ಕೊಟ್ಟೂರು : ಪಟ್ಟಣದ ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಬರಗಾಲ ನಿರ್ವಹಣೆಯ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ ನೇಮಿರಾಜ ನಾಯ್ಕ ಇವರು ಮುಂಗಾರಿನಲ್ಲಿ ಮಳೆಯ ಪ್ರಮಾನ ಅತ್ಯಂತ ಕಡಿಮೆ ಇದ್ದು, ಬರಗಾಲದ ಲಕ್ಷಣಗಳು ಗೋಚರಿಸಿದ್ದು, ಮುಂದಿನ ದಿನಗಳಲ್ಲಿ ಬರ ನಿರ್ವಹಣೆಯಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ನಿರ್ಲಕ್ಷತೆ ವಹಿಸದಂತೆ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ಸಹಾಯಕ ಕೃಷಿ ನಿರ್ದೇಶಕರಾದ ತೇಜವರ್ಧನ್ ಜೂನ್-ಜುಲೈ ನಲ್ಲಿ 107.2 ಮಿ.ಮೀ ಆಗಬೇಕಿದ್ದು, ಹಾಲೀ 43.5 ಮಾತ್ರ ಆಗಿರುತ್ತದೆ.
ಶೇ 59 ಕೊರತೆಯಾಗಿರುತ್ತದೆ. ಈಬಾರಿ 14266 ಹೆಕ್ಟೇರ್ ಬಿತ್ತನೆಯಾಗಿದ್ದು, 20035 ಹೆಕ್ಟೇರ್ ಬಿತ್ತನೆಯಾಗಿರುವುದಿಲ್ಲ. ಬಿತ್ತನೆ ಕೇವಲ ಶೇ.42 ಮಾತ್ರ ಆಗಿರುತ್ತದೆ ಎಂದು ತಿಳಿಸಿದರು. ಆದ್ದರಿಂದ ಪರ್ಯಾಯ ಬೆಳೆಗಳಾದ ರಾಗಿ, ನವಣೆ, ಸಜ್ಜೆ, ಸೂರ್ಯಕಾಂತಿ ಬಿತ್ತನೆ ಮಾಡುವಂತೆ ಸಲಹೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಕುಬೇರಾಚಾರಿ ಇವರು ತೋಟಗಾರಿಕೆ ಬೆಳೆಗಳನ್ನು 716 ಹೆಕ್ಟರ್ನಲ್ಲಿ 315 ಹೆಕ್ಟೇರ್ ಬಿತ್ತನೆಯಾಗಿದೆ. ಟೊಮೋಟ, ಮೆಣಸಿನಕಾಯಿ, ಈರುಳ್ಳಿ, ಮಿಡಿಸೌತೆ ಬೆಳೆದಿರುತ್ತಾರೆ. ರೈತರು ರೈತ ಆಪ್ ನಲ್ಲಿ ಮಾಹಿತಿಯನ್ನು ನೀಡಬೇಕಿದೆ ಎಂದು ತಿಳಿಸಿದ್ದಕ್ಕೆ ರೈತರಿಗೆ ಮಾಹಿತಿ ಕೊರತೆ ಇರುತ್ತದೆ. ಆದ್ದರಿಂದ ನಿಮ್ಮ ಇಲಾಖೆಯವರಿಂದ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ರೈತರು ಸೋಲಾರ್ ವಿದ್ಯುತ್ ನ್ನು ಅಳವಡಿಸಿಕೊಳ್ಳಲು ವ್ಯಾಪಕ ಪ್ರಚಾರ ಮಾಡಬೇಕು. ಇದರಿಂದಾಗಿ ರೈತರಿಗೆ ವಿದ್ಯುತ್ ನಿಲುಗಡೆಯ ಸಮಸ್ಯೆಯಿಂದ ಆಗುವ ತೊಂದರೆ ತಪ್ಪುತ್ತದೆ ಎಂದು ತಿಳಿಸಿದರು. ರೇಷ್ಮೆ ವಿಸ್ತರಣಾಧಿಕಾರಿ ರಾಜಾಭಕ್ಷಿ ಇವರು ಕೊಟ್ಟೂರು ತಾಲೂಕಿನಲ್ಲಿ 110 ಹೆಕ್ಟೇರ್ ರೇಷ್ಮೆ ಬೆಳೆ ಗುರಿ ಇದ್ದು, 20 ಹೆಕ್ಟೇರ್ ಬೆಳೆದಿರುತ್ತಾರೆ. ರಾಂಪುರ, ಚಿರಿಬಿ ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆಯುತ್ತಿದ್ದು, ಕೊಟ್ಟೂರು-ಕೂಡ್ಲಿಗಿ ಭಾಗದ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿಸಿದರು. ಮುಖ್ಯ ಪಶು ವೈಧ್ಯಾಧಿಕಾರಿಗಳಾದ ಡಾ.