್ಮಣ್ಣ, ಶಾಲೆಯ ಭೂಮಿಯ ಧಾನಿಗಳ ಸಂಬಂಧಿಕರಾದ ಭೀಮಪ್ಪರ ಕರಿಯಣ್ಣ, ಶಾಲೆಯ ಮುಖ್ಯ ಗುರುಗಳು, ಸಹ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ಊರಿನ ಹಿರಿಯರು, ಗ್ರಾಮಸ್ಥರು, ಮಹಿಳೆಯರು, ಯುವಕರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ




