ಚಂದ್ರಾನಾಯ್ಕ ಇವರು ಕೊಟ್ಟೂರು ತಾಲೂಕಿನಲ್ಲಿ ಪ್ರತಿ ದಿನಕ್ಕೆ 157 ಟನ್ ಮೇವು ಬೇಕಾಗುತ್ತದೆ. ಹಾಲೀ ನಾಲ್ಕು ತಿಂಗಳವರೆಗೆ ಸಾಕಾಗುವಷ್ಟು ಮೇವು ಲಭ್ಯವಿದ್ದು, ಡಿಸೆಂಬರ್-ಜನವರಿಯಿಂದ ಸಮಸ್ಯೆ ಬರಬಹುದು. ಕುರಿಗಳಿಗೆ ಜಂತುನಾಶಕವನ್ನು ನೊಂದಣಿಯಾದವರಿಗೆ ಮಾತ್ರ ನೀಡಲಾಗುತ್ತಿದೆ. 2000 ಮಿನಿ ಕಿಟ್ ಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಸೆ ಬಗ್ಗೆ ಮಾಹಿತಿಯನ್ನು ಪಡೆಯಲಾಗಿ ಮುಖ್ಯಾಧಿಕಾರಿಗಳು ಪಟ್ಟಣದಲ್ಲಿ ವಿದ್ಯುತ್ ತೊಂದರೆಯಿಂದ ವ್ಯತ್ಯಯವಾಗುತ್ತಿದೆ ಎಂದು ತಿಳಿಸಲಾಗಿ ಜೆಸ್ಕಾಂ ಎಇಇ ನಾಗರಾಜ ಇವರಿಗೆ ಕೂಡಲೇ 63 ಕೆವಿ ಟಿಸಿಯನ್ನು ನೀಡಿ ಸದರಿ ಸಮಸ್ಯೆಯನ್ನು ಬಗೆಹರಿಸುವಂತೆ ತಿಳಿಸಿದರು.
ಪ್ರತಿಯೊಂದು ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಆಲಿಸಿ ಕೂಡಲೇ ವ್ಯವಸ್ಥೆಯನ್ನು ಮಾಡುವಂತೆ ಎಇಇ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಪ್ರಸನ್ನ ಬಿ ಆರ್ ಇವರಿಗೆ ಸೂಚಿಸಿದರು.
ಪಿಡಿಒ ರವರು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿ ವಾಸವಾಗಿದ್ದು, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮುನ್ನೆಚ್ಚರಿಕೆಯನ್ನು ಕೈಗೊಳ್ಳಬೇಕು. ಇ-ಸ್ವತ್ತನ್ನು ನೇರವಾಗಿ ಎ ಖಾತಾ ನೀಡುವಂತೆ ಸಲಹೆ ನೀಡಿದರು. ಸಾರ್ವಜನಿಕರಿಂದ ದೂರು ಬಾರದ ರೀತಿಯಲ್ಲಿ ಕರ್ತವ್ಯವನ್ನು ನಿರ್ವಹಿಸಬೇಕು. ಬರ ನಿರ್ವಹಣೆಯಲ್ಲಿ ಯಾರೂ ನಿರ್ಲಕ್ಷ್ಯತನವನ್ನು ತೋರುವಂತಿಲ್ಲ ಎಂದು ಎಚ್ಚರಿಕೆಯನ್ನು ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಅಮರೇಶ್ ಜಿ ಕೆ, ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ ಆನಂದ ಕುಮಾರ್, ಮುಖ್ಯಾಧಿಕಾರಿ ಎ ನಸರುಲ್ಲಾ, ತಾಲೂಕು ವೈಧ್ಯಾಧಿಕಾರಿ ಪ್ರದೀಪ್, ನರೇಗಾ ಎಡಿ ಹೆಚ್ ವಿಜಯಕುಮಾರ್, ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಒ, ಕಂದಾಯ ನಿರೀಕ್ಷಕ ಡಿ ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ ನಿರ್ವಹಿಸಿದರು.
ವರದಿ: ಕೆ. ಗೋಣೆಪ್ಪ




















